ಬೆಂಗಳೂರಿನ ವಿಧಾನ ಸೌಧದ ಪಶ್ವಿಮ ದ್ವಾರದಲ್ಲಿ ಅನಧಿಕೃತವಾಗಿ ಸಿಕ್ಕ 10.50 ಲಕ್ಷ ನಗದು ಹಣದ ಸಮೇತ ಮಂಡ್ಯ ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್ ಜಗದೀಶ್ ಅವರನ್ನು ಬಂಧಿಸಲಾಗಿದೆ.
ಜ.4 ರ ಸಂಜೆ 7 ಗಂಟೆಗೆ ಪಿಡಬ್ಲೂಡಿ ಎಇ ಜಗದೀಶ್ 10.50 ಲಕ್ಷ ರೂ.ಹಣದೊಂದಿಗೆ ವಿಧಾನ ಸೌಧಕ್ಕೆ ತೆರಳಿದ್ದು,ಅಲ್ಲಿ ಭದ್ರತಾ ಸಿಬ್ಬಂದಿ ಪರಿಶೀಲನೆ ಮಾಡಿದಾಗ ಹಣ ಪತ್ತೆಯಾಗಿದೆ. ಆ ಸಂದರ್ಭದಲ್ಲಿ ಪೋಲಿಸರು ಹಣದ ಮೂಲದ ಬಗ್ಗೆ ಪ್ರಶ್ನೆ ಮಾಡಿದಾಗ ಯಾವುದೇ ಸ್ಪಷ್ಟ ಉತ್ತರ ನೀಡಿಲ್ಲ. ಬಳಿಕ ಪೊಲೀಸರು ವ್ಯಕ್ತಿಯನ್ನು ವಶಕ್ಕೆ ಪಡೆದು, ಹಣವನ್ನು ವಶಪಡಿಸಿಕೊಂಡು ಎಫ್ಐಆರ್ ದಾಖಲಿಸಲಾಗಿದೆ. ಇದೀಗ ಹಣದ ಮೂಲ ಹುಡುಕುವಲ್ಲಿ ಪೊಲೀಸರು ಮುಂದಾಗಿದ್ದಾರೆ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ತನಿಖೆ ನಡೆಸುತ್ತಿದ್ದಾರೆ.
ಸಚಿವರಿಗೆ ಲಂಚ?
ವಿಧಾನಸೌಧದಲ್ಲಿ ಇಷ್ಟೊಂದು ದೊಡ್ಡ ಮೊತ್ತದೊಂದಿಗೆ ಹಣ ಸಿಕ್ಕಿ ದ್ದು ,ಸಹಜವಾಗಿಯೇ ಅನುಮಾನ ಮೂಡಿಸಿದೆ. ಈ ಹಿಂದೆಯೂ ಹಲವು ಬಾರಿ ವಿಧಾನಸೌಧದಲ್ಲಿ ಹಣ ಪತ್ತೆಯಾಗಿದೆ. ಆದರೆ ಯಾರಿಗೂ ಶಿಕ್ಷೆಯಾಗಿಲ್ಲ. ಈ ಹಣವನ್ನು ವರ್ಗಾವಣೆಯ ಹಿನ್ನೆಲೆಯಲ್ಲಿ ಸಚಿವರು,ಅಧಿಕಾರಿಗಳಿಗೆ ಲಂಚ ನೀಡಲು ತೆಗೆದುಕೊಂಡು ಹೋಗಿರುವ ಅನುಮಾನವಿದ್ದು, ಪೋಲಿಸರು ನಿಷ್ಪಕ್ಷಪಾತವಾಗಿ ತನಿಖೆ ಮಾಡಿ ಸತ್ಯ ಬಯಲು ಮಾಡುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.
ಹಣ ಕೋರ್ಟ್ ವಶಕ್ಕೆ
ಈ ಹಣದ ಬಗ್ಗೆ ಪೊಲೀಸರು ದಾಖಲೆ ಕೇಳಿದ್ದಾರೆ. ಈ ವೇಳೆ ಕೆಲವು ಬಿಲ್ ಕ್ಲಿಯರ್ ಮಾಡಲು ಹಣ ತೆಗೆದುಕೊಂಡು ಹೋಗುತ್ತಿದ್ದಾಗಿ ಇಂಜಿನಿಯರ್ ತಿಳಿಸಿದ್ದಾರೆ. ಆದರೆ, ಹಣಕ್ಕೆ ಯಾವುದೇ ಬಿಲ್ ಇಲ್ಲದ ಹಿನ್ನೆಲೆ ಪೊಲೀಸರು ಹಣ ಜಪ್ತಿ ಮಾಡಿದ್ದಾರೆ. ವಿಧಾನಸೌಧ ಠಾಣೆಯಲ್ಲಿ ಎನ್ ಸಿಆರ್ ದಾಖಲು ಮಾಡಲಾಗಿದ್ದು, ನಂತರ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಹಣವನ್ನು ಪೊಲೀಸರು ಕೋರ್ಟ್ ಗೆ ವಶಕ್ಕೆ ಸಲ್ಲಿಸಿದ್ದಾರೆ. ಹಣದ ದಾಖಲೆ ನೀಡಿ ಕೋರ್ಟ್ ನಿಂದಲೇ ಹಣವನ್ನು ಬಿಡಿಸಿಕೊಳ್ಳಲು ಪೊಲೀಸರು ಇಂಜಿನಿಯರ್ ಜಗದೀಶನಿಗೆ ಸೂಚನೆ ನೀಡಿದ್ದಾರೆ.
ದಾಖಲೆಗಳಿಲ್ಲ ಹಣ
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇಂದ್ರ ವಿಭಾಗ ಡಿಸಿಪಿ ಶ್ರೀನಿವಾಸ ಗೌಡ ಅವರು, ವಿಧಾನ ಸೌಧ ಮತ್ತು ವಿಕಾಸ ಸೌಧ ಭದ್ರತಾ ಸಿಬ್ಬಂದಿ ದಾಖಲೆಯಿಲ್ಲದ ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
PWD ಇಲಾಖೆಯ ಜೂನಿಯರ್ ಇಂಜಿನಿಯರ್ ಓರ್ವ ಹಣದ ಸಹಿತ ಬಂಧಿಸಲಾಗಿದೆ. ಈ ವೇಳೆ ಹಣದ ಬಗ್ಗೆ ಪ್ರಶ್ನೆ ಮಾಡಿದಾಗ ಸರಿಯಾದ ಉತ್ತರ ಸಿಕ್ಕಿಲ್ಲ. ಬಳಿಕ ವಿಧಾನ ಸೌಧ ಪೊಲೀಸ್ ಠಾಣೆ ಗೆ ಮಾಹಿತಿ ನೀಡಿ ದೂರು ದಾಖಲಿಸಲಾಗಿದೆ. ಈ ದೂರಿನನ್ವಯ ಕೇಸ್ ದಾಖಲು ಮಾಡಲಾಗಿದೆ. ಹತ್ತು ಲಕ್ಷದ ಐವತ್ತು ಸಾವಿರ ಹಣ ವಶಕ್ಕೆ ಪಡೆಯಲಾಗಿದೆ. ನ್ಯಾಯಾಲಯಕ್ಕೆ ಹಣವನ್ನು ಹಾಜರು ಪಡಿಸಿದ್ದೇವೆ, ಹಣ ತಂದಿದ್ದ ವ್ಯಕ್ತಿಗೆ ನೋಟೀಸ್ ನೀಡಲಾಗಿದೆ. ಎಲ್ಲಿ ಡ್ರಾ ಮಾಡಲಾಗಿದೆ. ಯಾರಿಗೆ ಕೊಡುವ ಉದ್ದೇಶ ಇದೆ ಎಂಬುದನ್ನು ಮಾಹಿತಿ ನೀಡುವಂತೆ ಸೂಚನೆ ನೀಡಲಾಗಿದೆ ಎಂದರು.