ಹಿಂದೆ ದಲಿತರು ಹರಿದ ಬಟ್ಟೆ, ಹರಕಲು ಮನೆಗಳಲ್ಲಿ ವಾಸವಿದ್ದರು. ಇಂದು ಉತ್ತಮವಾದ ಬಟ್ಟೆ, ಮನೆಗಳನ್ನು ಹೊಂದಿದ್ದರೂ ದಲಿತರ ಸಾಮಾಜಿಕ ಸ್ಥಿತಿಗತಿ ಮಾತ್ರ ಬದಲಾಗಿಲ್ಲ ಎಂದು ಎಲ್ಐಸಿ ನಿವೃತ್ತ ವ್ಯವಸ್ಥಾಪಕ ನಿರಂಜನ್ ಅಭಿಪ್ರಾಯಪಟ್ಟರು.
ಮಂಡ್ಯದ ಗಾಂಧಿನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ಅಭಿವೃದ್ಧಿ ಸಂಘದ ವತಿಯಿಂದ ಏರ್ಪಡಿಸಿದ್ದ ಅಂಬೇಡ್ಕರ್ರವರ ಪರಿನಿರ್ವಾಣ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ನಮಗೆ ಸಂವಿಧಾನದ ಮೂಲಕ ಎಲ್ಲ ರೀತಿಯ ಹಕ್ಕುಗಳು ಲಭ್ಯವಾಗಿವೆ. ಇದೇ ಗಾಂಧಿನಗರ ಪ್ರದೇಶದಲ್ಲಿ ಹಿಂದೆ ಗುಡಿಸಲುಗಳಿದ್ದವು. ಈಗ ಆರ್ ಸಿಸಿ ಮನೆಗಳೇ ಇವೆ. ಆದರೂ ದಲಿತರ ಸಾಮಾಜಿಕ ಸ್ಥಿತಿಗತಿಗಳು ಮಾತ್ರ ಬದಲಾಗದಿರುವುದನ್ನು ನಾವು ಕಾಣುತ್ತಿದ್ದೇವೆ. ಈ ಪರಿಸ್ಥಿತಿಯನ್ನು ಬದಲಿಸಲು ಯಾವೊಬ್ಬ ರಾಜಕಾರಣಿಯೂ ಮುಂದಾಗುವುದಿಲ್ಲ. ಅವರಿಗೆ ನಾವು ಸಂಘಟಿತರಾಗುವುದು ಬೇಕಾಗಿಲ್ಲ. ಆದ್ದರಿಂದ ಅಂಬೇಡ್ಕರ್ ಅವರ ದೂರದೃಷ್ಠಿಯ ವಿವೇಚನೆಯನ್ನು ನಾವು ಎಚ್ಚರಿಕೆಯಿಂದ ಪಾಲಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಗಾಂಧಿನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ಲೋಕೇಶ್, ಉಪಾಧ್ಯಕ್ಷೆ ಅನುರಾಧ, ಪ್ರಧಾನ ಕಾರ್ಯದರ್ಶಿ ತುಳಸೀಧರ್, ಹೇಮಂತ್, ತಮಣ್ಣ ರಾಜು, ಜಗದೀಶ್, ಉಷಾ, ರಾಚಯ್ಯ ಮತ್ತಿತರರಿದ್ದರು.