ಮಂಡ್ಯ ತಾಲೂಕಿನ ಕಿರಗಂದೂರು ಗ್ರಾಮದ ಜಮೀನುದಾರರಾದ ತಿಮ್ಮೇಗೌಡ ಹಾಗೂ ಶಕುಂತಲ ಅವರ ತೃತೀಯ ಪುತ್ರ ವಿಜಯ್ ಕಿರಗಂದೂರು ಅವರಿಗೆ ಪತ್ನಿ ಶೈಲಜಾ ಮತ್ತು ಅಹರ್ನಿಶಿ ಮತ್ತು ಹೃದ್ಯ ಎಂಬ ಇಬ್ಬರು ಪುತ್ರಿಯರು ಇದ್ದಾರೆ . ಮಂಜುನಾಥ್, ಡಾ.ಸುಭಾಶ್ ಚಂದ್ರ ಎಂಬ ಇಬ್ಬರು ಸಹೋದರರು, ಮಂಗಳ, ಮಾಲತಿ ಎಂಬ ಇಬ್ಬರು ಸಹೋದರಿಯರು ಇದ್ದಾರೆ. ತಂದೆ ತಿಮ್ಮೇಗೌಡರು ಇಂಡುವಾಳು ಗ್ರಾಮ ಪಂಚಾಯತಿ ಪ್ರಧಾನರಾಗಿದ್ದವರು. ಇವರ ಅಣ್ಣ ಮಂಜುನಾಥ್ ಮಂಡ್ಯ ಜಿ.ಪಂ.ನ ಮಾಜಿ ಉಪಾಧ್ಯಕ್ಷರಾಗಿದ್ದವರು.
ಮಂಡ್ಯದಲ್ಲಿ ಎಂಟಿಎನ್ ಎಂಬ ಕೇಬಲ್ ಪಾಲುದಾರನಾಗಿ ವ್ಯವಹಾರ ಆರಂಭಿಸಿದ ವಿಜಯ್ ಕಿರಗಂದೂರು ನಂತರ ಬೆಂಗಳೂರಿಗೆ ತೆರಳಿ ಪದ್ಮಶ್ರೀ ಡಯಾಗ್ನೋಸ್ಟಿಕ್ ಪ್ರಾರಂಭಿಸುತ್ತಾರೆ. ಬಿಜೆಪಿಯ ಪ್ರಭಾವಿ ನಾಯಕ, ಉನ್ನತ ಶಿಕ್ಷಣ ಸಚಿವ ಡಾ.ಅಶ್ವಥ್ ನಾರಾಯಣ್ ಬಂಧುವಾದ ವಿಜಯ್ ಕಿರಗಂದೂರು ನಂತರ ಕಟ್ಟಡ ನಿರ್ಮಾಣ ಸಂಸ್ಥೆ ಆರಂಭಿಸಿದರು.
ನಂತರ ಹೊಂಬಾಳೆ ಫಿಲಂಸ್ ಸ್ಥಾಪನೆ ಮಾಡಿದ ವಿಜಯ್ ಕಿರಗಂದೂರು ಮೊದಲು ಪುನೀತ್ ರಾಜ್ಕುಮಾರ್ ಅಭಿನಯದ ನಿನ್ನಿಂದಲೇ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಿರ್ಮಾಪಕರಾಗಿ ಕಾಲಿಟ್ಟರು. ನಂತರ ಯಶ್ ಅಭಿನಯದ ಮಾಸ್ಟರ್ ಪೀಸ್ ಚಿತ್ರ ನಿರ್ಮಿಸಿದರು.
ನಂತರ ಅವರು ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಅವರನ್ನು ಭಾರತೀಯ ಚಿತ್ರರಂಗ ಗಮನಿಸುವಂತೆ ಮಾಡಿತು. ಸಾಮಾಜಿಕ ಸಂದೇಶ ಸಾರಿದ ಪುನೀತ್ ರಾಜ್ಕುಮಾರ್ ಅಭಿನಯದ ರಾಜಕುಮಾರ ಚಿತ್ರ ಹೊಂಬಾಳೆ ಫಿಲಂಸ್ ಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತು. ನಂತರ ಕೆಜಿಎಫ್1 ಮತ್ತು 2, ಯುವರತ್ನ,ಈಗ ಕಾಂತಾರ ಮೂಲಕ ಭಾರತೀಯ ಚಿತ್ರರಂಗ ಮಾತ್ರವಲ್ಲ, ವಿಶ್ವವೇ ಗುರುತಿಸುವಂತೆ ಪ್ರಸಿದ್ಧರಾಗಿದ್ದಾರೆ.