ಮಳವಳ್ಳಿ ತಾಲೂಕಿಗೆ ಶನಿವಾರ ಬೆಳಿಗ್ಗೆ ಆಗಮಿಸಿದ ಕನ್ನಡ ರಥಕ್ಕೆ ಗಡಿ ಗ್ರಾಮವಾದ ನೆಲಮಾಕನಹಳ್ಳಿ ಬಳಿ ತಾಲೂಕು ಆಡಳಿತದ ವತಿಯಿಂದ ಅದ್ದೂರಿ ಸ್ವಾಗತ ಕೋರಲಾಯಿತು.
ಮದ್ದೂರು ಮಾರ್ಗವಾಗಿ ಮಳವಳ್ಳಿ ತಾಲೂಕಿಗೆ ಆಗಮಿಸಿದ ಕನ್ನಡ ರಥಕ್ಕೆ ನೆಲಮಾಕನಹಳ್ಳಿ ಗೇಟ್ ಬಳಿ ಹಾಜರಿದ್ದ ತಹಶೀಲ್ದಾರ್ ಲೋಕೇಶ್ ಅವರು ಮದ್ದೂರು ತಹಸೀಲ್ದಾರ್ ಅವರಿಂದ ಬರ ಮಾಡಿಕೊಂಡರು.
ಪೂಜಾ ಕುಣಿತ ಸೇರಿ ಹಲವಾರು ಜಾನಪದ ಕಲಾ ತಂಡಗಳ ಜೊತೆ ಪೂರ್ಣ ಕುಂಭ ಕಳಸ ಹೊತ್ತ ಮಹಿಳೆಯರ ಭವ್ಯ ಸ್ವಾಗತ ಕೋರಲಾಯಿತು. ನಂತರ ಪಟ್ಟಣ ಪ್ರವೇಶಿಸಿದ ಕನ್ನಡ ರಥಕ್ಕೆ ಇಲ್ಲಿನ ಪುರಸಭಾ ಕಚೇರಿ ಮುಂಭಾಗ ಮುಖ್ಯಾಧಿ ಕಾರಿ ನಾಗರತ್ನ ಅವರ ನೇತೃತ್ವದ ಅಧಿಕಾರಿಗಳ ತಂಡ ಕನ್ನಡಾಂಭೆಯ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.
ಈ ವೇಳೆ ತಾ ಪಂ ಇಒ ಶ್ರೀನಿವಾಸ್ , ಬಿಇಒ ಚಂದ್ರಪಾಟೀಲ್, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ಪುರಸಭಾ ಮುಖ್ಯಾಧಿಕಾರಿ ನಾಗರತ್ನ, ಬಿಸಿಎಂ ಅಧಿಕಾರಿ ನಾಗರಾಜು, ಗ್ರಾ ಪಂ ಅಧ್ಯಕ್ಷ ಸಿದ್ದಯ್ಯಎನ್ ಎಸ್ ಸೇರಿದಂತೆ ತಾಲೂಕು ಅಧಿಕಾರಿಗಳ ತಂಡದ ಜೊತೆಗೆ ತಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚೇತನ್ ಕುಮಾರ್, ಪ್ರಾಂತ ರೈತ ಸಂಘದ ಭರತ್ ರಾಜ್, ಕರ್ನಾಟಕ ರಕ್ಷಣಾ ವೇದಿಕೆಯ ಅಪ್ಪೇಗೌಡ ಸೇರಿದಂತೆ ಹಲವಾರು ಮುಖಂಡರು ಹಾಗೂ ಕನ್ನಡ ಪರ ಸಂಘಟನೆಗಳ ಪದಾಧಿಕಾರಿ ಗಳು ಹಾಜರಿದ್ದು ಕನ್ನಡಾಂಬೆಗೆ ಹಾರ ಹಾಕಿ ಪುಷ್ಪಾರ್ಚನೆ ಮಾಡಿ ಸ್ವಾಗತ ಕೋರಿದರು.
ನಂತರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿದ ಕನ್ನಡ ರಥದ ಜೊತೆಗೆ ಶಾಲಾ ಮಕ್ಕಳು ಅಧಿಕಾರಿಗಳು ಹೆಜ್ಜೆ ಹಾಕಿದರು.