ಸಾರ್ವಜನಿಕರ ಸಮಸ್ಯೆ ಆಲಿಸಿ ಅಹವಾಲು ಸ್ವೀಕರಿಸಲು ಶಾಸಕರ ಕಚೇರಿ ತೆರೆಯಲಾಗಿದೆ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ಬಾಬು ಬಂಡಿಸಿದ್ದೇಗೌಡ ಹೇಳಿದರು.
ಶ್ರೀರಂಗಪಟ್ಟಣ ತಾಲೂಕು ಕಚೇರಿ ಹಿಂಭಾಗದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಕಚೇರಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮಂಡ್ಯ ನಗರದಲ್ಲಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕು ಭಾಗದ ಕಚೇರಿಯನ್ನು ತೆರೆಯಲಾಗಿದೆ, ಶ್ರೀಸಾಮಾನ್ಯರ ಕುಂದು ಕೊರತೆ, ಸಮಸ್ಯೆಗಳನ್ನು ಆಲಿಸಿ, ದೂರುಗಳಿಗೆ ಅಧಿಕಾರಿಗಳ ಮೂಲಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುತ್ತೇವೆ, ಸೇವೆ ಮಾಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ನುಡಿದರು.
ಸಾರ್ವಜನಿಕರು ಯಾವಾಗ ಬೇಕಾದರೂ ಸಂಪರ್ಕ ಮಾಡಬಹುದು ಕಚೇರಿಯಲ್ಲಿ ಸಹಾಯಕರು ಇರುತ್ತಾರೆ, ಅವರಿಗೆ ಮನವಿ, ದೂರು ನೀಡಿದರು, ಮಾಹಿತಿ ಪಡೆದು ಪರಿಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕ್ಷೇತ್ರ ಮತ್ತು ಜಿಲ್ಲೆಯ ಅಭಿವೃದ್ದಿಗೆ ಕಾರ್ಯಕ್ರಮಗಳನ್ನು ಜೋಡಿಸಿ, ಅಭಿವೃದ್ಧಿಯೆಡೆಗೆ ಎಲ್ಲರನ್ನೂ ಕೊಂಡೊಯ್ಯಲಾಗುವುದು, ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಜೊತೆಗೂಡಿ, ಎಲ್ಲರ ಸಹಕಾರದೊಂದಿಗೆ ಕಾರ್ಯಕ್ರಮ ರೂಪಿಸಲಾಗುವುದು, ಜಿಲ್ಲೆಯ ಅಭಿವೃದ್ದಿಯೇ ನಮ್ಮ ಮುಖ್ಯ ಗುರಿ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ಹಳುವಾಡಿ ವೆಂಕಟೇಶ್, ಮಾರಸಿಂಗನಹಳ್ಳಿ ತಿಮ್ಮೇಗೌಡ, ಜಿ.ಪಂ.ಮಾಜಿ ಸದಸ್ಯ ಚೀರನಹಳ್ಳಿ ಮಂಜುನಾಥ್, ಗ್ರಾ.ಪಂ. ಸದಸ್ಯೆ ಸುವರ್ಣವತಿ, ಸೂನಗನಹಳ್ಳಿ ಸುರೇಶ್ ಮತ್ತಿತರರಿದ್ದರು.