ಪೋಷಕರು,ಶಿಕ್ಷಕರು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕೆಂದು ಜಿ.ಪಂ.ಸಿಇಓ ದಿವ್ಯಾ ಪ್ರಭು ಸಲಹೆ ನೀಡಿದರು.
ಮಂಡ್ಯದ ಅಶೋಕ ನಗರದಲ್ಲಿರುವ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯ ಮತ್ತು ಜಿಲ್ಲಾ ಬಾಲಭವನ ಸಮಿತಿ ಆಯೋಜಿಸಿರುವ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಾಲೆಯಲ್ಲಿ ಮಕ್ಕಳು ಪಠ್ಯದ ವಿಷಯಗಳನ್ನು ಕಲಿಯುತ್ತಾರೆ. ಆದರೆ ಬೇಸಿಗೆ ಶಿಬಿರಗಳಲ್ಲಿ ಪಠ್ಯೇತರ ಚಟುವಟಿಕೆಗಳಾದ ಅಭಿನಯ, ಮನರಂಜನಾ ಕಲೆ, ಸಾಂಸ್ಕೃತಿಕ ಚಟುವಟಿಕೆಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ ಎಂದರು.
ಕಲಿಕೆ ನಿರಂತರವಾಗಿ ಸಾಗುತ್ತಿರಬೇಕು. ಇಂತಿಷ್ಟು ವಯಸ್ಸಿನಲ್ಲೇ ಕಲಿಯಬೇಕು ಎಂಬುದಿಲ್ಲ. ಯಾವಾಗ ಬೇಕಾದರೂ ಕಲಿಯಬಹುದು.ನಿತ್ಯ ಒಬ್ಬೊಬ್ಬರಿಂದ ಒಳ್ಳೆಯ ವಿಚಾರಗಳನ್ನು ಕಲಿಯುತ್ತಿರಬೇಕು ಎಂದು ಕಿವಿಮಾತು ಹೇಳಿದರು.
ಮಾನವ ಜನ್ಮ ಇರುವುದೇ ಕಲಿಯುವುದಕ್ಕೆ, ಸಾಧನೆ ಮಾಡುವುದಕ್ಕೆ ಎಂಬುದನ್ನು ಮರೆಯಬಾರದು.ಪ್ರತಿಯೊಂದು ಮಗುವಿನಲ್ಲೂ ಒಂದೊಂದು ವಿಭಿನ್ನ ಕೌಶಲ್ಯ ಜ್ಞಾನವಿರುತ್ತದೆ.ಅದನ್ನು ಗುರುತಿಸುವ ಜವಾಬ್ದಾರಿ ಶಿಕ್ಷಕರಲ್ಲಿ ಮತ್ತು ಪೋಷಕರಲ್ಲಿರಬೇಕು ಎಂದು ಹೇಳಿದರು.
ಸರ್ಕಾರದಿಂದ ನಡೆಯುವ ವಾರದ ಬೇಸಿಗೆ ಶಿಬಿರಕ್ಕೆ 60 ಮಕ್ಕಳು ಮಾತ್ರ ಅಗತ್ಯವಿದೆ, ಆದರೆ 100 ಕ್ಕೂ ಹೆಚ್ಚು ಮಕ್ಕಳು ಬಂದಿರುವುದು ಸಂತಸದ ಸಂಗತಿ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ರಾಜಮೂರ್ತಿ ಮಾತನಾಡಿ, ರಾಜ್ಯ ಬಾಲಭವನ ಸೊಸೈಟಿ , ಮಕ್ಕಳ ಬೌದ್ಧಿಕ ಬೆಳೆವಣಿಗೆ ಮತ್ತು ಅವರ ಮನೋವಿಕಾಸಕ್ಕೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಸಿಡಿಪಿಓ ಯೋಗೇಶ್, ಬಾಲಭವನ ಮೇಲ್ವಿಚಾರಕರಾದ ಕೋಮಲಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಕೋಮಲ್ ಕುಮಾರ್, ಸಂಪನ್ಮೂಲ ವ್ಯಕ್ತಿಗಳಾದ ಕರಾಟೆ ಮಾಸ್ಟರ್ ಲೋಕೇಶ್ ಮೊದಲಿಯಾರ್, ಜಾನಪದ ಗಾಯಕ ವೈರಮುಡಿ, ಕಲಾವಿದ ಯೋಗೇಶ್ ಮತ್ತು ನೂರಾರು ಮಕ್ಕಳಿ ದ್ದರು.