ಕಳೆದ 52 ದಿನಗಳಿಂದ ಮಂಡ್ಯನಗರದ ಸರ್.ಎಂ.ವಿ ಪ್ರತಿಮೆ ಬಳಿ ಕಬ್ಬು ಮತ್ತು ಹಾಲಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹಿಸಿ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದ ರೈತರನ್ನು ಬುಧವಾರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಅಹೋರಾತ್ರಿ ಧರಣಿ ನಡೆಸಿಲು ಹಾಕಿಕೊಂಡಿದ್ದ ಶಾಮಿಯಾನ, ಖುರ್ಚಿಗಳು, ಗಾಂಧಿಜೀ ಹಾಗೂ ಡಾ.ಬಿ.ಆರ್.ಅಂಬೇಡ್ಕರ್, ಎಂ.ಡಿ.ನಂಜುಂಡಸ್ವಾಮಿ ಹಾಗೂ ಪುಟ್ಟಣ್ಣಯ್ಯ ಅವರ ಪೋಟೋಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.
ಸಿಎಂ ಪ್ರತಿಮೆಗೆ ರಕ್ತಾಭಿಷೇಕ
52 ನೇ ಹೋರಾಟ ದಿನದ ಅಂಗವಾಗಿ ಬುಧವಾರ ರಕ್ತದಾನ ಮಾಡಿದ ರೈತರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆಗೆ ರಕ್ತಾಭೀಷೇಕ ಮಾಡಿ ವಿನೂತನ ರೀತಿಯಲ್ಲಿ ಹೋರಾಟ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಏಕಾಏಕಿ ನುಗ್ಗಿದ ಪೊಲೀಸರು, ಧರಣಿ ನಿರತರನ್ನು ಬಂಧಿಸಿ, ಹೋರಾಟಕ್ಕಾಗಿ ಹಾಕಿಕೊಂಡಿದ್ದ ಶಾಮಿಯಾನದ ಟೆಂಟನ್ನು ಕಿತ್ತು ಹಾಕಿದರು.
ರೈತರನ್ನು ಬಂಧಿಸಿ ಮಂಡ್ಯದ ಪೊಲೀಸ್ ಪರೇಡ್ ಮೈದಾನಕ್ಕೆ ಕರೆದೊಯ್ಯಲಾಗಿದ್ದು, ಸ್ಥಳದಲ್ಲಿಯೇ ರೈತರ ಪ್ರತಿಭಟನೆಯನ್ನು ಕೈಗೊಂಡಿದ್ದಾರೆ.