ಪ್ರಪಂಚ ಇರುವುದು ಹೇಡಿಗಳಿಗಲ್ಲ, ಜೀವನದಲ್ಲಿ ಎದುರಾಗುವ ಸಕಲ ಸೋಲು-ಗೆಲುವುಗಳಿಗೆ ವಿಚಲಿತರಾಗದೆ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳನ್ನು ಪಾಲಿಸಿ ಸಾಧಕರಾಗಬೇಕೆಂದು ಕೃಷಿಕ ಲಯನ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು ತಿಳಿಸಿದರು.
ಮಂಡ್ಯ ತಾಲೂಕಿನ ಇಂಡವಾಳು ಗ್ರಾಮದ ಸರ್ಕಾರಿ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಹಾಗೂ ಕೃಷಿಕ ಲಯನ್ ಸಂಸ್ಥೆ ಇವರು ಆಯೋಜಿಸಿದ್ದ ಸ್ವಾಮಿ ವಿವೇಕಾನಂದರ 161ನೇ ಜನ್ಮದಿನದ ಅಂಗವಾಗಿ ಉಪನ್ಯಾಸ ಹಾಗೂ ಯುವ ಪ್ರಶಸ್ತಿ ಪ್ರಾದನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಹೇಳಿರುವ ಹಾಗೆ ಫಲಾಪೇಕ್ಷೆ, ಫಲಿತಾಂಶದ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳದೆ ಸ್ವಾರ್ಥ ರಹಿತ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದಿದ್ದಾರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.40ಕ್ಕಿಂತಲೂ ಹೆಚ್ಚು ಅಧಿಕ ಇರುವ ಯುವಜನತೆ ವಿವೇಕಾನಂದ ಜೀವನ ಚರಿತ್ರೆಯನ್ನು ಆಳವಾಗಿ ಅಭ್ಯಾಸ ಮಾಡಿ, ಅವರ ಚಿಂತನೆಗಳನ್ನು ಮೈಗೂಡಿಸಿಕೊಂಡು ಭವ್ಯಭಾರತ ನಿರ್ಮಾಣಕ್ಕೆ ಸಹಕರಿಸಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ರಾಜಣ್ಣ,ಕಂಪ್ಯೂಟರ್ ಆಪರೇಟರ್ ಸವಿತಾ , ಕ್ಷೌರವೃತ್ತಿಯ ಕರ್ಮಯೋಗಿ ಸಿದ್ದೇಶ್ ಇವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರತಿಭಾಂಜಲಿ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ ಪ್ರೊ.ಡೇವಿಡ್, ನಿಲಯ ಪಾಲಕ ಶ್ರೀನಿವಾಸ್, ತಾಲೂಕು ವಿಸ್ತರಣಾಧಿಕಾರಿ ಸತೀಶ್, ಕೃಷಿಕ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮೋಹನ್ ಕುಮಾರ್ ಮತ್ತಿತರರು ಭಾಗವಹಿಸಿದ್ದರು.