ಮಂಡ್ಯ ತಾಲೂಕಿನ ಮೂರು ಕಡೆಗಳಲ್ಲಿ ಪಶು ಆಸ್ಪತ್ರೆಗಳನ್ನು ಸರ್ಕಾರ ಮಂಜೂರು ಮಾಡಿದ್ದು, ಶೀಘ್ರ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಶಾಸಕ ಪಿ. ರವಿಕುಮಾರ್ ತಿಳಿಸಿದರು.
ಮಂಡ್ಯ ಜಿಲ್ಲಾ ಪಂಚಾಯಿತಿ, ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ವತಿಯಿಂದ ನಗರದ ಮುಖ್ಯ ಪಶು ವೈದ್ಯಾಧಿಕಾರಿಗಳ ಕಚೇರಿ ಆವರಣದಲ್ಲಿ ನಡೆದ ರಾಸುಗಳಿಗೆ ನೆಲ ಹೊದಿಕೆ (ಕೌವ್ ಮ್ಯಾಟ್) ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ತಾಲೂಕಿನ ಶಿವಪುರ, ಬಸರಾಳು, ಕೆರಗೋಡು ಗ್ರಾಮಗಳಲ್ಲಿ ಪಶು ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಸರ್ಕಾರ ಮಂಜೂರಾತಿ ನೀಡಿದೆ, ಈಗಾಗಲೇ ಅನುದಾನ ವನ್ನೂ ಬಿಡುಗಡೆ ಮಾಡಿದೆ, ಶೀಘ್ರ ಕಟ್ಟಡ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಮಂಡ್ಯ ತಾಲೂಕಿ ಆಲಕೆರೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಪಶು ಆಸ್ಪತ್ರೆ ಕಟ್ಟಡವನ್ನೂ ಶೀಘ್ರ ಉದ್ಘಾಟಿಸಲಾಗುವುದು, ಅದನ್ನು ಸಾರ್ವಜನಿಕ ಸೇವೆಗೆ ನೀಡಲಾಗುವುದು ಎಂದು ತಿಳಿಸಿದರು.
ಸರ್ಕಾರದ ಇತರೆ ಇಲಾಖೆಗಳಿಗೆ ಹೋಲಿಸಿದರೆ ಪಶುಪಾಲನೆ ಇಲಾಖೆ ತುಂಬಾ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಶುಗಳಿಗೆ ಸಂಬಂಧಸಿದಂತೆ ಯಾವುದೇ ಸಮಸ್ಯೆಗಳು ರೈತರಿಂದ ಬಂದಲ್ಲಿ ಅಂತಹ ಮಾಹಿತಿ ಪಡೆದು ಒಂದು ಗಂಟೆಯೊಳಗೆ ಪಶುಪಾಲನಾ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನೆಡಸಿ ಸಮಸ್ಯೆ ಬಗೆಹರಿಸುತ್ತಾರೆ. ಬಳಿಕ ನನಗೆ ವರದಿಯನ್ನೂ ನೀಡುತ್ತಾರೆ ಎಂದು ಶ್ಲಾಘಿಸಿದರು.
ಪಶುಗಳಿಗೆ ಏನಾದರೂ ಸಮಸ್ಯೆಯಾದಲ್ಲಿ ಸ್ಪಂದಿಸಬೇಕಾದದ್ದು ನಮ್ಮ ಕರ್ತವ್ಯ, ಮೂಕ ಪ್ರಾಣಿಗಳ ಅಳಲಿಗೆ ಪಶು ಇಲಾಖೆ ಸ್ಪಂದಿಸುತ್ತಿದೆ ಎಂದು ಹೇಳಿದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ.ಎನ್.ಎಂ ಸಿದ್ದರಾಮು, ಸಹಾಯಕ ನಿರ್ದೇಶಕ ಡಾ. ರಮೇಶರಾಜು, ವೈದ್ಯಾಧಿಕಾರಿ ಡಾ. ತ್ರಿನೇಶ್, ನಗರಸಭೆ ಸದಸ್ಯರಾದ ನಹೀಂ, ನಾಗೇಶ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.