ಮಧುಮೇಹ ರೋಗವನ್ನು ತಡೆಗಟ್ಟಬೇಕೆಂದರೆ ಜೀವನ ಶೈಲಿಯ ಬದಲಾವಣೆ ಅತ್ಯಗತ್ಯ ಎಂದು ಶ್ರೀರಂಗಪಟ್ಟಣ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಎನ್.ಕೆ.ವೆಂಕಟೇಶ್ ಹೇಳಿದರು.
ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಶ್ರೀರಂಗಪಟ್ಟಣದ ಕಾವೇರಿ ವಿದ್ಯಾ ಸಂಸ್ಥೆಯ ಬಿ.ಜಿ.ಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಎನ್.ಸಿ.ಡಿ ಘಟಕ ಹಾಗೂ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ವತಿಯಿಂದ ಆಯೋಜಿಸಿದ್ದ ವಿಶ್ವ ಮಧುಮೇಹ ದಿನ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಧುಮೇಹ ಖಾಯಿಲೆ ಕುರಿತು ಆತಂಕಕ್ಕೊಳಗಾಗದೆ, ಸಕಾಲಕ್ಕೆ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ಸಮತೋಲನ ಆಹಾರ ಸೇವಿಸುತ್ತಾ ಜೀವನ ಸಾಗಿಸಿದಲ್ಲಿ ಮಧುಮೇಹವನ್ನು ದೂರವಿಡಬಹುದು, ಮಧುಮೇಹದ ಮತ್ತು ಇದಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಾರ್ವಜನಿಕರಿಗೆ ಅಗತ್ಯ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಎನ್.ಸಿ.ಡಿ ಘಟಕದ ಸಂಯೋಜಕ ಡಾ.ವಿಜಯ ಹೂಗಾರ ಮಾತನಾಡಿ, ಮಧುಮೇಹ ರೋಗಕ್ಕೆ ಇತ್ತೀಚಿನ ದಿನಗಳಲ್ಲಿ ಯುವ ಜನರೇ ಹೆಚ್ಚಾಗಿ ಬಲಿಯಾಗುತ್ತಿದ್ದು, ಭವಿಷ್ಯ ರಕ್ಷಣೆಗೆ ಆರೋಗ್ಯ ಶಿಕ್ಷಣ ಅವಶ್ಯಕ ವೆಂದು ಅಭಿಪ್ರಾಯಪಟ್ಟರು .
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿಲ್ಲಾ ಸಲಹೆಗಾರ ತಿಮ್ಮರಾಜು ಮಾತನಾಡಿ, ಮಧುಮೇಹಕ್ಕೆ ಕಾರಣವಾದ ತಂಬಾಕು ಬಳಕೆಯಿಂದ ದೂರವಿರಲು ವಿಧ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಿಲ್ಲಾ ಉಪ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಶಿವಾನಂದ ಪ್ರಾಸ್ತಾವಿಕ ಮಾತನಾಡಿ, ಮಧುಮೇಹ ರೋಗ ಲಕ್ಷಣಗಳು ಹಾಗೂ ವಿಧಗಳ ಬಗ್ಗೆ ಮಾಹಿತಿ ನೀಡಿದರು.
ಪ್ರಾಂಶುಪಾಲ ಹೆಚ್.ಎನ್.ಗೋಪಿ, ಜಿಲ್ಲಾ ಮೇಲ್ವಿಚಾರಣಾಧಿಕಾರಿ ನಂಜುಂಡಸ್ವಾಮಿ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ, ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ, ಸಮಾಜ ಕಾರ್ಯಕರ್ತ ಮೋಹನಕುಮಾರ, ಉಪನ್ಯಾಸಕರಾದ ಸರಿತಾ, ರಂಜನಾ ಹಾಗೂ ಸಂಜನಾ ಹಾಜರಿದ್ದರು.