ರೈತರು ಯಂತ್ರ ಶ್ರೀ ಭತ್ತದ ಕೃಷಿ ಅನುಷ್ಠಾನ ಮಾಡುವುದರಿಂದ ತುಂಬಾ ಅನುಕೂಲವಾಗುತ್ತದೆ, ಯಂತ್ರದ ಮೂಲಕ ಸಾಲು ಪದ್ದತಿಯಲ್ಲಿ ನಾಟಿ ಮಾಡುವುದರಿಂದ ಉತ್ತಮವಾದ ಗಾಳಿ ಬೆಳಕು ಆಡುವುದರಿಂದ ರೋಗ ಬರುವುದು ಕಡಿಮೆ, ಆದರಿಂದ ಎಲ್ಲ ರೈತರು ಯಂತ್ರ ಶ್ರೀ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಿ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸೌಮ್ಯಶ್ರೀ ಸಲಹೆ ನೀಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಮಂಡ್ಯ ತಾಲೂಕಿನ ಸುಭಾಷ್ ನಗರದ ರೈತ ಉಮೇಶ್ ಅವರ ಜಮೀನಿನಲ್ಲಿ ಯಂತ್ರ ಶ್ರೀ ಭತ್ತದ ಸಸಿ ಮಡಿ ತಯಾರಿಕೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಭತ್ತದ ನಾಟಿಯ ಸಂದರ್ಭದಲ್ಲಿ ರಾಸಾಯನಿಕ ಕಡಿಮೆ ಬಳಕೆ ಮಾಡಿ, ಸಾವಯವ ಬಳಕೆ ಮಾಡಿ ಮಣ್ಣು ಉಳಿಸಿ ಎಂದ ಅವರು, ಹೊಸದಾಗಿ 5 ಎಕರೆಯಲ್ಲಿ ಯಂತ್ರ ಶ್ರೀ ಅನುಷ್ಠಾನ ಮಾಡುತ್ತಿರುವ ರುದ್ರೇಶ್ ಎಂಬ ರೈತರಿಗೆ ಸಸಿ ಮಾಡಿ ತಯಾರಿಸಲು ಟ್ರೇ ಗಳನ್ನು ವಿತರಿಸಿದರು.
ಮಂಡ್ಯ ರಾಮನಗರ ವಿಭಾಗೀಯ ಕೃಷಿ ಯಂತ್ರಧಾರೆಯ ಯೋಜನಾಧಿಕಾರಿ ಚೇತನ್ ಮಾತನಾಡಿ, ಹಿಂಗಾರು ಹಂಗಾಮು ಪ್ರಾರಂಭವಾಗುತ್ತಿದ್ದು, ಹೆಚ್ಚಿನ ರೈತರು ಯಂತ್ರ ಶ್ರೀ ಎಂಬ ಈ ಕಾರ್ಯಕ್ರಮವನ್ನು ತಮ್ಮ ಜಮೀನಿನಲ್ಲಿ ಅಳವಡಿಸಿಕೊಳ್ಳಿ ಇದರಿಂದ ಖರ್ಚು ಕಡಿಮೆ ಇಳುವರಿಯಲ್ಲಿ ನೀವು ಆದಾಯವನ್ನು ಕಾಣಬಹುದು ಎಂದರು.
ಕೂಲಿ ಆಳುಗಳ ಸಮಸ್ಯೆ ನಿವಾರಣೆ ಆಗುತ್ತದೆ, ಕಳೆದ ಮೂರು ವರ್ಷಗಳಿಂದ ಮಂಡ್ಯ ತಾಲೂಕಿನಲ್ಲಿ ಈ ಕಾರ್ಯಕ್ರಮವನ್ನು ಅಳವಡಿಸಿಕೊಂಡು ರೈತರು ಯಶಸ್ಸು ಕಂಡಿದ್ದಾರೆ, ಎಲ್ಲಾ ರೈತರು ಯಂತ್ರ ಶ್ರೀ ಕಾರ್ಯಕ್ರಮವನ್ನು ಅಳವಡಿಸಿಕೊಳ್ಳಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಕೃಷಿ ಯಂತ್ರಧಾರೆಯ ಅಭಿಯಂತರ ಮೋಕ್ಷಿತ್, ರೈತರಾದ ಉಮೇಶ್, ಶಿವನಂಜು, ರುದ್ರೇಶ್ ನಾಗು, ನಂಜೇಗೌಡ, ತಮ್ಮಣ್ಣ, ಅನಿಲ್, ಯಂತ್ರ ಶ್ರೀ ಕೃಷಿ ಮೇಲ್ವಿಚಾರಕ ನವೀನ್ ಕುಮಾರ್ ಉಪಸ್ಥಿತರಿದ್ದರು