ವರದಿ : ವಿ.ಎಸ್.ಪ್ರಭು
ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಅಸ್ಥಿತ್ವವೇ ಇಲ್ಲವೆಂಬ ಜೆಡಿಎಸ್ ಪಕ್ಷದ ನಾಯಕರ ಕುಹಕ ಮತ್ತು ಬಿಜೆಪಿಯೇ ಬಂದು ಬಿಡುತ್ತದೆಂಬ ಆ ಪಕ್ಷದವರ ಭ್ರಮೆಗೆ ಮಂಡ್ಯ ಜಿಲ್ಲೆಯ ಜನತೆ ಪ್ರಸಕ್ತ ಚುನಾವಣೆಯಲ್ಲಿ ಸ್ಪಷ್ಟ ಉತ್ತರ ನೀಡಿರುವುದಾಗಿ ಮಾಜಿ ಸಚಿವ, ನಾಗಮಂಗಲ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ಚಲುವರಾಯಸ್ವಾಮಿ ಬಣ್ಣಿಸಿದರು.
ಮದ್ದೂರು ತಾಲೂಕು ಕೊಪ್ಪ ಗ್ರಾಮದ ನಾಗಮಂಗಲ ವಿಧಾನಸಭಾ ಕ್ಷೇತ್ರಕ್ಕೆ ಸೇರಿದ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದ ಬಳಿಕ ಕಾಂಗ್ರೆಸ್ ಪಕ್ಷದ ಸ್ಥಳೀಯ ಕಾರ್ಯಕರ್ತರೊಡನೆ ಸಮಾಲೋಚನೆ ನಂತರ ಸುದ್ಧಿಗಾರರೊಡನೆ ಅವರು ಮಾತನಾಡಿದರು.
ಹಿಂದಿನ ಎಲ್ಲಾ ಚುನಾವಣೆಗಳಿಗಿಂತಲೂ 2023ರ ವಿಧಾನಸಭಾ ಚುನಾವಣೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿದ್ದು ಆಶಾದಾಯಕ ಬೆಳವಣಿಗೆಯೊಡನೆ ಕಾರ್ಯನಿರ್ವಹಿಸಿರುವ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಮತದಾರರ ಶ್ರಮಕ್ಕೆ ತಾವು ಗೌರವ ಸಲ್ಲಿಸುವುದಾಗಿ ನುಡಿದರು.
ಜಿಲ್ಲೆಯಲ್ಲಿ 7 ವಿಧಾನಸಭಾ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷವು ತನ್ನದಾಗಿಸಿಕೊಳ್ಳುವ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿದ್ದು ಇಂತಹ ಸದಾವಕಾಶಕ್ಕೆ ಹಾತೊರೆಯುತ್ತಿರುವ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಶುಭವಾಗಲೆಂದರು.
ಚುನಾವಣೆ ಘೋಷಣೆಯಾದ ದಿನದಿಂದಲೂ ಮಂಡ್ಯ ಜಿಲ್ಲೆಯಾದ್ಯಂತ ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ ಮತದಾನ ಅಂತ್ಯವಾಗುವ ವರೆಗಿನ ಶಾಂತಿ ಸುವ್ಯವಸ್ಥೆ ಇದೇ ಮೊದಲೆನ್ನಬಹುದಾಗಿದ್ದು ಎಲ್ಲಾ ಪಕ್ಷದ ಮುಖಂಡರು, ಕಾರ್ಯಕರ್ತರು ಇದಕ್ಕೆ ಸಹಕರಿಸಿದ್ದಾಗಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ಎಲ್ಲಾ ಚುನಾವಣಾಧಿಕಾರಿಗಳು, ಸಿಬ್ಬಂದಿ ವರ್ಗಕ್ಕೆ ತಾವು ಕೃತಜ್ಞತೆ ಅರ್ಪಿಸುವುದಾಗಿ ನುಡಿದರು.
ಈ ವೇಳೆ ತಾ.ಪಂ. ಮಾಜಿ ಅಧ್ಯಕ್ಷ ತ್ಯಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಿವಾಕರ್, ಗ್ರಾ.ಪಂ. ಸದಸ್ಯ ಫರ್ವೀದ್ ಪಾಷಾ ಇತರರಿದ್ದರು.