ವಿಧಾನಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆಗೆ ನೇಮಕವಾಗಿರುವ 5 ಮಂದಿ ಚುನಾವಣಾ ವೆಚ್ಚ ವೀಕ್ಷಕರು ಅಬಕಾರಿ ಅಕ್ರಮಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸಬೇಕೆಂದು ಜಿಲ್ಲಾ ಮುಖ್ಯ ಚುನಾವಣಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ತಿಳಿದಿದರು.
ಮಂಡ್ಯ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು,
ಅಬಕಾರಿ ಮಾರಾಟದಲ್ಲಿ ಡೀಲರ್ ಗಳಿಂದ ಈ ಹಿಂದಿನ ತಿಂಗಳುಗಳಲ್ಲಿ ಮಾರಾಟವಾಗುತ್ತಿದ್ದ ಮದ್ಯ ಹಾಗೂ ಪ್ರಸ್ತುತ ಮಾರಾಟವಾಗುತ್ತಿರುವ ಬಗ್ಗೆ ಪ್ರತಿ ದಿನ ತಾಳೆ ಮಾಡಿ ವ್ಯತ್ಯಾಸ ಕಂಡುಬಂದಲ್ಲಿ ಪರಿಶೀಲಿಸಬೇಕು. ಮಾರಾಟದಾರರು ಕೂಪನ್ ಮೂಲಕ ಮಾರಾಟ ಮಾಡುವುದು ಕಂಡು ಬಂದಲ್ಲಿ ಕ್ರಮವಹಿಸಬೇಕು. ಅಬಕಾರಿ ಅಕ್ರಮಗಳ ಬಗ್ಗೆ ಸೂಕ್ಷ್ಮ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಬ್ಯಾಂಕುಗಳಲ್ಲಿ ಹಣದ ವಹಿವಾಟಿನ ಬಗ್ಗೆ ನಿಗಾ ವಹಿಸಿ
ಬ್ಯಾಂಕುಗಳಲ್ಲಿ ಒಂದು ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ನಗದನ್ನು ಗ್ರಾಹಕರು ತೆಗೆದ ಸಂದರ್ಭದಲ್ಲಿ ಪರಿಶೀಲಿಸಿ. ಒಂದೇ ಖಾತೆಯಿಂದ ಹಲವು ಖಾತೆಗಳಿಗೆ ಪೇಟಿಎಂ, ಗೂಗಲ್ ಪೇ ಅಥವಾ ಇನ್ನಿತರೆ ವಿಧದಿಂದ ಹಣ ಜಮೆಯಾದರೆ ಬ್ಯಾಂಕುಗಳು ನೀಡಲಾಗಿರುವ ನಮೂನೆಗಳಲ್ಲಿ ವರದಿ ನೀಡಬೇಕು. ಪ್ರತಿ ದಿನ ಬ್ಯಾಂಕ್ ಗಳಿಂದ ವರದಿ ಪಡೆದು ಕೊಳ್ಳಬೇಕು. ಗ್ರಾಮೀಣ ಭಾಗದಲ್ಲಿರುವ ಸಣ್ಣ ಬ್ಯಾಂಕ್ ಗಳು, ಕೋ-ಆಪ್ರೇಟಿವ್, ಖಾಸಗಿ ಸೇರಿದಂತೆ ಯಾವುದೇ ಬ್ಯಾಂಕ್ ಬಿಟ್ಟು ಹೋಗದಂತೆ ನೋಡಿಕೊಳ್ಳಿ. ಬ್ಯಾಂಕ್ ಮ್ಯಾನೇಜರ್ ಗಳ ಸಭೆ ಕರೆದು ಅವರಿಗೆ ಇನ್ನೊಂದು ಬಾರಿ ವಿಷಯವನ್ನು ತಿಳಿಸಿ ಎಂದರು.
ಎಲ್ಲಾ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಗಳು ಚುರುಕಾಗಿ ಕಾರ್ಯ ನಿರ್ವಹಿಸಬೇಕು. ಅವರ ವ್ಯಾಪ್ತಿಯಲ್ಲಿ ನಿರ್ವಹಿಸುವ ಎಸ್.ಎಸ್.ಟಿ, ವಿ.ಎಎಸ್ಟಿ, ವಿವಿಟಿ, ಚೆಕ್ ಪೋಸ್ಟ್ ಸೇರಿದಂತೆ ಚುನಾವಣೆಗೆ ನಿಯೋಜನೆಯಾಗಿರುವ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕೆಲಸ ನಿರ್ವಹಿಸುತ್ತಿರುವುದನ್ನು ಖಾತ್ರಿ ಪಡಿಸಿಕೊಳ್ಳಬೇಕು. ಈ ಬಗ್ಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಜಿಲ್ಲಾ ಚುನಾವಣಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು ಜಿಲ್ಲೆಯಲ್ಲಿ ಚುನಾವಣಾ ಹಿನ್ನಲೆಯಲ್ಲಿ ನಿಯೋಜಿಸಲಾಗಿರುವ ಸಂಚಾರಿ ಜಾಗೃತ ದಳ, ಸೆಕ್ಟರ್ ಆಫೀಸರ್, ಐಟಿ ತಂಡ, ಚೆಕ್ ಪೋಸ್ಟ್ ವಿವರ, ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನ ಹಾಗೂ ಮಾದರಿ ನೀತಿ ಸಂಹಿತೆ ಜಾರಿಯಾದ ನಂತರ ವಿವಿಧ ಅಕ್ರಮಗಳಲ್ಲಿ ವಶಪಡಿಸಿಕೊಂಡಿರುವ ನಗದು, ಮದ್ಯ ಹಾಗೂ ಇನ್ನಿತರ ವಸ್ತುಗಳ ಬಗ್ಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸೀಫ್, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು, ಲೀಡ್ ಬ್ಯಾಂಕ್ ಮ್ಯಾನೇಜರ್ ದೀಪಕ್, ಅಬಕಾರಿ ಅಧಿಕಾರಿ ಮಹದೇವಿ ಬಾಯಿ, ಮುಡಾ ಆಯುಕ್ತೆ ಐಶ್ವರ್ಯ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.