Saturday, May 4, 2024

ಪ್ರಾಯೋಗಿಕ ಆವೃತ್ತಿ

ಪ್ರಧಾನಿ ಮೋದಿಯವರಿಗೆ ಮಹಿಳೆಯರ ಕೆಲವು ಪ್ರಶ್ನೆಗಳು…..?

✍️ ಪೂರ್ಣಿಮಾ, ಮಹಿಳಾ ಮುನ್ನಡೆ

ಬರ ಪರಿಹಾರ ಕೊಡ್ರಿ ಅಂದರೆ, ಗೋಸುಂಬೆ ನಾಟಕ ಆಡುತ್ತಿರುವ ನೀವು ರೈತನನ್ನು, ಸಾಲಗಾರನ್ನಾಗಿ ಮಾಡಿ,ಆತ್ಮ ಹತ್ಯೆಗೆ ಶರಣಾಗುವಂತೆ ಮಾಡುತ್ತಿರುವಾಗ ಅವರ ಹೆಂಡತಿಯರನ್ನು ವಿಧವೆಯರನ್ನಾಗಿ ಮಾಡಿ ಮಂಗಳ ಸೂತ್ರ ಕಸಿಯುತ್ತಿದ್ದೀರಿ ಎನಿಸಲಿಲ್ಲವೇ ಮೋದಿಯವರೇ…?

ದೆಹಲಿಯಲ್ಲಿ ನಡೆದ ರೈತ ಹೋರಾಟದಲ್ಲಿ 800 ಕ್ಕೂ ಹೆಚ್ಚು ಜನ ಪ್ರಾಣ ಕಳೆದು ಕೊಂಡರಲ್ಲ… ಆಗ ಆ ಮನೆಯ ರೈತನ ಹೆಂಡತಿಯ ಮಂಗಳ ಸೂತ್ರವನ್ನು ತಾವು ಕಸಿಯುತ್ತಿದ್ದೀರಾ ಎನಿಸಲಿಲ್ಲವೇ…?

ಲಕ್ಕಿಂ ಕೇರಿಯಲ್ಲಿ ಹೋರಾಟಕ್ಕೆ ಕುಳಿತ ರೈತರ ಮೇಲೆ ನಿಮ್ಮದೆ ಬಿಜೆಪಿ ಪಕ್ಷದ ಮುಖಂಡ ಟ್ರ್ಯಾಕ್ಟರ್ ಹರಿಸಿ ಕೊಂದಾಗ ಅವರ ಹೆಂಡತಿಯರ ಮಂಗಳ ಸೂತ್ರ ಕಸಿದದ್ದು ಇದೇ ನಿಮ್ಮ ಪಕ್ಷದ ಮುಖಂಡರು ಅಂತ ಅನಿಸಲಿಲ್ಲವೋ…?

ಪುಲ್ವಾಮ ದಾಳಿಯಲ್ಲಿ ಸಾಮೂಹಿಕವಾಗಿ ಸೈನಿಕರು ಪ್ರಾಣ ಕಳೆದುಕೊಂಡರಲ್ಲ, ಅಷ್ಟು ಬಿಗಿ ಬಂದೋಬಸ್ತ್ ಇದ್ದ ಜಾಗದೊಳಕ್ಕೆ 320 KG ಬಾಂಬ್ ಹೇಗೆ ಬಂತು ಎಂಬ ತನಿಖೆಯನ್ನೆ ಇಲ್ಲವಾಗಿಸಿದ್ದೀರಲ್ಲ… ಆಗ ತಮಗೆ ಸೈನಿಕರ ಹೆಂಡತಿಯರ ಮಂಗಳ ಸೂತ್ರ ಕಸಿಯುತ್ತಿದ್ದೇವೆ ಎನಿಸಲಿಲ್ಲವೋ….?

ತಾವು ಅಧಿಕಾರಕ್ಕೆ ಬಂದರೆ ಒಂದು ಕೋಟಿ ಉದ್ಯೋಗ ಸೃಷ್ಠಿಸುತ್ತೇವೆಂಬ ಭರವಸೆ ನೀಡಿ, ನಂತರ ಪಕೋಡ ಮಾರಿ ಎಂದು ನಾಚೀಕೇಡಿನ ಹೇಳಿಕೆ ಕೊಟ್ಟಿರಲ್ಲ ಆಗ,ವಿದ್ಯಾರ್ಥಿ ಯುವ ಜನತೆ ವಿದ್ಯಾಭ್ಯಾಸ ಮುಗಿಸಿ,ಕೆಲಸ ಸಿಗದೆ ನಿರುದ್ಯೋಗದ ಸಮಸ್ಯೆಯಿಂದ ಪ್ರಾಣ ಕಳೆದು ಕೊಳ್ಳುವಾಗ ಅವರ ಹೆಂಡತಿಯರ ಮಂಗಳಸೂತ್ರ ಕಸಿದದ್ದೂ ಒಬ್ಬ ತಾಯಿಯ ಮಗನ ಜೀವ ಕಸಿದದ್ದೂ ನಿಮ್ಮದ್ದೆ ಸರ್ಕಾರ ಎಂಬುದು ನೆನಪಿಲ್ಲವೋ…?

ಅಷ್ಟೇ ಯಾಕೆ BJP ಅಧಿಕಾರದ ಗದ್ದುಗೆ ಹೇರಲು ಯಾವ ಹಂತಕ್ಕಾದರೂ ಇಳಿಯಲು ಸಿದ್ದರಾಗಿ ಕೋಮು ಸಂಘರ್ಷಗಳನ್ನು ತಂದೊಡ್ಡಿ ಧರ್ಮಗಳ ಹೆಸರಿನಲ್ಲಿ ಜನರನ್ನು ಹೊಡೆದಾಟಕ್ಕೆ ಇಳಿಸುವಾಗ,ಅವರ ಪ್ರಾಣಗಳನ್ನು ಕಸಿಯುವಾಗ,ಅವರ ಮನೆಯ ಹೆಣ್ಣು ಮಕ್ಕಳ ಮಂಗಳ ಸೂತ್ರಕ್ಕೆ ಕೈ ಹಾಕಿ ಕಸಿಯುತ್ತಿದ್ದೀರಿ,ಆ ಪಾಪಾದ ಫಲ ನಿಮ್ಮನ್ನು ಸುಮ್ಮನೆ ಬಿಡದು ಎನಿಸಲಿಲ್ಲವೋ…?

ನಿಮ್ಮ ಆಳ್ವಿಕೆಯಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆ ಜಾಸ್ತಿಯಾಗಿ ಕೊಲೆಗಳು ಆದಾಗ, ಆ ಮನೆಯ ಹೆಣ್ಣುಮಕ್ಕಳ ಮಂಗಳ ಸೂತ್ರ ಕಿತ್ತದ್ದು ನಿಮ್ಮ ಕಣ್ಣಿಗೆ ಕಾಣಲಿಲ್ಲವೋ…?

ರೈತ ವಿರೋಧಿ, ಕಾರ್ಮಿಕ ವಿರೋಧಿ, ದಲಿತ ವಿರೋಧಿ, ಮನುಷ್ಯ ವಿರೋಧಿ, ನೀತಿಗಳನ್ನು ಜಾರಿ ಮಾಡಿ ಬಡವನ ಹೊಟ್ಟೆಯ ಮೇಲೆ ಬರೆ ಎಳೆದು, ಮಾಡಿದ ಸಾಲ ತೀರಿಸಲಾಗದೆ ನೇಣಿಗೆ ಶರಣಾಗಿ ಸಾಯುತ್ತಿರುವ ರೈತ ಕಾರ್ಮಿಕರ ಲೆಕ್ಕ ಕೊಡಬೇಕೆ ಮೋದಿಯವರೆ…? ಅವರ ಹೆಂಡತಿಯರ ಮಂಗಳ ಸೂತ್ರ ಕಸಿಯುತ್ತಿರುವುದು ಬಿಜೆಪಿ ಪಕ್ಷದ ನೀಚರಾದ ನೀವು, ನಿಮ್ಮ ನೀಚತನವನ್ನು ಎಷ್ಟು ಅಳಿದರೂ ಕಡಿಮೆಯೇ…..

ಕರ್ನಾಟಕಕ್ಕೆ ಬಿಜೆಪಿಯು ಮಾಡುತ್ತಿರುವ ಮಲತಾಯಿ ಧೋರಣೆ, ಜನ ವಿರೋಧಿ ನೀತಿಗೆ ಸುಪ್ರೀಂ ಕೋರ್ಟ್ ಛೀಮಾರಿ ಹಾಕಿರುವಾಗ… ಅಂಗೈ ಹುಣ್ಣಿಗೆ ಕನ್ನಡಿ ಬೇಕೆ..? ಇಂತಹ ಮನುಷ್ಯ ವಿರೋಧಿ ಬಿಜೆಪಿ ಸರ್ಕಾರದ ದುಷ್ಟ ಆಡಳಿತಕ್ಕೆ ಕೊನೆಯಾಡಲು ಲೋಕಸಭಾ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಮನೆ ಕಳಿಸಬೇಕಿದೆ…. ಎಂಬುದು ನನ್ನ ಖಚಿತ ಅಭಿಪ್ರಾಯವಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!