ರಾಜ್ಯ ಸರ್ಕಾರ ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಮತ್ತೆ ಆರಂಭಿಸಿದ್ದು, 2022 -23ನೇ ಸಾಲಿನ ಯಶಸ್ವಿನಿ ಯೋಜನೆಗೆ ಹೆಸರು ನೋಂದಾಯಿಸಿ ಕೊಳ್ಳುವಂತೆ ಮನ್ ಮುಲ್ ಉಪಾಧ್ಯಕ್ಷ ರಘುನಂದನ್ ಮನವಿ ಮಾಡಿದರು.
ಈ ಬಗ್ಗೆ ಮಾಧ್ಯಮಗಳಿಗೆ ವಿವರಣೆ ನೀಡಿರುವ ಅವರು, ಜಿಲ್ಲೆಯ ರೈತ ಬಾಂಧವರು, ಹಾಲು ಉತ್ಪಾದಕರು ಹಾಗೂ ಸಹಕಾರಿ ಬಂಧುಗಳು ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯಡಿ ತ್ವರಿತವಾಗಿ ಹೆಸರು ನೋಂದಾಯಿಸಿ ಕೊಳ್ಳಬೇಕು. ಸಹಕಾರಿ ಸಂಘಗಳಾದ ಹಾಲು ಉತ್ಪಾದಕರ ಸಹಕಾರ ಸಂಘ,ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿ,ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಯಶಸ್ವಿನಿ ಯೋಜನೆಯಡಿ ಹೆಸರು ನೋಂದಾಯಿಸಿ ಕೊಳ್ಳಬಹುದು.
ಗ್ರಾಮೀಣ ಪ್ರದೇಶದ ಸಹಕಾರ ಸಂಘದ ಸದಸ್ಯರು ತಮ್ಮ ಕುಟುಂಬದಲ್ಲಿ ನಾಲ್ಕು ಜನ ಸದಸ್ಯರಿದ್ದರೆ 500 ರೂ.ಶುಲ್ಕ ಕಟ್ಟಬೇಕು. ನಾಲ್ಕು ಜನರಿಗಿಂತ ಮೇಲ್ಪಟ್ಟು ಸದಸ್ಯರಿದ್ದರೆ ತಲಾ 100 ಹೆಚ್ಚುವರಿ ಶುಲ್ಕ ಕಟ್ಟಬೇಕು. ನಗರ ಪ್ರದೇಶಗಳಲ್ಲಿ ನಾಲ್ಕು ಜನ ಸದಸ್ಯರಿಗೆ 1000 ರೂ. ನೋಂದಣಿ ಶುಲ್ಕವಿದ್ದು, ನಾಲ್ಕಕ್ಕಿಂತ ಹೆಚ್ಚಿದ್ದರೆ, ತಲಾ 200 ರೂಪಾಯಿ ಹೆಚ್ಚುವರಿ ಶುಲ್ಕ ಕಟ್ಟಬೇಕು ಎಂದರು.
ಈ ಯೋಜನೆಯಡಿ ಸುಮಾರು 137 ಆರೋಗ್ಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಬಹುದು. ನವೆಂಬರ್ ಒಂದರಿಂದ ನೋಂದಣಿ ಆರಂಭವಾಗಿದ್ದು, ಜನರು ಆದಷ್ಟು ಬೇಗ ಯಶಸ್ವಿನಿ ಯೋಜನೆ ಸೇರಿದರೆ 2023 ಜನವರಿಯಿಂದಲೇ ಈ ಯೋಜನೆಯ ಅನುಕೂಲ ಪಡೆಯಬಹುದು ಎಂದರು.
ಜಿಲ್ಲೆಯಲ್ಲಿ 1300 ಸಹಕಾರ ಸಂಘಗಳಿದ್ದು, ಸಹಕಾರ ಸಂಘಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಮನ್ ಮಲ್ ವ್ಯವಸ್ಥಾಪಕ ನಿರ್ದೇಶಕರು ಸಹಕಾರ ಸಂಘಗಳಿಗೆ,ಮಹಿಳಾ ಸಂಘಗಳಿಗೆ ಸುತ್ತೋಲೆ ತಲುಪಿಸಿದ್ದು ಜನರು ಆದಷ್ಟು ಶೀಘ್ರವಾಗಿ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಂಡು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಈ ಯೋಜನೆಯ ವ್ಯಾಪ್ತಿಗೆ ಬರುವ ಸದಸ್ಯರಿಗೆ 5 ಲಕ್ಷ ರೂ. ವರೆಗಿನ ಆರೋಗ್ಯ ಚಿಕಿತ್ಸೆಯ ಖರ್ಚನ್ನು ಸರ್ಕಾರ ನೀಡುತ್ತದೆ. ಈ ಯೋಜನೆಯಿಂದ ಗ್ರಾಮೀಣ ಪ್ರದೇಶದ ಜನರಿಗೆ ಅತಿ ಹೆಚ್ಚು ಅನುಕೂಲವಿದೆ. ನಗರ ಪ್ರದೇಶದ ಜನರು ಯಾವುದಾದರೂ ಒಂದು ಸಂಘದ ಸದಸ್ಯರಾಗಿ ಯೋಜನೆಯ ಅನುಕೂಲ ಪಡೆಯಬಹುದು. ರೈತ ಬಾಂಧವರು, ಹಾಲು ಉತ್ಪಾದಕರು, ಸಹಕಾರಿ ಮಿತ್ರರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಎಂದರು.