ವರದಿ : ಪಟೇಲ್ ರಾಮಕೃಷ್ಣ
ಕದಲೂರು ಉದಯ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವವನ್ನೇ ಪಡೆದಿಲ್ಲ,ಅಲ್ಲದೆ ಕಾಂಗ್ರೆಸ್ ಪಕ್ಷದ ಟಿಕೆಟ್ ಕೂಡಾ ಕೇಳಿಲ್ಲವೆಂದು ಜಿ.ಪಂ.ಮಾಜಿ ಅಧ್ಯಕ್ಷ ಮತ್ತು ಕೆಪಿಸಿಸಿ ಸದಸ್ಯ ಎಸ್.ಎಂ.ಗುರುಚರಣ್ ತಿಳಿಸಿದರು.
ಮದ್ದೂರು ತಾಲ್ಲೂಕಿನ ಕೆ.ಎಂ.ದೊಡ್ಡಿಯಲ್ಲಿ ಮಾತನಾಡಿದ ಅವರು, ಕದಲೂರು ಉದಯ್ ಅವರು ಕಾಂಗ್ರೆಸ್ ನಿಂದ ಸ್ಪರ್ಧಿಸುತ್ತೇನೆ ಟಿಕೆಟ್ ಕೊಡಿ ಎಂದು ಎಲ್ಲೂ ಕೇಳಿಲ್ಲ. ಅವರ ಬೆಂಬಲಿಗರು ಕಾಂಗ್ರೆಸ್ ನಿಂದ ಟಿಕೆಟ್ ಕೊಡಿ ಕೇಳುತ್ತಿದ್ದಾರೆಯೇ ಹೊರತು ಉದಯ್ ಅವರು ಕೇಳಿಲ್ಲ.ಕಾಂಗ್ರೆಸ್ ಕಾರ್ಯಕರ್ತರು ಇಂತಹ ಊಹಪೋಹಗಳಿಗೆ ಕಿವಿಕೊಡುವುದು ಬೇಡ ಎಂದರು.
ಮದ್ದೂರು ಕ್ಷೇತ್ರದಲ್ಲಿ ಬಹುತೇಕ ಪಕ್ಷೇತರ ಅಭ್ಯರ್ಥಿಗಳು ಇದುವರೆಗೂ ಯಾರು ಗೆದ್ದಿಲ್ಲ,ಮುಂದೆಯೂ ಗೆಲ್ಲುವುದಿಲ್ಲ.ಮದ್ದೂರು ಕ್ಷೇತ್ರದಲ್ಲಿ ಮೂರು ಮಂದಿ ಕಾಂಗ್ರೆಸ್ ಟಿಕೆಟ್ ಗೆ ಅರ್ಜಿ ಸಲ್ಲಿಸಿದ್ದೇವೆ.ಕಾಂಗ್ರೆಸ್ ವರಿಷ್ಠರು ಮೂವರಲ್ಲಿ ಒಬ್ಬರನ್ನು ಪರಿಗಣಿಸಿ ಟಿಕೆಟ್ ನೀಡುತ್ತಾರೆ ಎಂಬ ವಿಶ್ವಾಸ ನನ್ನದು ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠೆಯಿಂದ ಕೆಲಸ ನಿರ್ವಹಿಸಿದವರಿಗೆ ಮಾತ್ರ ಮಣೆ ಹಾಕುತ್ತಾರೆಯೇ ಹೊರತು, ಯಾರೋ ಟಿಕೆಟ್ ಕೇಳಿದಾಕ್ಷಣ ಕೊಡಲು ಸಿದ್ದವಿರಲ್ಲ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ಬಲಿಷ್ಠವಾಗಿದ್ದು, ಉದಯ್ ಬೆಂಬಲಿಗರು ಸಹ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದರಲ್ಲಿ ಯಾವುದೇ ಸಂಶಯವಿಲ್ಲ.ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕೆಲಸ ಮಾಡೋಣ ಎಂದರು.
ಮದ್ದೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆ ತಳಮಟ್ಟದಿಂದ ನಡೆಯುತ್ತಿದೆ ಎಂದರು.
ಈ ಸಂದರ್ಭದಲ್ಲಿ ಕ್ಯಾತಘಟ್ಟ ಗ್ರಾ.ಪಂ ವ್ಯಾಪ್ತಿಯಿಂದ ಕೆಪಿಸಿಸಿ ಸದಸ್ಯ ಎಸ್.ಗುರುಚರಣ್ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.
ಇದೇ ವೇಳೆ ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಸಂದರ್ಶ, ಮನ್ಮುಲ್ ಮಾಜಿ ನಿರ್ದೇಶಕ ಎ.ಸಿ.ಸತೀಶ್, ಮಣಿಗೆರೆ ರಾಮಚಂದ್ರೇಗೌಡ, ಮುಖಂಡರಾದ ತೊರೆಚಾಕನಹಳ್ಳಿ ಕುಮಾರ್, ರಾಜು, ಕೆಂಪೇಗೌಡ, ಬೊಮ್ಮನದೊಡ್ಡಿ ಬಸವಲಿಂಗ, ಮಠದದೊಡ್ಡಿ ಸತೀಶ್, ಮರಿಸ್ವಾಮಿ, ಪುಟ್ಟಸ್ವಾಮಿ, ಕಳ್ಳಿಮೆಳೆದೊಡ್ಡಿ ಶಶಿಧರ್, ರಾಘು, ಪೃಥ್ವಿ, ಅಣ್ಣೂರು ರಂಜು ಸೇರಿದಂತೆ ಹಲವರಿದ್ದರು.