ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರೊಬ್ಬರು ವರ್ಗಾವಣೆಗೊಂಡಿದ್ದರಿಂದ ವಿದ್ಯಾರ್ಥಿಗಳು ಕಣ್ಣೀರಿಟ್ಟ ಘಟನೆ ಮಳವಳ್ಳಿ ತಾಲೂಕಿನ ಭೀಮನಹಳ್ಳಿಯಲ್ಲಿ ನಡೆದಿದೆ.
ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿಯ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಪುಟ್ಟರಾಜು ವರ್ಗಾವಣೆಯಾಗಿದ್ದರು. ಅದರಂತೆ ಶಾಲೆಯಿಂದ ಪುಟ್ಟರಾಜು ಅವರ ನಿರ್ಗಮನವನ್ನು ಸಹಿಸಲಾರದ ವಿದ್ಯಾರ್ಥಿಗಳು ದಯವಿಟ್ಟು ಹೋಗಬೇಡಿ ಸರ್… ಎಂದು ಬಿಕ್ಕಿ ಬಿಕ್ಕಿ ಅತ್ತು ಕಣ್ಣೀರಿಟ್ಟರು.
ಮಕ್ಕಳ ಪೋಷಕರು ಸಹ ನಮ್ಮ ವಿದ್ಯಾರ್ಥಿಗಳಿಗೆ ಪುಟ್ಟರಾಜು ಸರ್ ಅವರು ಸ್ಪೂರ್ತಿಯಾಗಿದ್ದರು. ಅವರನ್ನು ವರ್ಗಾವಣೆ ಮಾಡಿರುವುದು ನಮಗೆ ನಿಜವಾಗಿಯೂ ಸಂಕಟ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಭೀಮನಹಳ್ಳಿಯ ಶಾಲೆಯಲ್ಲಿ ಶಿಕ್ಷಕರಾಗಿದ್ದ ಪುಟ್ಟರಾಜು ಅವರನ್ನು ಸದ್ಯ ಮಂಡ್ಯದ ಡಯಟ್ಗೆ ವರ್ಗಾವಣೆ ಮಾಡಲಾಗಿದೆ. ಶಿಕ್ಷಕರ ವರ್ಗಾವಣೆಯಿಂದ ಕಣ್ಣೀರಿಡುತ್ತಿರುವ ವಿದ್ಯಾರ್ಥಿಗಳು ಮುಖ್ಯ ಶಿಕ್ಷಕರ ಕಾಲಿಗೆ ಬಿದ್ದು ಶಾಲೆ ಬಿಟ್ಟು ಹೋಗಬೇಡಿ ಎಂದು ಬೇಡಿಕೊಂಡರು. ಮಕ್ಕಳ ಜೊತೆಗೆ ಶಿಕ್ಷಕರೂ, ಪೋಷಕರು ಕೂಡ ಕಾಲಿಗೆ ಬಿದ್ದು ಬೀಳ್ಕೊಟ್ಟರು.
ಮಕ್ಕಳು, ಪೋಷಕರು ಅಳುತ್ತಾ ಹೋಗಬೇಡಿ ಸರ್ ಎಂದು ಗೋಳಾಡುತ್ತಿದ್ದ ದೃಶ್ಯ ಎಲ್ಲರ ಕಣ್ಣಲ್ಲೂ ಕಣ್ಣೀರು ತರಿಸುವಂತಿತ್ತು. ಎಲ್ಲರೂ ಅಳುತ್ತಿದ್ದ ದೃಶ್ಯ ಕಂಡ ಶಿಕ್ಷಕ ಪುಟ್ಟರಾಜು ಸಹ ದುಃಖ ತಡೆದುಕೊಳ್ಳಲಾರದೆ ಕಣ್ಣೀರು ಹಾಕಿದರು.