ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಮಂಡ್ಯ ಜಿಲ್ಲೆಯಲ್ಲಿ ನಡೆಸಿದ್ದು, ಪಂಚರತ್ನ ಯಾತ್ರೆಯಲ್ಲ, ವಂಚನ ಯಾತ್ರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಿ.ಡಿ.ಗಂಗಾಧರ್ ವಾಗ್ಧಾಳಿ ನಡೆಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ರೈತರು ಕಳೆದ 52 ದಿನಗಳಿಂದ ಕಬ್ಬು ಹಾಗೂ ಹಾಲಿಗೆ ವೈಜ್ಞಾನಿಕ ಬೆಲೆ ನೀಡುವಂತೆ ಆಗ್ರಹಿಸಿ ಹೋರಾಟ ಮಾಡುತ್ತಿದ್ದಾರೆ, ಕುಮಾರಸ್ವಾಮಿ ಅವರು ಕನಿಷ್ಠ ಅವರ ಕಷ್ಟ ಕೇಳುವ ಕೆಲಸವನ್ನು ಮಾಡಲಿಲ್ಲ, ಜಿಲ್ಲೆಯಲ್ಲಿ 6 ಜನ ಜೆಡಿಎಸ್ ಶಾಸಕರಿದ್ದಾರೆ, ಆ ಪೈಕಿ ಯಾರು ಕೂಡ ರೈತರನ್ನು ಭೇಟಿ ಮಾಡಿ ಮಾತುಕತೆ ನಡೆಸಿಲ್ಲ ಎಂದು ಕಿಡಿಕಾರಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಎಲ್ಲಾ ಸ್ಥಳೀಯ ಚುನಾವಣೆಗಳಲ್ಲಿ ಪ್ರಜ್ಞಾವಂತ ಮತದಾರರು ಕಾಂಗ್ರೆಸ್ ಪಕ್ಷವನ್ನ ಬೆಂಬಲಿಸಿದ್ದಾರೆ. ಇನ್ನು ಮುಂದೆ ಜೆಡಿಎಸ್ ನಾಯಕರು ಸುಳ್ಳು ಭರವಸೆಯನ್ನು ನೀಡಿ, ಜನರನ್ನು ಯಾಮಾರಿಸಲು ಸಾಧ್ಯವಿಲ್ಲ ಎಂದರು.
ಕುಮಾರಸ್ವಾಮಿ ಅವರ ಸಾಧನೆ ಏನು ?
ಮಂಡ್ಯ ಜಿಲ್ಲೆಗೆ ಕುಮಾರಸ್ವಾಮಿ ನೀಡಿದ ಕೊಡುಗೆಗಳೇನು ? ಅಧಿಕಾರದಲ್ಲಿದ್ಧಾಗ ಮೈಷುಗರ್ ಕಾರ್ಖಾನೆ ಬಾಗಿಲು ಮುಚ್ಚಿಸಿದ್ದು ನಿಮ್ಮ ಸಾಧನೆ. ಮಂಡ್ಯ ಜಿಲ್ಲಾ ಪಂಚಾಯತ್ ನಲ್ಲಿ 40 ತಿಂಗಳು ಕಾಲ ಯಾವುದೇ ಕೆಲಸ ನಡೆಯದಂತೆ ಬಾಗಿಲು ಮುಚ್ಚಿಸಿದ್ದು, ಅಲ್ಲದೇ ಮನ್ಮುಲ್ ಹಾಲು-ನೀರು ಹಗರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗದಂತೆ ನೋಡಿಕೊಂಡಿದ್ದು, ನಿಮ್ಮ ಸಾಧನೆಯಲ್ಲವೇ ಕುಮಾರಸ್ವಾಮೀಯವರೇ ಎಂದು ಪ್ರಶ್ನಿಸಿದರು.
ಮಂಡ್ಯ ಜಿಲ್ಲೆಗೆ ಮೆಡಿಕಲ್ ಕಾಲೇಜು ಸೇರಿದಂತೆ ಏನಾದರೂ ಅಭಿವೃದ್ಧಿ ಕೆಲಸಗಳು ಆಗಿದ್ದರೆ, ಅದು 2004 ರಿಂದ 2008 ಅವದಿಯಲ್ಲಿ, ನಮ್ಮ ನಾಯಕ ಚಲುವರಾಯಸ್ವಾಮಿ ಅವರ ನೇತೃತ್ವದಲ್ಲಿ ಆಗಿದೆ ಎಂದು ಸಮರ್ಥಿಸಿಕೊಂಡರು.
ರೈತರ ಮೇಲಿನ ದೌರ್ಜನ್ಯಕ್ಕೆ ಖಂಡನೆ
ಶಾಂತಿಯುತ ಹೋರಾಟ ನಡೆಸುತ್ತಿದ್ದ ರೈತ ಮೇಲೆ ಮಂಡ್ಯ ಪೊಲೀಸರು ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಹೋರಾಟ ನಡೆಸದಂತೆ ಶಾಮಿಯಾನ, ಟೆಂಟ್ ಕಿತ್ತು ಹಾಕುವುದು ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ. ಇದನ್ನು ಖಂಡಿಸಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಡೆಸುತ್ತದೆ ಎಂದರು.
ಗೋಷ್ಠಿಯಲ್ಲಿ ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಜನಾ ಶ್ರೀಕಾಂತ್, ಮುಖಂಡರಾದ ಮೋಹನ್ ಕುಮಾರ್, ಲಿಂಗರಾಜು, ಗುರುರಾಜ್, ರಾಮಕೃಷ್ಣ, ದೇವಣ್ಣ ಮತ್ತಿತರರಿದ್ದರು.