ಪಂಚರತ್ನ ಯಾತ್ರೆ ಮಳವಳ್ಳಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಹೆಲಿಕಾಪ್ಟರ್ ನಲ್ಲಿ ಪುಷ್ಪಾರ್ಚನೆ ಮಾಡುವ ಮೂಲಕ ಅದ್ಧೂರಿ ಸ್ವಾಗತ ಕೋರಲಾಯಿತು.
ಮಳವಳ್ಳಿ ಪಟ್ಟಣದಲ್ಲಿ ನೆರೆದಿದ್ದ ಸಹಸ್ರಾರು ಜನರು ಎಚ್.ಡಿ.ಕುಮಾರಸ್ವಾಮಿ ಬಂದೊಡನೆ ಹರ್ಷೋದ್ಘಾರ ಮಾಡಿದರು. ಬಳಿಕ ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಜೆಸಿಬಿ ಮೂಲಕ ಪುಷ್ಪವೃಷ್ಟಿ ಸುರಿಸಿ ಅಭೂತಪೂರ್ವ ಸ್ವಾಗತ ಕೋರಿದರು.
ಅದ್ದೂರಿ ಸ್ವಾಗತ
ಬೆಳಿಗ್ಗೆ ಪಂಚರತ್ನ ಯಾತ್ರೆ ಹಲಗೂರಿಗೆ ಬಂದ ಸಂದರ್ಭದಲ್ಲಿ ಕುಮಾರಸ್ವಾಮಿಗೆ ಜಾನಪದ ಕಲಾ ತಂಡಗಳ ಮೂಲಕ ಅದ್ದೂರಿಯಾಗಿ ಭರ್ಜರಿ ಸ್ವಾಗತ ನೀಡಲಾಯಿತು. ಯಾತ್ರೆಯುದ್ದಕ್ಕೂ ಬೈಕ್ ಜಾಥಾ ನಡೆಯಿತು.ಕುಮಾರಸ್ವಾಮಿಯವರು ದಾರಿಯುದ್ದಕ್ಕೂ ಜನರಿಗೆ ಕೈ ಮುಗಿದು, ಕೈ ಬೀಸಿ ಕೃತಜ್ಞತೆ ಸಲ್ಲಿಸುತ್ತಿದ್ದರೆ,ಜನರು ಕೂಡ ಪ್ರತಿಯಾಗಿ ನಮಸ್ಕರಿಸಿದರು.
ಮಳವಳ್ಳಿ ತಾಲೂಕಿನ ಹಾಡ್ಲಿ ಸರ್ಕಲ್ ನಲ್ಲಿ ಪಂಚರತ್ನ ರಥಯಾತ್ರೆ ನಡೆಸುತ್ತಿರುವ ಕುಮಾರಸ್ವಾಮಿ ನೋಡಲು ಬಂದ ಕಾರ್ಯಕರ್ತರು. ಮನೆ, ವಾಣಿಜ್ಯ ಮಳಿಗೆಗಳ ಮೇಲೆ ನಿಂತು ಭಾಷಣ ಆಲಿಸಿದರು. ಚಪ್ಪಾಳೆ, ಶಿಳ್ಳೆ ಹಾಕುವ ಮೂಲಕ ಬೆಂಬಲ ಸೂಚಿಸಿದರು.
ಈಡುಗಾಯಿ ದೃಷ್ಟಿ
ಅಂಚೇಗೌಡನದೊಡ್ಡಿ ಗ್ರಾಮದ ಬಳಿ 101 ಈಡುಗಾಯಿ ಹೊಡೆದು ಕಾರ್ಯಕರ್ತರು ಕುಮಾರಸ್ವಾಮಿಗೆ ದೃಷ್ಟಿ ತೆಗೆದರು. ಮತ್ತಿತಾಳೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಮಾಡಿಸಿಕೊಂಡು ಬಂದು ಈಡುಗಾಯಿ ಹೊಡೆದರು.
ಪೂರ್ಣ ಕುಂಭ ಸ್ವಾಗತ
ಬೆಳಕವಾಡಿ ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿಗೆ ಮಹಿಳೆಯರು ಆರತಿ ಎತ್ತಿ ಪೂರ್ಣಕುಂಭ ಸ್ವಾಗತ ನೀಡಿದರು.ಬೃಹತ್ ಜೋಳದ ಹಾರ ಹಾಕಿ ಅದ್ದೂರಿ ಸ್ವಾಗತ ಕೋರಿದ ಗ್ರಾಮಸ್ಥರು.ಕ್ರೇನ್ ಮೂಲಕ ಬೃಹತ್ ಮೆಕ್ಕೆ ಜೋಳದ ಹಾರ ಸಮರ್ಪಣೆ ಮಾಡಿದರು.