ಕನ್ನಡ ರಾಜ್ಯೋತ್ಸವ ಆಚರಣೆ ಕೇವಲ ನವೆಂಬರ್ಗೆ ಸೀಮಿತವಾಗದೆ ನಿತ್ಯೋತ್ಸವವಾಗಬೇಕು. ಮಂಡ್ಯ ಜಿಲ್ಲೆಯ ಜನರ ಕನ್ನಡ ಭಾಷಾಭಿಮಾನ ಇತರರಿಗೆ ಮಾದರಿಯಾಗಿದ್ದು, ನಮ್ಮ ನೆಲ-ಜಲ, ಭಾಷೆಯ ಉಳಿವಿಗೆ ನಾವೆಲ್ಲರೂ ಶ್ರದ್ಧೆಯಿಂದ ಕಾರ್ಯಪ್ರವೃತ್ತರಾಗಬೇಕೆಂದು ಕಾಂಗ್ರೆಸ್ ಮುಖಂಡ ಕೀಲಾರ ರಾಧಾಕೃಷ್ಣ ತಿಳಿಸಿದರು.
ಮಂಡ್ಯ ನಗರದ ಅಂಬೇಡ್ಕರ್ ಭವನದಲ್ಲಿ ಅಖಿಲ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಸಮಿತಿ, ಬೆಂಗಳೂರು ಹಾಗೂ ಮಂಡ್ಯ ಜಿಲ್ಲಾ ಆಟೋ ಚಾಲಕರ ಕಲ್ಯಾಣ ಜಂಟಿ ಕ್ರಿಯಾ ಸಮಿತಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಹಾಗೂ ಕನ್ನಡದ ಹಬ್ಬ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ನಮ್ಮ ನೆರೆ-ಹೊರೆಯ ರಾಜ್ಯಗಳು ಕಾರ್ಯನಿರ್ವಹಿಸಬೇಕು. ರಾಜ್ಯದ ಜನತೆ ಕೇರಳಿಗರಂತೆ ಕನ್ನಡ ಭಾಷೆಯ ಪತ್ರಿಕೆಗಳನ್ನು ಕೊಂಡು ಓದುವ ಹವ್ಯಾಸ ರೂಢಿಸಿ ಕೊಳ್ಳಬೇಕು. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದ್ದು, ಚಲನಚಿತ್ರ ನಟರಾಗಿದ್ದ ದಿ.ಶಂಕರ್ನಾಗ್ ಹಾಗೂ ದಿ. ಪುನೀತ್ ಅವರ ಸಮಾಜಮುಖಿ ಕಾರ್ಯಗಳು ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕೆಂದರು.
ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದ ಸಾಹಿತಿ ಪ್ರೊ. ಜಿ.ಟಿ. ವೀರಪ್ಪ ಮಾತನಾಡಿ, 67ನೇ ವರ್ಷದ ರಾಜ್ಯೋತ್ಸವ ಆಚರಣೆಯಲ್ಲಿ ನಾವೆಲ್ಲರೂ ಭಾಗಿಯಾಗಿದ್ದೇವೆ. ವೈವಿಧ್ಯತೆಯಲ್ಲಿ ಏಕತೆ ಕಾಣುವ ದೇಶ ನಮ್ಮದಾಗಿದೆ. ಆಟೋ ಚಾಲಕರು ಮತ್ತು ಮಾಲೀಕರ ಕನ್ನಡ ಪ್ರೇಮ ಅನನ್ಯ ಎಂದು ಬಣ್ಣಿಸಿದರು.
ಕನ್ನಡ ಭಾಷೆಯನ್ನು ಬಳಸುವುದರಿಂದ ಭಾಷೆ ಅಭಿವೃದ್ಧಿ ಹೊಂದುತ್ತದೆ. ಅನ್ಯ ಭಾಷೆಯ ವ್ಯಕ್ತಿಗಳ ಜತೆ ಕನ್ನಡದಲ್ಲೇ ಮಾತನಾಡುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಕೇಂದ್ರ ಸರ್ಕಾರ ರಾಜ್ಯಗಳ ಮೇಲೆ ಹಿಂದಿ ಏರಿಕೆಗೆ ಮುಂದಾದಾಗ ಮೊದಲು ಪ್ರತಿಭಟಿಸಿದ ರಾಜ್ಯಗಳು ಕೇರಳ ಮತ್ತು ತಮಿಳುನಾಡು. ಆ ರಾಜ್ಯಗಳ ಮಾದರಿಯಲ್ಲಿ ನಾವೂ ಪ್ರಾದೇಶಿಕ ಭಾಷೆಯ ಉಳಿವಿಗೆ ಶ್ರಮಿಸಬೇಕೆಂದರು ತಿಳಿಸಿದರು.
ನಗರಸಭೆ ಮಾಜಿ ಸದಸ್ಯ ಆಟೋ ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಚಲನಚಿತ್ರ ನಟರಾದ ಚಂದು ಬಿ.ಗೌಡ, ರಂಜನ್, ಆಟೋ ಚಾಲಕರ ಜಿಲ್ಲಾಧ್ಯಕ್ಷ ಕೆ.ಎಂ.ರಾಜಣ್ಣ, ಗೌರವ ಕಾರ್ಯದರ್ಶಿ ಬಿ.ಎನ್.ರಾಜೇಶ್, ನಗರಸಭೆ ಮಾಜಿ ಅಧ್ಯಕ್ಷೆ ಜಿ.ಎಸ್.ನಾಗಮಣಿ, ಅರುಣ್ ಕುಮಾರ್, ಮಾಜಿ ಸದಸ್ಯೆ ಸುಜಾತ ಮಣಿ ಇತರರು ಉಪಸ್ಥಿತರಿದ್ದರು.