ಮೈಸೂರು ಸಂಸ್ಥಾನದ ಅರಸರು ಕನ್ನಡ ಭಾಷೆಯನ್ನು ಅತ್ಯಂತ ಶ್ರೀಮಂತ ಗೊಳಿಸಲು ಕಾರಣರಾಗಿದ್ದಾರೆ ಎಂದು ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್ ತಿಳಿಸಿದರು.
ಮಳವಳ್ಳಿ ತಾಲೂಕಿನ ಕುರುಬನಪುರ ಗ್ರಾಮದಲ್ಲಿ ಭಾರತೀ ಕಾಲೇಜಿನ ಎನ್ ಎಸ್ ಎಸ್ ಘಟಕ ಆಯೋಜಿಸಿದ್ದ ಶಿಬಿರದಲ್ಲಿ ಕನ್ನಡ ನೆಲ, ಜಲ, ಭಾಷೆ ಕಾಪಾಡುವಲ್ಲಿ ಯುವಕರ ಪಾತ್ರ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಕನ್ನಡ ಭಾಷೆಗೆ ಮೂರು ಸಾವಿರ ವರ್ಷಗಳ ಇತಿಹಾಸವಿದೆ. ಭಾರತ ದೇಶದ ಎಲ್ಲಾ ಭಾಷೆಗಳ ತಾಯಿ ಭಾಷೆ ಕನ್ನಡ. ಹಲವಾರು ಸಾಹಿತಿಗಳು, ಲೇಖಕರು ಕನ್ನಡ ಸಾಹಿತ್ಯವನ್ನು ಶ್ರೀಮಂತ ಗೊಳಿಸಿದ್ದಾರೆ ಎಂದರು.
ನಾಡಿನ ತುಂಬಾ ಸಾಹಿತಿಗಳು, ಕಲಾವಿದರು, ವಿಮರ್ಶಕರು, ಹೋರಾಟಗಾರರು, ಸುಪ್ರಸಿದ್ಧ ರಾಜಕಾರಣಿಗಳು ಸೇರಿ ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನಕ್ಕಾಗಿ ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ. ರಾಜ್ಯ ಸರ್ಕಾರ ಕಳೆದ 65 ವರ್ಷಗಳಿಂದ ಆಡಳಿತ ಮಾಡಿದರೂ ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಡಾ. ಸರೋಜಿನಿ ಮಹಿಷಿ ವರದಿ ಜಾರಿ ಮಾಡಲೇ ಇಲ್ಲ. ಆಡಳಿತ ಭಾಷೆ ಕನ್ನಡವಾದರೂ ಕನ್ನಡಿಗರಿಗೆ ಆದ್ಯತೆ ನೀಡದಿರುವುದು ವಿಷಾದಕರ ಸಂಗತಿ ಎಂದರು.
ಮುಂದಾದರೂ ಸರ್ಕಾರಗಳು ಡಾ. ಸರೋಜಿನಿ ಮಹಿಷಿ ವರದಿ ಜಾರಿಗಾಗಿ ಕ್ರಮ ಕೈಗೊಳ್ಳಬೇಕೆಂದು ಇಂದಿನ ಯುವ ಜನತೆ ಜೊತೆಗೂಡಿ ಹೋರಾಟ ಮಾಡಬೇಕಿದೆ. ಯುವಜನತೆ ದುಶ್ಚಟಗಳಿಗೆ ಬಲಿಯಾಗದೆ ನಾಡಿನ ಪ್ರಸಿದ್ಧವಾದಂತಹ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಜಾಗೃತಿ ವಹಿಸಬೇಕು. ಕನ್ನಡಿಗರು ಐಎಎಸ್,ಐಪಿಎಸ್, ಕೆಎಎಸ್ ಹುದ್ದೆಗಳನ್ನು ಪಡೆದು ಕನ್ನಡ ನಾಡನ್ನು ಶ್ರೀಮಂತ ಗೊಳಿಸಬೇಕು ಎಂದು ಸಲಹೆ ನೀಡಿದರು.
ವೇದಿಕೆಯಲ್ಲಿ ಎನ್ಎಸ್ಎಸ್ ಶಿಬಿರ ಅಧಿಕಾರಿಗಳಾದ ರಾಜಪ್ಪಾಜಿ, ಸಂಗೀತ ನಿರ್ದೇಶಕ ಶ್ರೀನಿವಾಸ್, ದಿನೇಶ್,ಉಮೇಶ್, ಹೊನ್ನಯ್ಯ, ಸಿದ್ದೇಗೌಡ ಇದ್ದರು.