ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಘಟನೆಗಳನ್ನು ನೋಡಿದರೆ, ಮುಖ್ಯಮಂತ್ರಿ ಗಾದಿಯಿಂದ ಯೋಗಿ ಆದಿತ್ಯ ನಾಥ್ ಕೆಳಗಿಳಿಸಲು ದೊಡ್ಡ ಪಿತೂರಿ ನಡೆಯುತ್ತಿದೆ ಎಂದು ಭಾಸವಾಗದೆ ಇರದು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಕೇವಲ 33 ಸ್ಥಾನಗಳಿಗೆ ಕುಸಿದು ಹಿನ್ನಡೆ ಅನುಭವಿಸಿದ ನಂತರ ಸಿಎಂ ಸ್ಥಾನದಿಂದ ಯೋಗಿ ಆದಿತ್ಯನಾಥ್ ಅವರನ್ನು ಕೆಳಗಿಳಿಸಲು ದೊಡ್ಡ ಮಟ್ಟದ ಪ್ರಯತ್ನ ಆರಂಭವಾಗಿದೆ ಎನಿಸುತ್ತಿದೆ.
ಉತ್ತರಪ್ರದೇಶದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಭೂಪೇಂದ್ರ ಸಿಂಗ್ ಚೌಧರಿ ಅವರು ನಿನ್ನೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆ ಅನುಭವಿಸಿದ ಕಾರಣ ನೈತಿಕ ಹೊಣೆ ಮತ್ತು ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.ಅಲ್ಲದೆ ಲೋಕಸಭಾ ಚುನಾವಣೆಯಲ್ಲಿ ಆದ ಹಿನ್ನಡೆಗೆ ಸಿಎಂ ಯೋಗಿ ಆದಿತ್ಯನಾಥ್ ಕಾರಣ ಎಂದು ದೂರಿದ್ದಾರೆ.
ಅಲ್ಲದೆ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ದಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಯೋಗಿ ಆದಿತ್ಯನಾಥ್ ಆಡಳಿತದ ಬಗ್ಗೆ ಅಸಮಧಾನ ಸೂಚಿಸಿದ್ದಾರೆ. ಯೋಗಿ ಆದಿತ್ಯನಾಥ್ ಅವರೊಂದಿಗೆ ತೀವ್ರ ಭಿನ್ನಾಭಿಪ್ರಾಯ ಹೊಂದಿರುವ ಕೇಶವ್ ಪ್ರಸಾದ್ ಮೌರ್ಯ ಆದಿತ್ಯನಾಥ್ ಮತ್ತು ನಡ್ಡಾ ಇದ್ದ ಸಭೆಯಲ್ಲಿಯೇ ‘ಸಂಘಟನೆಯು ಸರ್ಕಾರಕ್ಕಿಂತಲೂ ದೊಡ್ಡದು, ಸಂಘಟನೆಗಿಂತ ಯಾರೂ ದೊಡ್ಡವರಲ್ಲ ಎಂದು ಯೋಗಿ ಆದಿತ್ಯನಾಥ್ ಅವರನ್ನು ಉದ್ದೇಶಿಸಿಯೇ ಮಾತನಾಡಿದ್ದಾರೆ.
ಉತ್ತರ ಪ್ರದೇಶದಲ್ಲಿ ಯೋಗಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸಿಡಿದೆದ್ದಿರುವ ಪಕ್ಷದ ರಾಜ್ಯ ಘಟಕದ ಭೂಪೇಂದ್ರ ಸಿಂಗ್ ಚೌಧರಿ ಹಾಗೂ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರ ಈ ನಡೆಯ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಇದ್ದಾರೆ ಎನ್ನುವ ಮಾತುಗಳು ಯೋಗಿ ಆದಿತ್ಯನಾಥ್ ಬೆಂಬಲಿಗರಲ್ಲಿದೆ.
ಉತ್ತರ ಪ್ರದೇಶದಲ್ಲಿ ಮೋದಿಗಿಂತಲೂ ಯೋಗಿಯೇ ಹೆಚ್ಚು ಪ್ರಬಲ.ಇದಕ್ಕೆ ವಾರಣಾಸಿಯಲ್ಲಿ ಮೋದಿ ಪಡೆದ ಮತಗಳ ಪ್ರಮಾಣ ಭಾರೀ ಇಳಿಕೆ ಕಂಡಿರುವುದೇ ಕಾರಣ.ಅಂತಹ ಹಿಂದುತ್ವದ ಫೈರ್ ಬ್ರಾಂಡ್ ಯೋಗಿ ಆದಿತ್ಯನಾಥ್ ವಿರುದ್ಧ ದೊಡ್ಡ ಮಟ್ಟದ ನಾಯಕರ ಬೆಂಬಲವಿಲ್ಲದೆ ಭೂಪೇಂದ್ರ ಸಿಂಗ್ ಚೌಧರಿ ಹಾಗೂ ಕೇಶವ್ ಪ್ರಸಾದ್ ಮೌರ್ಯ ದನಿ ಎತ್ತಲು ಸಾಧ್ಯವಿಲ್ಲ ಎಂಬುದು ಬಿಜೆಪಿ ವಲಯದಲ್ಲಿ ಚರ್ಚೆಯಾಗುತ್ತಿರುವ ಸಂಗತಿ.
ಸದ್ಯದಲ್ಲಿಯೇ ಉತ್ತರ ಪ್ರದೇಶದ 10 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಈ ಚುನಾವಣೆಯಲ್ಲಿಯೂ ಹಿನ್ನಡೆಯಾದರೆ ಸಿಎಂ ಯೋಗಿ ಆದಿತ್ಯನಾಥ್ ಅವರ ಸಿಎಂ ಕುರ್ಚಿಗೆ ಸಂಚಕಾರ ಬಂದೊದಗುವುದು ಶತಃಸಿದ್ಧ ಎಂಬುದು ರಾಜಕೀಯ ಪಂಡಿತರ ಮಾತು.