ಗ್ರಾಮ ಪಂಚಾಯಿತಿ ಅಧ್ಯಕ್ಷರ ಹಾಗೂ ಸದಸ್ಯರ ಆಧಿಕಾರ ಮೊಟಕುಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ವಿರುದ್ಧ ಮಂಡ್ಯ ತಾಲ್ಲೂಕಿನ ಸಂತೆಕಸಲಗೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಬುಧವಾರ ಗ್ರಾ.ಪಂ.ಕಚೇರಿಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಗ್ರಾ.ಪಂ.ಅಧ್ಯಕ್ಷೆ ಹೆಚ್.ಎಸ್.ಸೌಮ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಜನಪ್ರತಿನಿಧಿಗಳು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಗ್ರಾಮ ಪಂಚಾಯಿತಿ ಸದಸ್ಯ ಕಾರಸವಾಡಿ ಬಸವರಾಜು ಮಾತನಾಡಿ, ಹಿಂದಿನಿಂದಲೂ ಗ್ರಾಮ ಪಂಚಾಯಿತಿಗಳಿಗೆ ಎಲ್ಲಾ ಸರ್ಕಾರಗಳು ಸ್ವಯತ್ತತೆಯನ್ನು ನೀಡಿಕೊಂಡು ಬರುತ್ತಿವೆ, ಗ್ರಾಮ ಪಂಚಾಯಿತಿಯೂ ಸ್ಥಳೀಯ ಸರ್ಕಾರವಾಗಿ ತನ್ನ ವ್ಯಾಪ್ತಿಯಲ್ಲಿ ಉತ್ತಮ ಕೆಲಸಗಳನ್ನು ಮಾಡುತ್ತಾ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿವೆ, ಹೀಗಿರುವಾಗ ಅವರ ಅಧಿಕಾರವನ್ನು ಕಿತ್ತುಕೊಳ್ಳಲು ಸರ್ಕಾರ ಮುಂದಾಗಿರುವುದು ಸರಿಯಾದ ಕ್ರಮವಲ್ಲ, ಕೂಡಲೇ ಇಂತಹ ಚಿಂತನೆಯನ್ನು ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿದರು.
ಸರ್ಕಾರ ಗ್ರಾ.ಪಂ.ಅಧಿಕಾರ ಮೊಟಕುಗೊಳಿಸಲು ಮುಂದಾದರೆ, ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮತ್ತು ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ರವೀಶ್, ಸತೀಶ್, ಪಾರ್ವತಮ್ಮ, ದೀಪು, ಸೌಮ್ಯ, ಮಮತಾ ಲಕ್ಷ್ಮಿ, ರಾಜೇಶ್, ಲೋಕೇಶ್, ಸಾಕಮ್ಮ, ಶಿವಲಿಂಗ ಶೆಟ್ಟಿ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಲವು ಮುಖಂಡರು ಭಾಗವಹಿಸಿದ್ದರು.