ಮಂಡ್ಯ ನಗರದಾದ್ಯಂತ ಹದಗೆಟ್ಟಿರುವ ರಸ್ತೆಗಳು ಗುಂಡಿ ಮುಚ್ಚುವ ಕಾರ್ಯವನ್ನು ಇಂದಿನಿಂದ ಪ್ರಾರಂಭಿಸಲಾಗಿದ್ದು, ನಗರೋತ್ಥಾನ ಯೋಜನೆಯಡಿ ಲಭ್ಯವಿರುವ 23 ಕೋಟಿ ರೂ.ಗಳ ಅನುದಾನವನ್ನು ಬಳಸಿಕೊಂಡು, ಮುಂದಿನ ದಿನಗಳಲ್ಲಿ ನಗರದ ಎಲ್ಲಾ ರಸ್ತೆಗಳನ್ನು ಅಭಿವೃದ್ಧಿ ಮಾಡಲಾಗುವುದು ಎಂದು ನಗರಸಭಾಧ್ಯಕ್ಷ ಹೆಚ್.ಎಸ್.ಮಂಜು ಭರವಸೆ ನೀಡಿದರು.
ರೈತಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್ ಅವರ ನೇತೃತ್ವದಲ್ಲಿ ಇಂದು ನೂರಾರು ಕಾರ್ಯಕರ್ತರು ಮಂಡ್ಯನಗರದಲ್ಲಿ ಬೈಕ್ ರ್ಯಾಲಿ ನಡೆಸಿ, ನಂತರ ನಗರಸಭಾ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ಈ ಭಾರಿ ಯಾರು ಕಂಡರಿಯದಂತಹ ಮಳೆ ಬಂದಿದೆ, ಆದ್ದರಿಂದ ಎಲ್ಲಾ ರಸ್ತೆಗಳು ಹದಗೆಟ್ಟಿದೆ, ಯಾವ ರಸ್ತೆಗಳು ಕೂಡ ಓಡಾಡಲು ಯೋಗ್ಯವಾಗಿಲ್ಲ ಎಂಬುದು ನನ್ನ ಗಮನಕ್ಕೂ ಬಂದಿದೆ ಎಂದರು.
ಗುತ್ತಲು ರಸ್ತೆ, ಬನ್ನೂರು ರಸ್ತೆ ಸೇರಿದಂತೆ ಇತರೆ ಮುಖ್ಯರಸ್ತೆಗಳು ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತವೆ, ಇವುಗಳನ್ನು ದುರಸ್ತಿಪಡಿಸುವಂತೆ ನಾವು ಮನವಿ ಸಲ್ಲಿಸಿದ್ದೇವೆ, ಆದರೆ ಇದುವರೆಗೂ ಕ್ರಮ ಕೈಗೊಂಡಿಲ್ಲ, ಈಗಾಗಲೇ ನಗರೋತ್ಥಾನ ಯೋಜನೆಯಡಿ 23 ಕೋಟಿ ರೂ. ಬಿಡುಗಡೆಯಾಗಿದ್ದು, ಇದಕ್ಕೆ ಟೆಂಡರ್ ಕರೆಯಲಾಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ನಂತರ ಒಂದೆರಡು ತಿಂಗಳಿನಲ್ಲಿ ರಸ್ತೆ ಅಭಿವೃದ್ದಿ ಕಾಮಗಾರಿ ಕೈಗೊಳ್ಳಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಇಷ್ರತ್ ಫಾತಿಮಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಮೀನಾಕ್ಷಿ, ರೈತಸಂಘದ ಯುವ ಘಟಕದ ಮುಖಂಡರಾದ ಶಿವಳ್ಳಿ ಚಂದ್ರಶೇಖರ್, ರಾಘವೇಂದ್ರ ಹೆಚ್.ಎಂ., ರಾಘವೇಂದ್ರ ಎಚ್.ಎಂ., ಆದಿತ್ಯಗೌಡ, ಮಂಜೇಶ್, ಪ್ರದೀಪ್ ಹಾಗೂ ಶ್ರೀನಿವಾಸ್ ಹಾಜರಿದ್ದರು.