ಕರ್ನಾಟಕದಲ್ಲಿಯೇ ಮಂಡ್ಯ ಜಿಲ್ಲೆಯು ಹೆಚ್ಚು ಕನ್ನಡವನ್ನು ಬಳಕೆ ಮಾಡುವ ಜಿಲ್ಲೆಯಾಗಿರುವುದು ಹೆಮ್ಮೆಯ ಸಂಗತಿ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಓ ಪ್ರಕಾಶ್ ಹೇಳಿದರು.
ಮಂಡ್ಯನಗರದ ಹೊಸಹಳ್ಳಿ ಸರ್ಕಲ್ ನಲ್ಲಿ ಇಂದು ಸಂಜೆ ನಡೆದ 67 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಭಾಷೆ, ನೆಲ, ಜಲದ ವಿಚಾರದಲ್ಲಿ ಆಟೋ ಚಾಲಕರು ಹೆಚ್ಚಿನ ಅಭಿಮಾನ ಹೊಂದಿದ್ದಾರೆ. ಅವರನ್ನು ನಾವು ಗೌರವದಿಂದ ನಡೆಸಿಕೊಳ್ಳಬೇಕು. ಆಟೋ ಚಾಲಕರು ಮತ್ತು ಮಾಲೀಕರ ಮಕ್ಕಳು ವಿದ್ಯಾಭ್ಯಾಸ ಸಂದರ್ಭದಲ್ಲಿ ಕ್ರೀಡೆಗೆ ಹೆಚ್ಚು ಆದ್ಯತೆ ನೀಡಬೇಕು. ಇದಕ್ಕೆ ಇಲಾಖೆಯು ಯಾವಾಗಲೂ ಸಹಾಯ ನೀಡುತ್ತದೆ, ಅಲ್ಲದೇ ಅಂತಹ ಮಕ್ಕಳಿಗೆ ಕ್ರೀಡಾ ವಸತಿ ಶಾಲೆಯಲ್ಲಿ ಪ್ರವೇಶ ನೀಡಲಾಗುವುದು, ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಜಯಕರ್ನಾಟಕ ಸಂಘಟನೆಯ ಮುಖಂಡ ನಾರಾಯಣ್ ಮಾತನಾಡಿ, ಕನ್ನಡ ಭಾಷಾ ಬಳಕೆಯಲ್ಲಿ ಆಟೋ ಚಾಲಕರು ಸಾರ್ವಭೌಮರು, ಇಡೀ ರಾಜ್ಯಾದ್ಯಾಂತ ಅವರ ಸೇವೆ ಅಪಾರ, ಎಲ್ಲೇ ಅಪಘಾತವಾಗಲಿ ಸ್ವತಃ ತಾವೇ ಮುಂದೆ ಬಂದು ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವಲ್ಲಿ ಮುಂದಾಗುತ್ತಾರೆ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಯುವ ಪ್ರಶಸ್ತಿ ಪುರಸ್ಕೃತರಾದ ಎಂ.ಸಿ.ಲಂಕೇಶ್ ಮಂಗಲ, ಕೀಲಾರ ಸುರೇಶ್, ರಕ್ಷಣಾ ವೇದಿಕೆಯ ಸ್ವಾತಿ ಶಂಕರೇಗೌಡ, ಸಮಾಜ ಸೇವಕ ರುಕ್ಮಾಂಗದ, ಮಂಗಲ ಗ್ರಾ.ಪಂ.ಸದಸ್ಯ ಕುಮಾರಗೌಡ, ಆಟೋ ಚಾಲಕರಾದ ದೇವರಾಜು ಕಾರಸವಾಡಿ, ನಿಂಗಪ್ಪ, ಗಂಗಾಧರ, ಸುರೇಶ್ ಉಪಸ್ಥಿತರಿದ್ದರು.