ರಾಜ್ಯ ವಿಧಾನಸಭಾ ಚುನಾವಣೆ ಇನ್ನೂ 3-4 ತಿಂಗಳ ಇರುವಂತೆಯೇ ಮಂಡ್ಯ ಜಿಲ್ಲೆಯ ನಾಗಮಂಗಲ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ಭಾರೀ ಪ್ರಮಾಣದಲ್ಲಿ ರಂಗೇರಿದೆ.
ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ಪೈಟರ್ ರವಿ ಅವರು ಜೆಡಿಎಸ್ ಕಾರ್ಯಕರ್ತ ಚೇತನ್ ಗೆ ಧಮ್ಕಿ ಹಾಕಿರುವ ಆಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಿಂದ ಕೆರಳಿರುವ ಜೆಡಿಎಸ್ ನಾಯಕರು ಪೈಟರ್ ರವಿ ಅವರು ಕ್ರಿಮಿನಲ್ ಹಿನ್ನೆಲೆ ಹೊಂದಿದ್ದಾರೆಂಬ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ಇದು ಜೆಡಿಎಸ್-ಬಿಜೆಪಿ ನಾಯಕರ ನಡುವೆ ಮಾತಿನ ಜಟಾಪಟಿಗೆ ಕಾರಣವಾಗಿದೆ.
ನಾಗಮಂಗಲ ಜೆಡಿಎಸ್ ಯುವ ಘಟಕದ ಸಂಘಟನಾ ಕಾರ್ಯದರ್ಶಿ ಧನುಶ್ ಗೌಡ ಅವರು ಫೈಟರ್ ರವಿ ವಿರುದ್ಧ ವಾಗ್ದಾಳಿ ನಡೆಸಿದ್ದು, ನೀನು ದೊಡ್ಡ ರೌಡಿ ಅಂತ ಗೊತ್ತು. ನೀನು ಎಂತೆಂಥ ಬೆಟ್ಟಿಂಗ್ ದಂಧೆ ಮಾಡಿದ್ದೀಯಾ ಅಂತ ಗೊತ್ತು. ಈಗ ಬಿಜೆಪಿ ಸೇರ್ಕೋಂಡಿದ್ದೀಯಾ. ಬಿಜೆಪಿ ಮುಖಂಡ ಅಂತ ಅನಿಸ್ಕೊಂಡಿದ್ದೀಯಾ. ಅದೇ ಬಿಜೆಪಿಯ ಅಶ್ವತ್ ನಾರಾಯಣ್ ಈ ಹಿಂದೆ ನಿನ್ ಮೇಲೆ ಕೇಸ್ ಹಾಕಿದ್ದ್ರು, ಅದು ಏನೇನೋ ಆಗಿತ್ತು, ಈಗ ಅದೇ ಪಕ್ಷವನ್ನು ಸೇರಿದ್ದೀಯಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ಬಿಡುಗಡೆ ಮಾಡಿ ಜಾಡಿಸಿದ್ಧಾರೆ.
ವೈರಲ್ ಆದ ಸುರೇಶ್ ಗೌಡ ಆಡಿಯೋ
ಮತ್ತೊಂದೆಡೆ ಜೆಡಿಎಸ್ ಶಾಸಕ ಸುರೇಶ್ ಗೌಡ ಅವರು ಫೈಟರ್ ರವಿ ಬೆಂಬಲಿಗನಿಗೆ ಧಮ್ಕಿ ಹಾಕಿದ್ದರೆನ್ನಲಾದ ಅಡಿಯೋ ವೈರಲ್ ಆಗಿ ಹರಿದಾಡುತ್ತಿದ್ದು, ಪೈಟರ್ ರವಿಗೆ ಸುರೇಶ್ ಗೌಡ ಸಾಲವನ್ನು ಹಿಂದಿರುಗಿಸಲಿಲ್ಲ ಎನ್ನುವ ವಿಚಾರವಾಗಿ ಫೈಟರ್ ರವಿ ಬೆಂಬಲಿಗ ಹಾಗೂ ಶಾಸಕ ಸುರೇಶ್ ಗೌಡ ನಡುವೆ ನಡೆದ ಮಾತಿನ ಚಕಮಕಿಯೂ ಜನರಿಗೆ ಪುಕ್ಕಟ್ಟೆ ಮನೋರಂಜನೆಯನ್ನು ಒದಗಿಸಿದೆ. ಒಟ್ಟಿನಲ್ಲಿ ನಾಗಮಂಗಲ ಕ್ಷೇತ್ರದ ರಾಜಕೀಯವೂ ಪರಸ್ಪರ ರಾಜಕೀಯ ಮುಖಂಡರ ವಾಗ್ಯುದ್ಧಕ್ಕೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ತಾರಕಕ್ಕೇರುವ ಎಲ್ಲಾ ಸಾಧ್ಯತೆಗಳಿದೆ.