ಕೊರೊನಾ ಸಾಂಕ್ರಾಮಿಕ ಹೆಚ್ಚಳದ ಲಾಕ್ ಡೌನ್ ಸಂದರ್ಭದಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹೆಚ್ಚು ಬಾಲ್ಯವಿವಾಹ ಪ್ರಕರಣಗಳು ನಡೆದಿರುವುದು ಬೆಳಕಿಗೆ ಬಂದಿದೆ.
ಮಂಡ್ಯ ಜಿಲ್ಲೆಯಲ್ಲಿ 2020-21 ಸಾಲಿನಲ್ಲಿ 245 ಬಾಲ್ಯವಿವಾಹಗಳು ನಡೆದಿವೆ, 2021-22 ಸಾಲಿನಲ್ಲಿ 190 ಬಾಲ್ಯವಿವಾಹದ ಪ್ರಕರಣಗಳು ಮತ್ತು 2022-23 ಸಾಲಿನಲ್ಲಿ(ಇಲ್ಲಿಯವರೆಗೆ) 104 ಪ್ರಕರಣಗಳು ದಾಖಲಾಗಿವೆ ಎಂದು ವಿಕಸನ ಸಂಸ್ಥೆಯ ನಿರ್ದೇಶಕ ಮಹೇಶ್ ಚಂದ್ರಗುರು ಮಾಹಿತಿ ನೀಡಿದ್ದಾರೆ.
ಈಗಾಗಲೇ ಹೆಣ್ಣು ಭ್ರೂಣಹತ್ಯೆಯಲ್ಲಿಯೂ ಮಂಡ್ಯ ಜಿಲ್ಲೆಯು ಕುಖ್ಯಾತಿ ಪಡೆದಿದ್ದು, ಈಗ ಬಾಲ್ಯವಿವಾಹ ದಂತಹ ಸಾಮಾಜಿಕ ಪಿಡುಗಿನಲ್ಲೂ ಜಿಲ್ಲೆಯು ಮುಂದೆ ಇರುವುದು ಸರ್ಕಾರ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಮುಖ್ಯಸ್ಥರು ಕಳವಳಪಡುವಂತೆ ಮಾಡಿದೆ. ಸ್ವತಂತ್ರ ಬಂದು 75 ವರ್ಷಗಳನ್ನು ಕಳೆದರೂ ಸಾಮಾಜಿಕ ಪಿಡುಗುಗಳು ಕಡಿಮೆಯಾಗದೇ ಇರುವುದು ಜಿಲ್ಲೆಗೆ ಅಪಖ್ಯಾತಿಯನ್ನು ತಂದಿದೆ.
ಬಾಲ್ಯವಿವಾಹಕ್ಕೆ ಕಾರಣಗಳೇನು
ಜಿಲ್ಲೆಯಲ್ಲಿ ಬಾಲ್ಯವಿವಾಹಗಳು ನಡೆಯುತ್ತಿರುವುದಕ್ಕೆ ಅನರಕ್ಷತೆಯ ಪ್ರಮಾಣ ಕಡಿಮೆ ಇರುವುದೇ ಕಾರಣ ಎಂದು ಇದುವರೆಗೆ ನಂಬಿಕೊಂಡು ಬರಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್ ಬುಕ್, ಇಸ್ಸ್ಟಾಗ್ರಾಂ, ಟೆಲಿಗ್ರಾಮ್ ನಂತಹ ಹತ್ತು ಹಲವಾರು ಸಾಮಾಜಿಕ ಮಾಧ್ಯಮಗಳು ಹದಿಹರೆಯಕ್ಕೆ ಬಂದ ಯುವಕ-ಯುವತಿಯರನ್ನು ತಪ್ಪುದಾರಿಗೆಳೆಯುತ್ತಿವೆ ಎಂದು ವಿಕಸನ ಸಂಸ್ಥೆಯ ಮಹೇಶ್ ಚಂದ್ರಗುರು ಉಲ್ಲೇಖಿಸುತ್ತಾರೆ.
ಸಾಮಾಜಿಕ ಜಾಲಾತಾಣಗಳ ಮಿತಿ ಮೀರಿದ ಬಳಕೆಯೂ ಒಂದೆಡೆ ಯುವಜನರನ್ನು ತಪ್ಪುದಾರಿಗೆಳೆದರೆ ಮತ್ತೊಂದು ಕಡೆ ಯುಜಜನರ ಬದಲಾದ ಜೀವನ ಶೈಲಿಯು ಇಂತಹ ಸಾಮಾಜಿಕ ಪಿಡುಗುಗಳ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಅವರು ಹೇಳುತ್ತಾರೆ.
ಇಂತಹ ಪಿಡುಗುಗಳಿಗೆ ಪರಿಹಾರವೇನು
ಸಾಮಾಜಿಕ ಪಿಡುಗುಗಳನ್ನು ಕಡಿಮೆ ಮಾಡಬೇಕಾಗಿದ್ದರೆ, ಮೊದಲು ಈ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಪ್ರಯತ್ನವಾಗಬೇಕಿದೆ. ಅಲ್ಲದೇ 18 ವರ್ಷ ತುಂಬುವ ಮೊದಲೇ ಬಾಲ್ಯವಿವಾಹವಾದರೆ ಕಾನೂನು ಪ್ರಕಾರ ಅದು ಅಪರಾಧವಾಗುತ್ತದೆ, ಇದರಿಂದ ಶಿಕ್ಷೆ ಕಟ್ಟಿಟ್ಟ ಬುತ್ತಿ ಎಂಬುದನ್ನು ತಿಳಿಸಿ ಹೇಳಬೇಕಿದೆ.
ಅಲ್ಲದೇ ಬಾಲ್ಯವಿವಾಹವಾದವರೂ ಮುಂದೆ ಎದುರಿಸಬೇಕಾದ ಸಮಸ್ಯೆಗಳ ಬಗ್ಗೆ ತಿಳಿಸಿ ಹೇಳಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಹದಿಹರೆಯದ ಮಕ್ಕಳ ಪೋಷಕರು ತಮ್ಮ ಮಕ್ಕಳ ನಡವಳಿಕೆಗಳ ಬಗ್ಗೆ ಹೆಚ್ಚು ಗಮನ ಹರಿಸಿದರೆ ಇಂತಹ ಬಾಲ್ಯವಿವಾಹದಂತಹ ಪಿಡುಗುಗಳನ್ನು ಕಡಿಮೆ ಮಾಡಬಹುದು ಎಂದು ಮಹೇಶ್ ಚಂದ್ರಗುರು ಅವರು ಹೇಳುತ್ತಾರೆ.