ನಿಜವಾದ ಅಂಗವಿಕಲನಿಗೆ ಸಿಗಬೇಕಿದ್ದ ಶಿಕ್ಷಕನ ಹುದ್ದೆಯನ್ನು ತಪ್ಪಿಸಿ ತಾನು ಅಂಗವಿಕಲನೆಂದು ಅಂಗವಿಕಲರ ಕೋಟಾದಡಿಯಲ್ಲಿ ಸರ್ಕಾರಿ ಶಿಕ್ಷಕ ಹುದ್ದೆ ಪಡೆದಿದ್ದಾರೆಂದು ಆರೋಪಿಸಿ ಕೆ.ಚಂದ್ರಶೇಖರ್ ಆಲಿಯಾಸ್ ಗಡ್ಡ ಚಂದ್ರ ಎಂಬ ಶಿಕ್ಷಕನ ವಿರುದ್ಧ ಕಾಂಗ್ರೆಸ್ ಮುಖಂಡ ಕೋ.ಪು.ಗುಣಶೇಖರ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.
ಈ ಶಿಕ್ಷಕನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಹಲವಾರು ಬಾರಿ ಈತನನ್ನು ಪರೀಕ್ಷೆಗೊಳಪಡಿಸಿ ನೀಡಿರುವ ನಕಲಿ ವೈದ್ಯಕೀಯ ಪ್ರಮಾಣಪತ್ರವನ್ನು ತನಿಖೆಗೊಳಪಡಿಸಿ ಕಾನೂನು ಕ್ರಮ ಜರುಗಿಸಬೇಕೆಂದು ಕರ್ನಾಟಕ ಲೋಕಾಯುಕ್ತ, ಸಿಬಿಐ, ರಾಜ್ಯಪಾಲರು, ಆಯುಕ್ತರಿಗೆ ಹಾಗೂ ಸಂಬಂಧಿಸಿದ ರಾಜ್ಯಮಟ್ಟದ ಇಲಾಖಾಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಗುಣಶೇಖರ್ ಪಾಂಡವಪುರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೊಲೆ ಬೆದರಿಕೆ
ನಾನು ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಿರುವುದನ್ನು ತಿಳಿದು ನನ್ನ ಕೆಲಸ ಹೋದರೂ ಸರಿಯೆ ಜೈಲಿಗೋದರೂ ಸರಿಯೆ ನನ್ನ ಕೆಣಕಿದವರನ್ನು ಕೊಲೆ ಮಾಡೇ ಮಾಡುತ್ತೇನೆ, ನನ್ನ ವಿರೋಧಿಗಳಲ್ಲಿ ನಾಲ್ಕು ಜನರನ್ನು ಮಾತ್ರ ತೆಗೆಯದೆ ಬಿಡುವುದಿಲ್ಲವೆಂದು ಬೇರೆಯವರ ಬಳಿ ಶಿಕ್ಷಕ ಗಡ್ಡಚಂದ್ರ ಹೇಳಿಕೊಂಡಿದ್ದಾರೆಂದು ಗುಣಶೇಖರ್ ದೂರಿದರು.
ಕೆ.ಚಂದ್ರಶೇಖರ್ ಆಲಿಯಾಸ್ ಗಡ್ಡ ಚಂದ್ರ ಎಂಬ ಈ ವ್ಯಕ್ತಿ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನ ಪಟ್ಟಸೋಮನಹಳ್ಳಿ ಗ್ರಾಮದವರಾಗಿದ್ದು ಪಾಂಡವಪುರ ಪಟ್ಟಣದ ವಿ ಸಿ ಕಾಲೋನಿಯಲ್ಲಿರುವ ಸರ್ಕಾರಿ ಕಿರಿಯ ಉರ್ದು ಶಾಲೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು 13.12.1995 ರಲ್ಲಿ ಕೆ.ಆರ್.ಆಸ್ಪತ್ರೆಯಲ್ಲಿ4 133 – 95/163-1010PH ಸಂಖ್ಯೆಯಿರುವ ಶೇ 45 ರಷ್ಟು ಅಂಗವಿಕಲತೆಯುಳ್ಳ ಮೆಡಿಕಲ್ ಸರ್ಟಿಫಿಕೇಟ್ ಮಾಡಿಸಿಕೊಂಡು ಜುಲೈ 21 ರಂದು DLRC ಮೂಲಕ ಸರ್ಕಾರಿ ಹುದ್ದೆ ಪಡೆದುಕೊಂಡಿರುವುದು ಅನುಮಾನ ಸೃಷ್ಟಿಸಿದೆ ಎಂದು ದೂರಿದರು.
ಅಧಿಕಾರಿಗಳು ಎರಡು ಬಾರಿ ಮರುಪರೀಕ್ಷೆಗಾಗಿ ದಿನಾಂಕ ನಿಗದಿಪಡಿಸಿದಾಗ ಆದಿನ ಹಾಜರಾಗದೆ ಬೇರೊಂದು ದಿನ ಅದೇ ವೈದ್ಯರಿಂದ ತನಗೆ ಅನುಕೂಲವಾಗುವ ರೀತಿಯಲ್ಲಿ ತನ್ನ ಪ್ರಭಾವ ಬಳಸಿ ಪುನಹ ದೃಢೀಕೃತ ನಕಲಿ ಸರ್ಟಿಫಿಕೇಟ್ ಮಾಡಿಸಿ ನನ್ನನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲವೆಂದು ಮೆರೆಯುತ್ತಾ ಇಂದಿನವರೆವಿಗೂ ಈತ ಸತ್ಯ ಮತ್ತು ನ್ಯಾಯವನ್ನು ಬುಡಮೇಲು ಮಾಡುತ್ತಾ ಬಂದಿದ್ದಾರೆಂದು ದೂರಿದರು.