ಇತ್ತೀಚೆಗೆ ಕೆಲ ತಿಂಗಳುಗಳ ಹಿಂದೆ ಕರ್ನಾಟಕದಲ್ಲಿ ತಮಿಳುನಾಡಿನ ವಿಭಿನ್ನ ರೀತಿಯ ರಾಜಕೀಯ ಪ್ರಚಾರ ಕಾಲಿಟ್ಟಿದೆ. ಮೊದಲಿಗೆ ಈ ರೀತಿಯ ರಾಜಕೀಯ ಪ್ರಚಾರದ ಫ್ಲೆಕ್ಸ್ ಗಳು, ಬ್ಯಾನರ್ ಗಳು ಕಂಡು ಬಂದಿದ್ದು, ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆಯಲ್ಲಿ, ನಂತರ ಜೆಡಿಎಸ್ ಪಂಚರತ್ನ ರಥಯಾತ್ರೆ, ಈಗ ಬಿಜೆಪಿಯ ಜನ ಸಂಕಲ್ಪ ಯಾತ್ರೆ ಯಲ್ಲಿ ವಿಭಿನ್ನ ರೀತಿಯ ಪ್ರಚಾರದ ವೈಖರಿ ಕಾಣುತ್ತಿದೆ. ಇದರ ಹಿಂದೆ ತಮಿಳುನಾಡಿನ ಕಾರ್ಮಿಕರು ಶ್ರಮವಿದೆ.
ಮಂಡ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಪಕ್ಷದ ಜನ ಸಂಕಲ್ಪ ಯಾತ್ರೆ ಸಂಪೂರ್ಣ ಕೇಸರಿಮಯವಾಗಿದೆ. ಬಿಜೆಪಿ ಮುಖಂಡರು ಹಾಕಿರುವ ವಿಭಿನ್ನ ಫ್ಲೆಕ್ಸ್ ಗಳು, ಬ್ಯಾನರ್ ಗಳು,ಬಾವುಟಗಳಿಗೆ ಕೋಟ್ಯಾಂತರ ಹಣ ಖರ್ಚು ಮಾಡಲಾಗಿದೆ. ಮಂಡ್ಯ ನಗರ ಆರಂಭವಾಗುವ ಎರಡೂ ಕಡೆಗಳಿಂದ ಹತ್ತಡಿ ದೂರಕ್ಕೆ ಒಂದರಂತೆ ಬಿಜೆಪಿ ಬಾವುಟವನ್ನು ಕಬ್ಬಿಣದ ಪೋಲ್ ಹಾಕಿ ನೆಡಲಾಗಿದೆ. ಬಿಜೆಪಿ ಪಕ್ಷದ ಬಂಟಿಂಗ್ಸ್ ಅನ್ನು ಈ ಬಾವುಟವಿರುವ ಪೋಲ್ ಗಳಿಗೆ ತಳಿರು ತೋರಣದಂತೆ ಹಾಕಲಾಗಿದೆ.
ನಗರದ ಪ್ರಮುಖ ರಸ್ತೆ,ವೃತ್ತಗಳಲ್ಲಿ ಬೃಹತ್ ಗಾತ್ರದ ಚಕ್ರಾಕಾರದ ಕಟೌಟ್ ಗಳನ್ನು ಹಾಕಿರುವ ಸ್ಥಳೀಯ ಬಿಜೆಪಿ ಮುಖಂಡರು ತಮ್ಮ ಪಕ್ಷದ ವರಿಷ್ಠರ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
ತಮಿಳುನಾಡಿನ ಕಾರ್ಮಿಕರ ಕೈಚಳಕ
ಮಂಡ್ಯ ನಗರ ಸಂಪೂರ್ಣವಾಗಿ ಬಿಜೆಪಿ ಪಕ್ಷದ ಕೇಸರಿಮಯವಾಗಿಸಿರುವುದರ ಹಿಂದೆ ತಮಿಳುನಾಡಿನ ಕಾರ್ಮಿಕರ ಕೈಚಳಕವಿದೆ. ಎರಡು ದಿನಗಳಲ್ಲಿ ಮಂಡ್ಯ ನಗರ ಕೇಸರಿಮಯವಾಗಿರುವುದರ ಹಿಂದೆ ತಮಿಳುನಾಡಿನ ಸೇಲಂ ಬಳಿಯ ರಾಶಿಪುರಂ ಗ್ರಾಮದ 40 ಕಾರ್ಮಿಕರು ಶ್ರಮವಿದೆ.
ನುಡಿ ಕರ್ನಾಟಕ.ಕಾಮ್ ಮಾತನಾಡಿದ ರಾಶಿಪುರಂ ಗ್ರಾಮದ ಕಾರ್ಮಿಕರರಾದ ನಾಗರಾಜು ಮತ್ತು ರಾಜ ಮಾಣಿಕ್ಯ ಅವರು, ನಾವು ನಲವತ್ತು ಕಾರ್ಮಿಕರು ಈ ಕೆಲಸಕ್ಕೆ ಬಂದಿದ್ದೇವೆ. ನಮ್ಮ ಮಾಲೀಕರಾದ ಮುನಿಸ್ವಾಮಿ ಅವರು ಫ್ಲೆಕ್ಸ್, ಬ್ಯಾನರ್, ಬಂಟಿಂಗ್ಸ್, ಬಾವುಟ ಹಾಕಿಸುವ ಗುತ್ತಿಗೆ ಹಿಡಿದಿದ್ದಾರೆ. ಅದಕ್ಕಾಗಿ ನಾವು ಇಲ್ಲಿಗೆ ಬಂದು ಕೆಲಸ ಮಾಡುತ್ತಿದ್ದೇವೆ.
ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆ, ಜೆಡಿಎಸ್ ಪಕ್ಷದ ಪಂಚರತ್ನ ರಥಯಾತ್ರೆ ಆಗಮಿಸಿದ ಸಂದರ್ಭದಲ್ಲಿ ಪಾಂಡವಪುರ, ಶ್ರೀರಂಗಪಟ್ಟಣ, ಕೆ.ಆರ್.ಪೇಟೆಯಲ್ಲಿಯೂ ಕೂಡ ಬೃಹತ್ ಗಾತ್ರದ ಫ್ಲೆಕ್ಸ್, ಬಂಟಿಂಗ್ಸ್ ಕಟ್ಟಿದ್ದಾಗಿ ಕಾರ್ಮಿಕರಾದ ನಾಗರಾಜು, ರಾಜ ಮಾಣಿಕ್ಯ ತಿಳಿಸಿದರು.
ಇನ್ನು ಮಂಡ್ಯದ ಸರ್ಕಾರಿ ಮಹಾವಿದ್ಯಾಲಯದಲ್ಲಿ ಬಿಜೆಪಿ ಪಕ್ಷದ ಜನ ಸಂಕಲ್ಪ ಸಮಾವೇಶದ ಬೃಹತ್ ವೇದಿಕೆಯನ್ನು ಸುಮಾರು ಒಂದು ಕೋಟಿ ವೆಚ್ಚದಲ್ಲಿ ಬೆಂಗಳೂರಿನ ಗ್ಲೋಬಲ್ ಇವೆಂಟ್ಸ್ ನಿರ್ಮಿಸಿದೆ ಎಂದು ಅಭಿಷೇಕ್ ತಿಳಿಸಿದರು.