ಕೇಂದ್ರ ಸಚಿವ ಅಮಿತ್ ಶಾ ಸೂಚನೆಯ ಮೇರೆಗೆ ಮಂಡ್ಯದ ಪೊಲೀಸರು ಶಾಂತಿಯುವ ಹೋರಾಟ ನಡೆಸುತ್ತಿದ್ದ ರೈತರ ಮೇಲೆ ದೌರ್ಜನ್ಯ ಮತ್ತು ದಬ್ಬಾಳಿಕೆ ನಡೆಸಿದ್ದಾರೆಂದು ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆರೋಪಿಸಿದ್ದಾರೆ.
ಮಂಡ್ಯದಲ್ಲಿ ಧರಣಿನಿರತ ರೈತರನ್ನು ಬಂಧಿಸಿದ ನಂತರ ಬೆಂಗಳೂರಿನಿಂದ ಮಂಡ್ಯಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಪೊಲೀಸರ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ರಕ್ತಾಭಿಷೇಕ ಮಾಡೋದು ಅಪರಾಧನಾ ?
ಸಿಎಂ ಬಸವರಾಜ ಬೊಮ್ಮಾಯಿ ಅವರ ಪ್ರತಿಮೆಗೆ ರಕ್ತಾಭಿಷೇಕ ಮಾಡೋದು ಅಪರಾಧನಾ ? ಆಗಿದ್ರೆ ಬಂಧಿಸಲಿ, ಎಫ್ ಐ ಆರ್ ದಾಖಲು ಮಾಡಲಿ, ಆದರೆ ಪೊಲೀಸರೇ ಗೂಂಡಾಗಿರಿ ಮಾಡಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇವರಿಗೆ ಅಮಿಶಾ ಶಾ ಅವರಿಂದ ಶಹಬ್ಬಾಶ್ ಗಿರಿ ಬೇಕಾಗಿದೆ. ಅದಕ್ಕಾಗಿ ರೈತರ ಮೇಲೆ ಖಾಕಿ ಹಾಕಿಕೊಂಡು ಗೂಂಡಾಗಿರಿ ಮಾಡಿದ್ದಾರೆಂದು ಕಿಡಿಕಾರಿದರು.
ಕ್ಷಮಾಯಾಚನೆಗೆ ಆಗ್ರಹ
ಪೊಲೀಸರು ಮಾಡಿರುವ ದೌರ್ಜನ್ಯಕ್ಕೆ ಕೂಡಲೇ ಕ್ಷಮೆಯಾಚನೆ ಮಾಡಬೇಕು. ಅಲ್ಲದೇ ನಾವು ಶಾಂತಿಯುತ ಹೋರಾಟ ಮಾಡಲು, ಮೊದಲಿದ್ದ ಜಾಗದಲ್ಲೆ ಶಾಮಿಯಾನ ಹಾಕಿ ವ್ಯವಸ್ಥೆ ಮಾಡಿಕೊಡಬೇಕು. ಇಲ್ಲವಾದಲ್ಲಿ ರೈತರ ಹೋರಾಟ ತೀವ್ರ ರೂಪ ಪಡೆಯಲಿದೆ ಎಚ್ಚರಿಸಿದರು.
ಈಗಾಗಲೇ ಸುತ್ತಮುತ್ತಲಿನ ಎಲ್ಲಾ ಜಿಲ್ಲೆಯ ರೈತರಿಗೆ ಕರೆ ನೀಡಿದ್ದೇವೆ, ಈಗಾಗಲೇ ರಾಮನಗರ, ಮೈಸೂರಿನಲ್ಲಿ ಪ್ರತಿಭಟನೆಗಳು ಪ್ರಾರಂಭವಾಗಿವೆ. ನಾಳೆಗೆ ಹೋರಾಟದ ಸ್ವರೂಪ ಬದಲಾಗಲಿದೆ ಎಂದು ಹೇಳಿದರು.