ಹಳೇ ಮೈಸೂರು ಪ್ರಾಂತ್ಯದ ಜೀವಸೆಲೆಯಾಗಿರುವ ಕನ್ನಂಬಾಡಿ ಅಣೆಕಟ್ಟೆಯ 20 ಕಿ.ಮೀ. ವ್ಯಾಪ್ತಿಯ ಬೇಬಿಬೆಟ್ಟದಲ್ಲಿ ಗಣಿಗಾರಿಕೆ ಚಟುವಟಿಕೆಯ ಸಾಧಕ- ಬಾಧಕಗಳನ್ನು ತಿಳಿಯುವ ಉದ್ಧೇಶದಿಂದ ಶಾಸಕ ದರ್ಶನ್ ಪುಟ್ಟಣ್ಣಯ್ಯನವರು ಟ್ರಯಲ್ ಬ್ಲಾಸ್ಟ್ ನಡೆಸುವುದಾದರೆ ರೈತಸಂಘವು ಬಲವಾಗಿ ವಿರೋಧಿಸುತ್ತದೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ತಿಳಿಸಿದರು.
ಮಂಡ್ಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಭಾಗದ ರೈತರು ಹಾಗೂ ಜನಸಾಮಾನ್ಯರ ಜೀವನಾಡಿಯಾಗಿರುವ ಕನ್ನಂಬಾಡಿ ಅಣೆಕಟ್ಟೆ ರಕ್ಷಣೆ ನಮ್ಮೆಲ್ಲರದ್ದಾಗಿದೆ. ಈ ಬಗ್ಗೆ ರಾಜ್ಯ ಉಚ್ಚ ನ್ಯಾಯಾಲಯ ಗಮನಾರ್ಹ ಆದೇಶ ಹೊರಡಿಸಿದ್ದು, ಅಣೆಕಟ್ಟೆಯ ಕೇಂದ್ರ ಸ್ಥಾನದಿಂದ 20 ಕಿ.ಮೀ ವ್ಯಾಪ್ತಿಯೊಳಗೆ ಯಾವುದೇ ರೀತಿಯ ಗಣಿಗಾರಿಕೆ ನಡೆಸದಂತೆ ಸ್ಪಷ್ಟ ಆದೇಶ ನೀಡಿದ್ದು, ಇದರ ಪಾಲನೆಗೆ ನಾವೆಲ್ಲರೂ ಕಾಳಜಿ ತೋರಬೇಕೆಂದರು.
ಹೈಕೋರ್ಟ್ ಆದೇಶದ ಉಲ್ಲಂಘನೆ ಸರಿಯಲ್ಲ, ಈ ಹಿಂದೆ ಟ್ರಯಲ್ ಬ್ಲಾಸ್ಟ್ ಗೆ ಆಗಮಿಸಿದ ತಜ್ಞರ ತಂಡಕ್ಕೆ ವಿರೋಧ ವ್ಯಕ್ತಪಡಿಸಿ ಗೋ ಬ್ಯಾಕ್ ಚಳವಳಿ ಮಾಡಿದ್ದೇವೆ, ಸ್ವಹಿತಾಸಕ್ತಿಗಿಂತ ಅಣೆಕಟ್ಟೆ ರಕ್ಷಣೆ ಮುಖ್ಯವಾಗಿದ್ದು, ರೈತ ಸಂಘದ ವಿರೋಧ ವ್ಯಕ್ತವಾಗಲಿದೆ ಎಂದರು.
ಸರ್ಕಾರ ಹಾಗೂ ಸರ್ಕಾರದ ಭಾಗವಾಗಿರುವ ಶಾಸಕರು ಟ್ರಯಲ್ ಬ್ಲಾಸ್ಟ್ ಗೆ ನಿರ್ಧರಿಸುವುದು ನನ್ನ ಗಮನಕ್ಕೆ ಬಂದಿಲ್ಲ, ಹಾಗೊಮ್ಮೆ ಟ್ರಯಲ್ ಬ್ಲಾಸ್ಟ್ ಗೆ ಶಾಸಕರು ಒಲವು ತೋರಿದರೆ ನಮ್ಮ ವಿರೋಧ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.