ಭಾರತೀಯ ಜನತಾ ಪಕ್ಷದ ವತಿಯಿಂದ ಜ.21ರಿಂದ 29ರವರೆಗೆ ವಿಜಯ ಸಂಕಲ್ಪ ಅಭಿಯಾನ ನಡೆಯಲಿದ್ದು, ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಜಯಪುರದ ಸಿಂದಗಿಯಲ್ಲಿ ಚಾಲನೆ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷೆ ನಳಿನ್ ಕುಮಾರ್ ಕಟೀಲ್ ಭಾಗವಹಿಸುವರು ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡ ಅಶೋಕ್ ಜಯರಾಂ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2 ಕೋಟಿ ಮತದಾರರನ್ನು ಈ ವಿಜಯ ಸಂಕಲ್ಪ ಅಭಿಯಾನದ ಮೂಲಕ ತಲುಪಲಾಗುವುದು. 10 ವಿಭಾಗಗಳಲ್ಲಿ 39 ಸಂಘಟನಾತ್ಮಕ ಜಿಲ್ಲೆಗಳಲ್ಲಿ 312 ಮಂಡಲಗಳಲ್ಲಿ ನಮ್ಮ ಕಾರ್ಯಕರ್ತರು ಬಿಜೆಪಿಯ ಸಾಧನೆಯನ್ನು ಮನೆ ಮನೆಗೆ ತಲುಪಿಸಲಿದ್ದಾರೆ ಎಂದರು.
ಕೇಂದ್ರ, ರಾಜ್ಯ ಸರಕಾರಗಳ ಸಾಧನೆಗಳ ಕುರಿತು ಕರಪತ್ರ ಹಂಚಿಕೆ ಮಾಡಲಾಗುವುದು. 2 ಕೋಟಿಗಿಂತ ಹೆಚ್ಚು ಮತದಾರರನ್ನು ಸಂಪರ್ಕಿಸಿ ಅವರ ಮನೆ ಮನೆಗೆ ತೆರಳಿ ಕರಪತ್ರ ಹಂಚಲಿದ್ದೇವೆ, ಫಲಾನುಭವಿಗಳನ್ನು ಮಾತನಾಡಿಸಿ 1 ಕೋಟಿಗಿಂತ ಹೆಚ್ಚು ಕುಟುಂಬಗಳನ್ನು ಸಂಪರ್ಕಿಸಲಿದೆ, ಬಿಜೆಪಿ ಸರ್ಕಾರಗಳ ಯೋಜನೆಗಳಿಂದ ಈ ಕುಟುಂಬಗಳಿಗೆ ತಿಳಿಸಲಿದ್ದೇವೆ, ವಾಹನಗಳ ಮೇಲೆ ಸ್ಟಿಕರ್ ಹಾಕಿಸುವ ಕೆಲಸ ನಡೆಯಲಿದೆ ಎಂದರು.
ಜ.21ರಿಂದ ಅಭಿಯಾನ ಆರಂಭವಾಗಲಿದ್ದು, ಅದಕಾಗಿ ವ್ಯವಸ್ಥಿತ ಸಿದ್ಧತೆಗಳು ನಡೆದಿವೆ, ಜಿಲ್ಲಾ ಮತ್ತು ಮಂಡಲಗಳಲ್ಲಿ ಸಭೆ ನಡೆಸಿ, ಭಾರತೀಯ ಜನತಾ ಪಕ್ಷ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವ ಗುರಿ ಇಟ್ಟುಕೊಂಡಿದ್ದು, ವಿವಿಧ ಕಾರ್ಯತಂತ್ರಗಳನ್ನು ಮಾಡಲಾಗುತ್ತಿದೆ ಎಂದು ಹೇಳಿದರು.
ಕಾರ್ಯಕರ್ತರು ಹಾಗೂ ಬಿಜೆಪಿ ಪಕ್ಷದ ಅಭಿಮಾನಿಗಳು ತಮ್ಮ ಮನೆ, ದ್ವಿಚಕ್ರವಾಹನಗಳು, ಕಾರುಗಳಿಗೆ ಅಂಟಿಸಿಕೊಳ್ಳಲು 3 ನಮೂನೆಯ ಸ್ಟಿಕರ್ ಗಳನ್ನು ವಿತರಿಸಲಾಗುವುದು, ಸರ್ಕಾರದ ಸಾಧನೆ ಬಿಂಬಿಸಲು ಹಾಗೂ ಜನ ಕಲ್ಯಾಣದೆಡೆಗೆ ಬಿಜೆಪಿಯ ಬದ್ಧತೆ ಸಾರಲು ಪ್ರತಿ ಬೂತ್ ನಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾಧನೆ ಸಾರುವ ಮತ್ತು ಯೋಜನೆಗಳ ಮಾಹಿತಿ ನೀಡುವ ಗೋಡೆ ಪೇಂಟಿಂಗ್ ಗಳನ್ನು ಮಾಡಿಸಲಾಗುತ್ತದೆ. ಫಲಾನುಭವಿಗಳನ್ನು ಗುರುತಿಸುವುದರ ಜತೆಗೆ ಅವರಿಗೆ ಫಲಾನುಭವಿ ಪತ್ರವನ್ನೂ ವಿತರಿಸಲಾಗುತ್ತದೆ. ಸಾಮಾಜಿಕ ಜಾಲತಾಣಗಳ ಮೂಲಕವೂ ನಮ್ಮ ಯೋಜನೆಗಳ ಯಶಸ್ಸನ್ನು ಸಾರಲಾಗುವುದು, ಈ ಅಭಿಯಾನದ ಅವಧಿಯಲಿ, ಒಂದು ಕೋಟಿ ಹೊಸ ಸದಸ್ಯರು ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆ ಎಂದರು.
ಸದಸ್ಯತ್ವ ಅಭಿಯಾನ ಸಂಪೂರ್ಣ ಆನ್ ಲೈನ್ ಇರಲಿದ್ದು, (ಮಿಸ್ಡ್ ಕಾಲ್), ನೋಂದಣಿಯಾದ ಸದಸ್ಯರ ಸಂಖ್ಯೆಯನ್ನು ವೆಬ್ ಸೈಟಿನಲ್ಲಿ ನೇರವಾಗಿ ನೋಡಬಹುದು, ನೋಂದಣಿ ಪ್ರಕ್ರಿಯೆ ಬಗೆಗೂ ಕಾರ್ಯಕರ್ತರಿಗೆ ಕಾರ್ಯಾಗಾರಗಳನ್ನು, ನಡೆಸಲಾಗುತ್ತದೆ ಎಂದು ನುಡಿದರು.
ಜ.21ರಿಂದ ಅಭಿಯಾನ ಆರಂಭವಾಗಲಿದ್ದು, ಅದಕ್ಕಾಗಿ ವ್ಯವಸ್ಥಿತವಾಗಿ ಸಿದ್ಧತೆ ನಡೆದಿವೆ, ಜಿಲ್ಲಾ ಮತ್ತು ಮಂಡಲಗಳಲ್ಲಿ ಸಭೆ ನಡೆಸಿ ಭಾರತೀಯ ಜನತಾ ಪಕ್ಷ ಮುಂಬರುವ ಚುನಾವಣೆಯಲ್ಲಿ 150 ಸ್ಥಾನಗಳನ್ನು ಪಡೆಯುವು ಗುರಿ ಹಾಕಿಕೊಂಡಿದೆ. ಇದೇ ಜ.29 ನಡೆಯುವ ‘ಮನ್ ಕೀ ಬಾತ್’ ಕಾರ್ಯಕ್ರಮ ಕರ್ನಾಟಕದ ಪಾಲಿಗೆ ಮತ್ತಷ್ಟು ವಿಶೇಷವಾಗಿರಲಿದೆ, ಪಕ್ಷದ ಕಾರ್ಯಕರ್ತರು ಪ್ರಮುಖರು ಒಟ್ಟಿಗೆ ಕೂತು ಪ್ರಧಾನಿ ನರೇಂದ್ರ ಮೋದಿಯವರ ಮನ್ ಕೀ ಬಾತ್ ಕಾರ್ಯಕ್ರಮ ಆಲಿಸಲಿದ್ದಾರೆ, ಬೂತ್ ಮಟ್ಟದಿಂದಲೇ ಇದು ನಡೆಯಲಿದ್ದು ಶೇ.90ರ ಬೂತ್ ಗಳು ಮನ್ ಕೀ ಬಾತ್ ಆಲಿಸಿ ದಾಖಲೆ ಮಾಡಲಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ವಕ್ತಾರ ಸಿ.ಟಿ.ಮಂಜುನಾಥ್, ಕಾಳೇಗೌಡ ಹಾಗೂ ನಾಗಾನಂದ ಉಪಸ್ಥಿತರಿದ್ದರು.