ಮಂಡ್ಯ ಜಿಲ್ಲಾ ನಿವೃತ್ತ ಸರ್ಕಾರಿ ನೌಕರರ ಸಂಘದಲ್ಲಿ ನಡೆದಿದೆ ಎನ್ನಲಾದ ಹಣ ದುರ್ಬಳಕೆ ಆರೋಪಕ್ಕೆ ಸಂಘದ ಅಧ್ಯಕ್ಷ ಬಿ.ಸಿದ್ದಯ್ಯ ಸ್ಪಷ್ಟನೆ ನೀಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾಜಿ ಕಾರ್ಯದರ್ಶಿ ಚಿಕ್ಕನಾಗೇಗೌಡ ಮಾಡಿರುವ ಆರೋಪದಲ್ಲಿ 2.33 ಲಕ್ಷ ರೂ. ಠೇವಣಿ ಹಣವನ್ನು ಅನುಮತಿ ಪಡೆಯದೆ ಡ್ರಾ ಮಾಡಿಕೊಂಡು ಇಷ್ಟ ಬಂದಂತೆ ಖರ್ಚು ಮಾಡಿದ್ದಾರೆ ಎಂದಿದ್ದಾರೆ. ಆದರೆ ಕಳೆದ ಮಾರ್ಚ್ 12ರಂದು ನಡೆದ ಮಾಸಿಕ ಸಭೆಯಲ್ಲಿ ಎಲ್ಲರ ಒಪ್ಪಿಗೆ ಪಡೆದು ಹಣ ಬಳಕೆ ಮಾಡಿಕೊಳ್ಳಲಾಗಿದೆ ಎಂದರು.
ಕಳೆದ ಜನವರಿಯಿಂದ ಆಗಸ್ಟ್ ವರೆಗೆ ಚಿಕ್ಕನಾಗೇಗೌಡ ಕಾರ್ಯದರ್ಶಿಯಾಗಿದ್ದರು. ಈ ಅವಧಿಯಲ್ಲಿ ಅವರು ಹಣಕಾಸಿನ ಖರ್ಚು ವೆಚ್ಚದಲ್ಲಿ ಅವ್ಯವಹಾರ ಮಾಡಿರುವುದು ಗಮನಕ್ಕೆ ಬಂದಿದೆ ಎಂದರು.
ಕಳೆದ ಆಗಸ್ಟ್ ನಲ್ಲಿ ನಡೆದ ಮಾಸಿಕ ಸಭೆಯಲ್ಲಿ ಚಿಕ್ಕನಾಗೇಗೌಡ, ಏರು ಧ್ವನಿಯಲ್ಲಿ ಸಭೆಯಲ್ಲಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಇಬ್ಬರಿಗೂ ಒಂದೇ ಅಧಿಕಾರವಿರುತ್ತದೆ. ಇದರಲ್ಲಿ ಯಾವುದೇ ತಾರತಮ್ಯ ಇರುವುದಿಲ್ಲ ಎಂದು ಅಧ್ಯಕ್ಷರಿಗೆ ಏಕ ವಚನದಲ್ಲಿ ಮಾತನಾಡಿ ಅಗೌರವ ತಂದಿದ್ದಾರೆ. ಈ ವಿಚಾರದಲ್ಲಿ ಸಭೆಯಲ್ಲಿ ಹಾಜರಿದ್ದ 21 ಜನ ನಿರ್ದೇಶಕರು, ಈ ಕಾಯದರ್ಶಿಯ ನಡತೆ ಸರಿಯಿಲ್ಲ ಎಂದು ಬದಲಾವಣೆಗೆ ಸೂಚಿಸಿದರು. ಆದರಂತೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.
ಚಿಕ್ಕನಾಗೇಗೌಡ ವರ್ತನೆಯನ್ನು ಖಂಡಿಸಿ ಕಾರ್ಯದರ್ಶಿಯನ್ನು ಬದಲಾವಣೆ ಮಾಡಲು ಅಧ್ಯಕ್ಷರಿಗೆ ಪರಮಾಧಿಕಾರ ಇರುವುದರಿಂದ ಬದಲಾವಣೆ ಮಾಡಬಹುದು ಎಂದು ಸಭೆಯಲ್ಲಿ ಒಪ್ಪಿ ಸರ್ವಾನುಮತದಿಂತ ಅಂಗೀಕರಿಸಲಾಗಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ತಿಮ್ಮಯ್ಯ, ಪದಾಧಿಕಾರಿಗಳಾದ ಕೆ.ಪಿ.ವೀರಪ್ಪ, ಅಂಕೇಗೌಡ, ಹುಚ್ಚೇಗೌಡ, ಶಿವಲಿಂಗಯ್ಯ, ಶಿವರಾಂ ಹಾಗೂ ನಾರಾಯಣಗೌಡ ಮತ್ತಿತರರಿದ್ದರು.