“ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೊಗಳನ್ನು ಬಿಜೆಪಿಯ ಮುಖಂಡ ದೇವರಾಜೇಗೌಡ ಅವರಿಗೆ ಮಾತ್ರ ಕೊಟ್ಟಿದ್ದೆ. ವಿಡಿಯೊಗಳು ಲೀಕ್ ಆಗಿರುವುದರ ಹಿಂದೆ ಕಾಂಗ್ರೆಸ್ ನಾಯಕರ ಪಾತ್ರವಿಲ್ಲ” ಎಂದು ಪ್ರಜ್ವಲ್ ರೇವಣ್ಣನ ಡ್ರೈವರ್ ಆಗಿದ್ದ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ.
ಈ ಕುರಿತು ವಿಡಿಯೊ ಹೇಳಿಕೆ ಬಿಡುಗಡೆ ಮಾಡಿರುವ ಅವರು, “ಕಳೆದ ಹದಿನೈದು ವರ್ಷಗಳಿಂದ ರೇವಣ್ಣನವರ ಕುಟುಂಬದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದೆ. ನನ್ನ ಜಮೀನನ್ನೆಲ್ಲ ಪ್ರಜ್ವಲ್ ಕುಟುಂಬದ ಹೆಸರಿಗೆ ಬರೆಸಿಕೊಂಡು, ನನಗೆ ಮತ್ತು ನನ್ನ ಹೆಂಡತಿಗೆ ಹಲ್ಲೆ ಮಾಡಿದ್ದರು. ಮಾನಸಿಕವಾಗಿ ಹಿಂಸೆ ನೀಡಿದ್ದರು. ಒಂದು ವರ್ಷದ ಹಿಂದೆ ಕೆಲಸ ಬಿಟ್ಟಿದ್ದೆ” ಎಂದು ತಿಳಿಸಿದ್ದಾರೆ.
“ಅವರ ಮನೆಯಿಂದ ಹೊರಗೆ ಬಂದ ಮೇಲೆ ರೇವಣ್ಣ ಫ್ಯಾಮಿಲಿ ವಿರುದ್ಧ ಕೇಸ್ ಹಾಕಲು ಪ್ರಯತ್ನಿಸುತ್ತಿದ್ದೆ. ಇದೇ ಸಂದರ್ಭದಲ್ಲಿ ರೇವಣ್ಣ ಫ್ಯಾಮಿಲಿ ವಿರುದ್ಧ ಹೋರಾಡುತ್ತಿದ್ದ ಮತ್ತು ಬಿಜೆಪಿಯ ಪರಾಜಿತ ಅಭ್ಯರ್ಥಿ ದೇವರಾಜೇಗೌಡ ಅವರನ್ನು ಭೇಟಿ ಮಾಡಿದೆ. ಬೇರೆ ಯಾರಿಂದಲೂ ನನಗೆ ನ್ಯಾಯ ಸಿಗುವುದಿಲ್ಲ, ದೇವರಾಜೇಗೌಡ ಅವರೇ ಸೂಕ್ತ ಎಂದು ಭಾವಿಸಿ ಅವರ ಬಳಿ ನನ್ನ ಕಷ್ಟವನ್ನೆಲ್ಲ ಹೇಳಿಕೊಂಡೆ” ಎಂದು ವಿವರಿಸಿದ್ದಾರೆ.
“ನಿಮಗೆ ನ್ಯಾಯ ದೊರಕಿಸಿಕೊಡುತ್ತೇನೆ ಎಂದು ದೇವರಾಜೇಗೌಡರು ತಿಳಿಸಿದ್ದರು. ಅವರು ವಿಳಂಬ ಮಾಡುತ್ತಿದ್ದರಿಂದ ಮತ್ತೊಬ್ಬ ವಕೀಲರನ್ನು ಹುಡುಕಲು ಶುರು ಮಾಡಿದೆ. ಹೀಗಿರುವಾಗ ಮತ್ತೊಮ್ಮೆ ನನ್ನನ್ನು ಕರೆಸಿಕೊಂಡಿದ್ದರು. ನೀನು ಕೋರ್ಟ್ನಲ್ಲಿ ಹೋರಾಟ ಮಾಡಿದರೆ ನ್ಯಾಯ ಸಿಗುವುದಿಲ್ಲ, ಜನರಿಗೆ ಸತ್ಯ ತಿಳಿಸಬೇಕು ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿಸಿದ್ದರು. ಅವರೂ ಹೇಳಿಕೆಗಳನ್ನು ಕೊಟ್ಟಿದ್ದರು” ಎಂದು ಘಟನಾವಳಿಗಳನ್ನು ಬಿಚ್ಚಿಟ್ಟಿದ್ದಾರೆ.
“ಇದಾದ ಮೇಲೆ ಪ್ರಜ್ವಲ್ ರೇವಣ್ಣ ಅವರು ನನ್ನ ವಿರುದ್ಧ ಸ್ಟೇ ಆರ್ಡರ್ ತಂದಿದ್ದರು. ಕಾರ್ತಿಕ್ ಅವರು ಯಾವುದೇ ವಿಡಿಯೊಗಳನ್ನು, ಫೋಟೋಗಳನ್ನು ರಿಲೀಸ್ ಮಾಡಬಾರದೆಂದು ಸ್ಟೇನಲ್ಲಿ ತಿಳಿಸಲಾಗಿತ್ತು. ದೇವರಾಜೇಗೌಡರು ಲಾಯರ್ ಆಗಿದ್ದರಿಂದ ಅವರನ್ನು ಭೇಟಿಯಾಗಿ, ಸ್ಟೇ ಬಂದಿರುವ ಕುರಿತು ಮಾತನಾಡಿದೆ. ನಿನ್ನ ಬಳಿ ಯಾವುದೋ ಫೋಟೋಗಳು, ವಿಡಿಯೊಗಳು ಇರುವುದರಿಂದ ಸ್ಟೇ ತಂದಿದ್ದಾರೆ ಎಂದು ವಿವರಿಸಿದರು. ನನ್ನ ಬಳಿ ವಿಡಿಯೊಗಳಿವೆ ಎಂದು ಇವರಿಗೆ ಹೇಳಿದವರು ಯಾರು ಎಂದು ದೇವರಾಜೇಗೌಡರಲ್ಲಿ ಕೇಳಿದೆ. ನನಗೆ ಗೊತ್ತಿಲ್ಲಪ್ಪ, ನೀನುಂಟು, ಪ್ರಜ್ವಲ್ ರೇವಣ್ಣ ಉಂಟು ಎಂದು ಪ್ರತಿಕ್ರಿಯಿಸಿದ್ದರು. ಕೋರ್ಟ್ನಲ್ಲಿ ಹೇಗೆ ಉತ್ತರಿಸುವುದು ಎಂದು ಕೇಳಿದಾಗ- ನಿನ್ನ ಬಳಿ ಇರುವ ಫೋಟೋಗಳು ಮತ್ತು ವಿಡಿಯೊಗಳನ್ನು ನನಗೆ ಕೊಡು, ಜಡ್ಜ್ ಮುಂದೆಯೇ ನೇರವಾಗಿ ಸಲ್ಲಿಸುತ್ತೇನೆ, ಇನ್ನೊಬ್ಬರಿಗೆ ಅವುಗಳನ್ನು ತೋರಿಸುವುದಿಲ್ಲ ಎಂದು ಬಿಜೆಪಿಯ ದೇವರಾಜೇಗೌಡರು ಹೇಳಿದ್ದರು. ಅವರನ್ನು ನಂಬಿ, ನನ್ನ ಬಳಿ ಇದ್ದ ಒಂದು ಕಾಪಿಯನ್ನು ಅವರಿಗೆ ವರ್ಗಾಯಿಸಿದ್ದೆ. ಅವುಗಳನ್ನು ಸ್ವಾರ್ಥಕ್ಕೆ ಬಳಸಿಕೊಂಡರೋ, ಯಾವುದಕ್ಕಾಗಿ ಬಳಸಿಕೊಂಡರೋ ಗೊತ್ತಿಲ್ಲ. ವಕಾಲತ್ತು ಮುಂದುವರಿಸಿ ಎಂದು ಹೇಳಿ ಸಹಿಗಳನ್ನು ಮಾಡಿ ವಾಪಸ್ ಬಂದಿದ್ದೆ” ಎಂದು ಕಾರ್ತಿಕ್ ಹೇಳಿದ್ದಾರೆ.
“ಅವರು ಪ್ರಕರಣವನ್ನು ಮುಂದುವರಿಸಿರಲಿಲ್ಲ. ಒಂದು ತಿಂಗಳಾದ ಬಳಿಕ ಮತ್ತೆ ಅವರನ್ನು ಭೇಟಿಯಾಗಿ ವಿಚಾರಿಸಿದೆ. ಸದ್ಯಕ್ಕೆ ಏನೂ ಮಾಡಲು ಆಗಲ್ಲ. ಮುಂದಿನ ಹೆಜ್ಜೆಯಲ್ಲಿ ನೋಡೋಣ ಸುಮ್ಮನಿರು ಎಂದಿದ್ದರು. ನಾನು ಸುಮ್ಮನಾದೆ. ಅವರ ಬಳಿ ಇದ್ದ ಕಾಪಿಯನ್ನು ನಾನು ಮತ್ತೆ ಕೇಳಲು ಹೋಗಲಿಲ್ಲ” ಎಂದಿದ್ದಾರೆ.
“ರೇವಣ್ಣ ಮತ್ತು ದೇವರಾಜೇಗೌಡರಿಗೂ ಜಗಳವಿರುತ್ತದೆ. ನನ್ನ ಬಳಿ ವಿಡಿಯೊಗಳಿವೆ, ಅವುಗಳನ್ನು ಬಯಲು ಮಾಡುತ್ತೇನೆ ಎಂದು ಸುದ್ದಿಗೋಷ್ಠಿ ನಡೆಸಿ ದೇವರಾಜೇಗೌಡರು ಹೇಳಿಕೆ ನೀಡುತ್ತಾರೆ. ನಂತರ ಅವರನ್ನು ಭೇಟಿಯಾಗಿ, ಯಾಕೆ ಹೀಗೆ ಮಾಡಿದ್ರಿ ಅಣ್ಣ ಅಂತ ಕೇಳಿದೆ. ನಿನಗೂ ಇದಕ್ಕೂ ಸಂಬಂಧವಿಲ್ಲ, ಸುಮ್ಮನೆ ಇರು ಎಂದು ಪ್ರತಿಕ್ರಿಯಿಸಿದರು. ಇದಾದ ಬಳಿಕ, ಪ್ರಜ್ವಲ್ ರೇವಣ್ಣನವರಿಗೆ ಟಿಕೆಟ್ ಕೊಡಬಾರದು ಎಂದು ಬಿಜೆಪಿ ನಾಯಕರಿಗೆ ಪತ್ರಗಳನ್ನು ದೇವರಾಜೇಗೌಡರು ಬರೆಯುತ್ತಾರೆ. ನನಗೂ ಒಂದು ಕಾಪಿ ಕಳಿಸಿದ್ದರು. ನಿನಗೆ ಕೋರ್ಟ್ನಲ್ಲಿ ನ್ಯಾಯ ಸಿಗದಿದ್ದರೂ ಇಲ್ಲಿ ಸಿಗುತ್ತದೆ ಎಂದು ಹೇಳಿದ್ದರು. ನನಗೆ ನ್ಯಾಯ ಸಿಕ್ಕರೆ ಸಾಕು ಎಂದು ಸುಮ್ಮನಾದೆ” ಎಂದು ಕಾರ್ತಿಕ್ ಹೇಳಿಕೊಂಡಿದ್ದಾರೆ.
“ನಿನ್ನೆ ಮೊನ್ನೆ ದೇವರಾಜೇಗೌಡ ಅವರೇ ಪತ್ರಿಕಾಗೋಷ್ಠಿ ನಡೆಸಿ, ಪೆನ್ಡ್ರೈವ್ ಅನ್ನು ಕಾರ್ತಿಕ್ ನನಗೆ ತಂದು ಕೊಟ್ಟ. ನನ್ನನ್ನು ಭೇಟಿಯಾಗುವ ಮುಂಚೆಯೇ ಕಾಂಗ್ರೆಸ್ ಮುಖಂಡರಿಗೂ ಕೊಟ್ಟಿದ್ದ ಎಂದು ಸುಳ್ಳು ಆಪಾದನೆ ಮಾಡಿದ್ದಾರೆ. ಆದರೆ ನಾನು ಕೊಟ್ಟಿದ್ದು ದೇವರಾಜೇಗೌಡರಿಗೆ ಮಾತ್ರ. ಬಿಜೆಪಿ ಮುಖಂಡರು ಹಾಗೂ ಹೊಳೆನರಸೀಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿಯಾಗಿದ್ದ ದೇವರಾಜೇಗೌಡ ಗೌಡರಿಗೆ ಬಿಟ್ಟರೆ ಯಾವುದೇ ಕಾಂಗ್ರೆಸ್ ನಾಯಕರಿಗೆ ವಿಡಿಯೊಗಳನ್ನಾಗಲೀ, ಫೋಟೋಗಳನ್ನಾಗಲೀ ಕೊಟ್ಟಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ.
“ಕಾಂಗ್ರೆಸ್ ನಾಯಕರಿಗೆ ಏಕೆ ಕೊಡಲಿಲ್ಲ ಅಂದರೆ- ಅವರಿಗೂ (ರೇವಣ್ಣ ಫ್ಯಾಮಿಲಿಗೂ) ಕಾಂಗ್ರೆಸ್ನವರಿಗೂ ಒಳ್ಳೆಯ ಬಾಂಧವ್ಯವಿದೆ, ಪ್ರಕರಣವನ್ನು ಬಿ ರಿಪೋರ್ಟ್ ಹಾಕಿಬಿಡುತ್ತಾರೆಂದು ನಾನು ಕಾಂಗ್ರೆಸ್ನವರನ್ನು ನಂಬಲಿಲ್ಲ. ಹೀಗಾಗಿ ದೇವರಾಜೇಗೌಡರನ್ನು ಮಾತ್ರ ಭೇಟಿಯಾಗಿದ್ದೆ. ಆದರೆ ಇವರೂ ನನಗೆ ಮೋಸ ಮಾಡಿದ್ದಾರೆ. ಪೆನ್ಡ್ರೈವ್ ಅನ್ನು ಇವರೇ ಇನ್ನೊಬ್ಬರಿಗೆ ಹಂಚಿದ್ದಾರೋ ನನಗೆ ಗೊತ್ತಿಲ್ಲ. ಇವರೊಬ್ಬರಿಗೆ ಬಿಟ್ಟರೆ ನಾನು ಯಾರಿಗೂ ಪೆನ್ಡ್ರೈವ್ ಕೊಟ್ಟಿಲ್ಲ. ದೇವರಾಜೇಗೌಡ ಅವರು ಬಚಾವಾಗಲು ನನ್ನ ಮೇಲೆ ಇಲ್ಲಸಲ್ಲದ ಅಪವಾದ ಹೊರಿಸುತ್ತಿದ್ದಾರೆ. ನಾನು ಕಾಂಗ್ರೆಸ್ನವರಿಗೆ ವಿಡಿಯೊ, ಫೋಟೋಗಳನ್ನು ಕೊಡುವುದಾಗಿದ್ದರೆ, ನಿಮ್ಮ ಬಳಿ ನ್ಯಾಯ ಕೇಳಲು ಯಾಕೆ ಬರುತ್ತಿದ್ದೆ ಸ್ವಾಮಿ?” ಎಂದು ಪ್ರಶ್ನಿಸಿದ್ದಾರೆ.
“ಆಗಿರುವ ಅನ್ಯಾಯಗಳನ್ನು ಕಳೆದ ಹದಿನೈದು ವರ್ಷಗಳಿಂದ ಅವರ ಮನೆಯಲ್ಲಿದ್ದು ನೋಡಿದ್ದೇನೆ. ಯಾರ್ಯಾರು ಬಂದಿದ್ದಾರೆ, ಯಾರ್ಯಾರು ಹೋಗಿದ್ದಾರೆ ಎಂದು ಗೊತ್ತಿದೆ. ಅವರ ಒಳ್ಳೆಯತನ, ಕೆಟ್ಟತನ ಎಲ್ಲವೂ ತಿಳಿದಿದೆ. ನನಗಾಗಿರುವ ಅನ್ಯಾಯ ಯಾರಿಗೂ ಆಗಬಾರದೆಂದು ಪ್ರೆಸ್ ಮೀಟ್ ಮಾಡಿದ್ದೆ. ಮೊನ್ನೆ ಮತ್ತೊಬ್ಬರು ಬಂದು ಪ್ರೆಸ್ ಮೀಟ್ ಮಾಡಿದ್ದಾರೆ. ಇದೇ ರೀತಿಯಲ್ಲಿ ಬೇರೆಯವರು ಹೊರಬಂದು ಸುದ್ದಿಗೋಷ್ಠಿಗಳನ್ನು ನಡೆಸಬೇಕೆಂದು ಕೋರುತ್ತೇನೆ. ಇಂದು ಎಸ್ಐಟಿ ಮುಂದೆ ಹಾಜರಾಗಿ, ನನ್ನಲ್ಲಿರುವ ಎಲ್ಲ ದಾಖಲೆಗಳನ್ನು ಸಲ್ಲಿಸಿ, ನನಗೆ ಗೊತ್ತಿರುವ ವಿಚಾರಗಳನ್ನೆಲ್ಲ ತಿಳಿಸುವೆ. ಇದಾದ ಮೇಲೆ ನನಗೆ ನ್ಯಾಯ ಸಿಗುತ್ತದೆ ಅಂದುಕೊಂಡಿದ್ದೇನೆ. ಎಸ್ಐಟಿ ಭೇಟಿ ಮಾಡಿದ ಮೇಲೆ ವಿವರವಾಗಿ ಎಲ್ಲವನ್ನೂ ಮಾಧ್ಯಮಗಳ ಮುಂದೆಯೂ ತಿಳಿಸುತ್ತೇನೆ” ಎಂದು ತಿಳಿಸಿದ್ದಾರೆ.