ಹುಟ್ಟೂರಿನ ಋಣ ತೀರಿಸಬೇಕೆನ್ನುವ ಉದ್ದೇಶದಿಂದ ಸಮಾಜಸೇವೆಗೆ ಮುಂದಾಗಿದ್ದು, ಜನರ ಸೇವೆಗೆ ನಾನು ಸದಾ ಸಿದ್ಧ ಎಂದು ಸಮಾಜ ಸೇವಕ ಕದಲೂರು ಉದಯ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ದಿ ವ್ಯಾಪ್ತಿಯ ಸಬ್ಬನಹಳ್ಳಿ,ಕಡಿಲುವಾಗಿಲು, ಹನುಮಂತನಗರ ಗ್ರಾಮಸ್ಥರ ಕೋರಿಕೆಯ ಮೇರೆಗೆ ಅವರ ಗ್ರಾಮಗಳಿಗೆ ಭೇಟಿ ನೀಡಿ ಅಹವಾಲು ಸ್ವೀಕರಿಸಿದರು.
ಕಡಿಲುವಾಗಿಲು ಗ್ರಾಮಸ್ಥರು ಸರ್ಕಾರಿ ಶಾಲೆಯ ಸಮಸ್ಯೆಗಳನ್ನು ತಿಳಿಸಿ,ಶಾಲೆಗೆ ಅತ್ಯವಶ್ಯಕವಾಗಿರುವ ಸಭಾಂಗಣ ನಿರ್ಮಿಸಿಕೊಡುವಂತೆ ಮನವಿ ಮಾಡಿದರು ಮತ್ತು ಸಬ್ಬನಹಳ್ಳಿ ಗ್ರಾಮಸ್ಥರು ಗ್ರಾಮದ ದೇವಸ್ಥಾನಗಳಾದ ಪಟ್ಟಲದಮ್ಮ, ಸೀತಾಳಲಿಂಗೇಶ್ವರ ದೇವಸ್ಥಾನಕ್ಕೆ ಧನಸಹಾಯ ಮಾಡಬೇಕೆಂದು ಕೋರಿದರು.
ಹನುಮಂತ ನಗರಕ್ಕೆ ಭೇಟಿ ನೀಡಿ ಇತ್ತೀಚೆಗಷ್ಟೇ ನಿಧನರಾಗಿದ್ದ ಪವಿತ್ರ ಎಂಬುವರ ಮನೆಗೆ ತೆರಳಿ ಆರ್ಥಿಕ ಸಹಾಯ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉದಯ್, ನಾನು ಎಲ್ಲಾ ವರ್ಗದವರಿಗೂ ಚಾರಿಟಬಲ್ ಟ್ರಸ್ಟ್ ವತಿಯಿಂದ ಸಹಾಯ ಮಾಡುತ್ತಾ ಬಂದಿದ್ದೇನೆ. ನಾನು ಸರ್ಕಾರಿ ಶಾಲೆಯಲ್ಲೆ ಓದಿದ್ದು ಶಾಲೆಗಳ ಅಭಿವೃದ್ದಿಗೆ ಸದಾ ನನ್ನ ಬೆಂಬಲವಿರುತ್ತದೆ.
ಈಗಾಗಲೇ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳ ಮಕ್ಕಳಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಬ್ಯಾಗ್ ಹಾಗೂ ಪಠ್ಯೇತರ ಸಾಮಾಗ್ರಿಗಳನ್ನು ಟ್ರಸ್ಟ್ ವತಿಯಿಂದ ಕೊಟ್ಟಿದ್ದೇನೆ. ಮುಂದಿನ ದಿನಗಳಲ್ಲಿ ವಿವಿಧ ಗ್ರಾಮಸ್ಥರ ಕೋರಿಕೆಯಂತೆ ದೇವಸ್ಥಾನಗಳ ಅಭಿವೃದ್ಧಿಗೆ ಆರ್ಥಿಕ ಸಹಾಯ ಮಾಡುವುದಾಗಿ ತಿಳಿಸಿದರು.
ಈಗಾಗಲೇ ಟ್ರಸ್ಟ್ ವತಿಯಿಂದ ಸಾಕಷ್ಟು ದೇವಾಲಯ ಅಭಿವೃದ್ದಿಗೆ ಧನ ಸಹಾಯ ಮಾಡುತ್ತ ಬಂದಿದ್ದೇನೆ ಎಂದ ಅವರು, ಗ್ರಾಮಸ್ಥರ ಮನವಿ ಮೇರೆಗೆ ಅಂಜನೇಯಸ್ವಾಮಿ ದೇವಸ್ಥಾನದ ಅಭಿವೃದ್ದಿಗೆ ಧನ ಸಹಾಯ ಮಾಡಿದರು.
ಈ ಸಂದರ್ಭದಲ್ಲಿ ಸಿಪಾಯಿ ಶ್ರೀನಿವಾಸ್, ಗ್ರಾ.ಪಂ.ಸದಸ್ಯ ಕದಲೂರು ತಿಮ್ಮೇಗೌಡ,ಮರಿಗೌಡ, ಬಸವರಾಜು, ನಾಥಪ್ಪ, ಚಿಕ್ಕಣ್ಣ, ದಿನೇಶ್ ಗ್ರಾಮಗಳ ಯಜಮಾನರು, ಮುಖಂಡರು ಉಪಸ್ಥಿತರಿದ್ದರು.