✍️ ಶಿವಸುಂದರ್. ಪ್ರಗತಿಪರ ಚಿಂತಕರು
ಚುನಾವಣೆ ಮುಗಿಯುವ ತನಕ ಕರ್ನಾಟಕದಲ್ಲೇ ಮೊಕ್ಕಾಂ ಹಾಕುವಂತಿರುವ ಪ್ರಧಾನಿ ಮೋದಿಯವರು ಮೊನ್ನೆ ಶಿವಮೊಗ್ಗದಲ್ಲಿ ಕರ್ನಾಟಕದ ಜನಜಾತಿಯ ಹೆಮ್ಮೆಯೆಂದು ಅಡಿಯರ್ ಮತ್ತು ಕರಿಬಪ್ಪ ಎಂಬುವರನ್ನು ನಾಡಿನ ಜನತೆಗೆ ಪರಿಚಯಿಸಿದ್ದಾರೆ. ಹಾಗೆಯೇ ಬೆಳಗಾವಿಯಲ್ಲಿ ಪಿಎಂ ಕಿಸಾನ್ ಯೋಜನೆಯ 13 ನೇ ಕಂತನ್ನು ಬಿಡುಗಡೆ ಮಾಡುತ್ತಾ ತಮ್ಮ ಸರ್ಕಾರದ ರೈತಪರತೆಯ ಬಗ್ಗೆ ಬಾಯಿಗೆ ಬಂದ ಹಾಗೆ ಕೊಚ್ಚಿಕೊಂಡಿದ್ದಾರೆ.
ಪಿಎಂ ಕಿಸಾನ್ ಯೋಜನೆಯ ಹಿಂದಿನ ಮೋದಿ ಸರ್ಕಾರದ ಉದ್ದೇಶಗಳು ಮತ್ತು ಅದರ ಸಾಧನೆಗಳನ್ನು, ಅದರ ಬಗ್ಗೆ ಮೋದಿ ಸರ್ಕಾರವೇ ಬೇರೆಬೇರೆ ಸಂದರ್ಭದಲ್ಲಿ ನೀಡಿರುವ ಅಂಕಿಅಂಶಗಳ ಜೊತೆ ಹೋಲಿಕೆ ಮಾಡಿದರೂ ಬೆಳಗಾವಿಯ ಪ್ರಧಾನಿ ಭಾಷಣ ಎಷ್ಟು ಸುಳ್ಳೆಂದು ಗೊತ್ತಾಗುತ್ತದೆ.
1. ಪಿಎಂ-ಕಿಸಾನ್ ಯೋಜನೆ ಫ಼ಲಾನುಭವಿಗಳು ಕೆಲವೊಮ್ಮೆ 8 ಕೋಟಿ ರೈತಾಪಿಯೇ ವಿನಾ ಎಂದಿಗೂ 14 ಕೋಟಿಯಲ್ಲ!
ಈ ಯೋಜನೆಯನ್ನು ಶುರು ಮಾಡಿದ್ದೇ 2019 ರ ಸಾರ್ವತ್ರಿಕ ಚುನಾವಣೆಯ ಮುನ್ನ. ಆಗ ಫ಼ುಲ್ವಾಮ ಬಾಂಬ್ ದಾಳಿ-ಅದಕ್ಕೆ ಬಾಲಾಕೋಟ್ ಪ್ರತೀಕಾರಗಳು ಸಂಭವಿಸಿರಲಿಲ್ಲ. ದೇಶದೆಲ್ಲೆಡೆ ರೈತರು ದೊಡ್ಡ ಹೋರಾಟ ನಡೆಸಿದ್ದರು. ಐದು ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಕಳಪೆ ಸಾಧನೆ ಮಾಡಿತ್ತು. ಕಾಂಗ್ರೆಸ್ ಪಕ್ಷ ತಾನು ಅಧಿಕಾರಕ್ಕೆ ಬಂದರೆ ಅರ್ಹ ಫ಼ಲಾನುಭವಿಗಳಿಗೆ ವರ್ಷಕ್ಕೆ 72,000 ರೂ ವರ್ಗಾಯಿಸುವ “ನ್ಯಾಯ” ಯೋಜನೆಯನ್ನು ಪ್ರಕಟಿಸಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಪಿಎಂ ಕಿಸಾನ್ ಯೋಜನೆಯನ್ನು ಮೋದಿ ಸರ್ಕಾರ ಘೋಷಿಸಿತ್ತು.
ಚುನಾವಣೆಗೆ ಸ್ವಲ್ಪ ಮುನ್ನ ಘೋಷಿತವಾದ ಈ ಯೋಜನೆಯ ಮೂಲಕ ದೇಶದ ಶೇ.85 ರಷ್ಟು ರೈತ ಕುಟುಂಬಗಳ ಅಕೌಂಟಿಗೆ ಮೂರು ಕಂತಿನಲ್ಲಿ 6000 ರೂ. ವರ್ಗಾಯಿಸಲಾಗುವುದು ಎಂದು ದೊಡ್ಡದಾಗಿ ಘೋಶಿಸಲಾಗಿತ್ತು. 2015 ರ ಕೃಷಿ ಸೆನ್ಸಸ್ ಪ್ರಕಾರ ದೇಶದಲಿ 14.5 ಕೋಟಿ ರೈತ ಕುಟುಂಬಗಳಿವೆ. 2019 ರ ಸರ್ಕಾರೀ ಘೋಷಣೆಯೊಂದು ಅಷ್ಟೂ ರೈತರಿಗೆ ಪಿಎಮ್ ಕಿಸಾನ್ ಹಣ ವರ್ಗಾಯಿಸಲಾಗುವುದು ಎಂದು ಭರವಸೆ ನೀಡಿತ್ತು.
ಹಾಗೆಯೆ ಆಗಿದ್ದಲ್ಲಿ ಬಜೆಟ್ಟಿನಲ್ಲಿ ಈ ಬಾಬತ್ತಿಗೆ 87,000 ಕೋಟಿ ರೂ. ಎತ್ತಿಡಬೇಕಿತ್ತು. ಆದರೆ ಸರ್ಕಾರವೇ ನೀಡಿರುವ ಅಂಕಿಅಂಶಗಳನ್ನು ನೋಡಿದರೆ 2019 ರಿಂದಾಚೆಗೆ ಯಾವ ವರ್ಷವೂ ಸರ್ಕಾರ ಅದರ ಶೇ.75 ಕ್ಕಿಂತ ಹೆಚ್ಚು ಹಣವನ್ನು ಬಜೆಟ್ಟಿನಲ್ಲಿ ಎತ್ತಿಡಲಿಲ್ಲ. ಉದಾಹರಣೆಗೆ ಇದಕ್ಕಾಗಿ 2019-20 ರಲ್ಲಿ ವೆಚ್ಚ ಮಾಡಲಾದ ವಾಸ್ತವಿಕ ಮೊತ್ತ 48,000 ಕೋಟಿ (ಅಂದರೆ ಘೋಷಿಸಲಾದ ಯೋಜನೆಗೆ ಬೇಕಾದ ಮೊತ್ತದ ಅರ್ಧದಷ್ಟು ಮಾತ್ರ), 2020-21 ರಲ್ಲಿ 60,990 ಕೋಟಿ, 2021-22 ರಲ್ಲಿ 66,825 ಕೋಟಿ ..2023-24 ರ ಬಜೆಟ್ಟಿನಲ್ಲಿ ಈ ಬಾಬತ್ತಿಗೆ ಕೇವಲ 60,000 ಕೋಟಿ ರೂ ವೆಚ್ಚೆವೆಂದು ಅಂದಾಜು ಮಾಡಲಾಗಿದೆ. ಅಂದರೆ ಇದರ ಶೇ. 75 ರಷ್ಟು ಮಾತ್ರ ಸರಾಸರಿ ವೆಚ್ಚವಾಗಲಿದೆ.
ಇದಲ್ಲದೆ 2023 ರ ಫ಼ೆಬ್ರವರಿ 7 ರಂದು ಮೋದಿ ಸರ್ಕಾರ ರಾಜ್ಯ ಸಭೆಯಲ್ಲಿ ನೀಡಿರುವ ಅಂಕಿಅಂಶಗಳ ಪ್ರಕಾರವೇ ಒಟ್ಟು 12 ಕಂತುಗಳಲ್ಲಿ ಪಿಎಂ ಕಿಸಾನ್ ಹಣವನ್ನು ಫ಼ಲಾನುಭವಿಗಳಿಗೆ ವರ್ಗಾಯಿಸಲಾಗಿದೆ. 11 ನೇ ಕಂತಿನಲ್ಲಿ 10.45 ಕೋಟಿ ರೈತರಿಗೆ ವರ್ಗಾವಣೆ ಯಾದದ್ದೇ ಈವರೆಗಿನ ಅತಿ ಹೆಚ್ಚು ವರ್ಗಾವಣೆ. ಆದರೆ 12 ನೇ ಕಂತಿನಲ್ಲಿ ಅದು 8.55 ಕೋಟಿಗೆ ಕುಸಿಯಿತು. ಬೆಳಗಾವಿಯಲ್ಲಿ ಮೋದಿಯವರೇ ಘೋಷಣೆ ಮಾಡಿದಂತೆ 13 ನೇ ಕಂತಿಗೆ ಬಿಡುಗಡೆ ಮಾಡಿರುವುದು ಕೇವಲ 16,000 ಕೋಟಿ. ಅಂದರೆ ಹೆಚ್ಚೆಂದರೆ ಅದು ತಲುಪುವುದು 8 ಕೋಟಿ ಜನರಿಗೆ ಮಾತ್ರ!
ರಾಜ್ಯಸಭೆಯಲ್ಲಿ ಸರ್ಕಾರ ಕೊಟ್ಟಿರುವ ಉತ್ತರದ ಬಗ್ಗೆ ಹೆಚ್ಚಿನ ವಿವರಗಳನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಪಡೆಯಬಹುದು:
https://pqals.nic.in/annex/1711/AU719.pdf
2. ಆದರೆ 11 ನೇ ಕಂತಿನ ಫ಼ಲಾನುಭವಿಗಳು ಕೇವಲ 3.87 ಕೋಟಿ- 10.45 ಕೋಟಿಯಲ್ಲ!
ಸರ್ಕಾರದ ಅಂಕಿಅಂಶಗಳ ಪ್ರಕಾರ ಈವರೆಗೆ ಪಿಎಂ ಕಿಸಾನ್ ಯೋಜನೆಯ ಕಂತುಗಳಲ್ಲಿ 11 ನೇ ಕಂತಿನಲ್ಲಿ ಅತಿ ಹೆಚ್ಚು ಫ಼ಲಾನುಭವಿಗಳು-10.45 ಕೋಟಿ ಫ಼ಲಾನುಭವಿಗಳು- ಲಾಭ ಪಡೆದಿದ್ದಾರೆ.
ಆದರೆ ಇದು ಮತ್ತೊಂದು ದೊಡ್ಡ ಸುಳ್ಳು
11 ನೇ ಕಂತಿನ ಹಣವನ್ನು 2022 ರ ಮೇ ತಿಂಗಳಲ್ಲಿ ವರ್ಗಾಯಿಸಲಾಯಿತು. ಇದರ ಬಗ್ಗೆ 2022 ರ ಸೆಪ್ತೆಂಬರ್ ನಲ್ಲಿ ಸಾಮಾಜಿಕ ಕಾರ್ಯಕರ್ತ ಕನ್ಹಯ್ಯ ಕುಮಾರ RTI ನಡಿ ಕೇಳಿದ ಪ್ರಶ್ನೆಗೆ “ಕೃಷಿ ಮತ್ತು ರೈತ ಕಲ್ಯಾಣ ಇಲಾಖೆಯೇ” ನೀಡಿದ ಉತ್ತರದ ಪ್ರಕಾರ :
11 ನೇ ಕಂತಿನ ಫ಼ಲಾನುಭವಿಗಳು ಕೇವಲ 3.87 ಕೋಟಿ ರೈತರು ಮಾತ್ರ!
ಹೆಚ್ಚಿನ ವಿವರಗಳನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಪಡೆಯಬಹುದು:
ಈ ವರದಿಯ ಪ್ರಕಾರ:
ಕರ್ನಾಟಕದಲ್ಲಿ 55 ಲಕ್ಷ ಫ಼ಲಾನುಭವಿಗಳು ರಿಜಿಸ್ಟರ್ ಆಗಿದ್ದರೂ, 11 ನೇ ಕಂತಿನ ಲಾಭ ಪಡೆದದ್ದು ಕೇವಲ 2.5 ಲಕ್ಷ ರೈತರು ಮಾತ್ರ.
ಮಹಾರಾಷ್ಟ್ರದಲ್ಲಿ 88 ಲಕ್ಷ ರೈತರು ರಿಜಿಸ್ಟರ್ ಆಗಿದ್ದರೂ 11 ನೇ ಕಂತಿನ ಲಾಭ ಪಡೆದವರು ಕೇವಲ 12,000 ರೈತರು.
ಇದು ಸಾಕ್ಷತ್ ಕೇಂದ್ರ ಸರ್ಕಾರದ ಕೃಷಿ ಇಲಾಖೆಯೇ ಕೊಟ್ಟ ಉತ್ತರ. ಆದರೆ ಯಾವಾಗ ಈ ಉತ್ತರದಿಂದ ಸರ್ಕಾರದ ಮುಖಭಂಗವಾಯಿತೂ ಕೂಡಲೇ ಮೋದಿ ಸರ್ಕಾರ ಅದಕ್ಕೊಂದು ತಿದ್ದುಪಡಿಯನ್ನು ನೀಡಿತು:
“ಫ಼ಲಾನುಭವಿಗಳ ಪಟ್ಟಿ ತಯಾರಿಸುವುದು ರಾಜ್ಯ ಸರ್ಕಾರಗಳ ಕರ್ತವ್ಯ. ಇದರಲ್ಲಿ ಯಾವುದೇ ಸೋರಿಕೆ ಮತ್ತು ದುರ್ಬಳಕೆಯಾಗದಿರುವಂತೆ ಅಧಾರ ತಪಾಸಣೆ, ಪಹಣಿ ತಪಾಸಣೆ ಇತ್ಯಾದಿಗಳನ್ನೇ ಮಾಡಿಯೇ ಕೊಡಲಾಗುವುದೆಂದು” ಸಬೂಬು ಹೇಳಿತು.
ಹಾಗೂ ಯಾವುದೇ ಪುರಾವೆಯಿಲ್ಲದೆ ತನ್ನ ಕಡತಗಳಲ್ಲಿ 11 ನೇ ಕಂತಿನ ಫ಼ಲಾನುಭವಿಗಳ ಸಂಖ್ಯೆಯನ್ನು ಅನಾಮತ್ತು 3.87 ಕೋಟಿಯಿಂದ 10.45 ಕೋಟಿಗೆ ಏರಿಸಿಬಿಟ್ಟಿತು!!
3.. PM-KISAN ಯೋಜನೆ ಎಂಬುದು ಮೋದಿ ಸರ್ಕಾರ ಮಾಡುತ್ತಿರುವ ಚುನಾವಣಾ ಭ್ರಷ್ಟಾಚಾರ?!
ಹೀಗೊಂದು ಅನುಮಾನ ರಾಜ್ಯಸಭೆಯಲ್ಲಿ ಪಿಎಂ ಕಿಸಾನ್ ಯೋಜನೆಯ ಬಗ್ಗೆ ಸರ್ಕಾರವೇ ನೀಡಿರುವ ಅಂಕಿಅಂಶಗಳನ್ನು ನೋಡಿದಾಗ ಬಲವಾಗಿ ಹುಟ್ಟುತ್ತದೆ.
ಸರ್ಕಾರದ ಅಂಕಿಅಂಶಗಳನ್ನು ನೋಡಿದಾಗ :
2019 ರ ನಂತರ ಯಾವ್ಯಾವ ರಾಜ್ಯಗಳಲ್ಲಿ ಯಾವ ವರ್ಷ ಚುನಾವಣೆಗಳು ನಡೆಯಲಿವೆಯೋ ಅದರ ಹಿಂದಿನ ಪಿಎಮ್ ಕಿಸಾನ್ ಕಂತುಗಳ ಫ಼ಲಾನುಭವಿಗಳು ಆ ರಾಜ್ಯದಲ್ಲಿ ಹಲವಾರು ಪಟ್ಟು ಹೆಚ್ಚಾಗುತ್ತಾರೆ. ಮತ್ತು ಒಂದು ವೇಳೆ ಆ ರಾಜ್ಯದಲ್ಲಿ ಬಿಜೆಪಿಗೆ ಪೂರಕವಾದ ಫ಼ಲಿತಾಂಶ ಬರದಿದ್ದರೆ ಮರು ಕಂತಿನಿಂದಲೇ ಆ ರಾಜ್ಯಗಳ ಫ಼ಲಾನುಭವಿಗಳ ಸಂಖ್ಯೆ ದಿಢೀರನೇ ಕುಸಿದಿರುವುದನ್ನು ಗಮನಿಸಬಹುದು.
– ಉದಾಹರಣೆಗೆ ತಮಿಳುನಾಡಿನಲ್ಲಿ 2021 ರ ಏಪ್ರಿಲ್ ನಲ್ಲಿ ಚುನಾವಣೆ ನಡೆಯಿತಷ್ಟೆ.
ಅಲ್ಲಿ ಬಿಜೆಪಿಯು ಎಐಡಿಎಂಕೆ ಜೊತೆಗೂಡಿ ಅಧಿಕಾರ ಪಡೆದುಕೊಳ್ಳಲು ಪಕ್ಷ ಬಲದ ಜೊತೆಗೆ ಕೇಂದ್ರದ ಬಲವನ್ನು ಬಳಸಿತು.
ಹೀಗಾಗಿ 2020-21 ರಲ್ಲಿ ನೀಡಲಾದ ಪಿಎಂ ಕಿಸಾನ್ ಕಂತುಗಳ ಫ಼ಲಾನುಭವಿಗಳ ಸಂಖ್ಯೆ 30 ಲಕ್ಷದಿಂದ 44 ಲಕ್ಷದವರೆಗೆ ಏರಿತು.
ಆದರೆ ಈಗ ತಮಿಳುನಾಡಿನ ಪಿಎಂ ಕಿಸಾನ್ ಫ಼ಲಾನುಭವಿಗಳ ಸಂಖ್ಯೆ ಕೇವಲ 22 ಲಕ್ಷಕ್ಕೆ ಇಳಿಸಲಾಗಿದೆ
– ಹಾಗೆಯೇ 2021 ರ ಏಪ್ರಿಲ್ ನಲ್ಲಿ ಅಸ್ಸಾಮಿನಲೂ ಚುನಾವಣೆ ನಡೆಯಿತಷ್ಟೆ.
2020 ರುದ್ದಕ್ಕೂ ಅಲ್ಲಿ ಪಿಎಂ ಕಿಸಾನ್ ಫ಼ಲಾನುಭವಿಗಳ ಸಂಖ್ಯೆ 24 ಲಕ್ಷಗಳಷ್ಟಿತ್ತು.
ಫ಼ಲಾನುಭವಿಗಳ ನೊಂದಾವಣೆಯಲ್ಲಿ ರಾಜ್ಯ ಬಿಜೆಪಿ ಸರ್ಕಾರ ನಡೆಸಿರುವ ಹೇರಾಫ಼ೇರಿಗಳ ಬಗ್ಗೆ ಹೈಕೋರ್ಟಿನಲ್ಲೂ ದೂರು ಸಲ್ಲಿಸಿ ಕೋರ್ಟ್ ಬಿಜೆಪಿ ಸರ್ಕಾರಕ್ಕೆ ಛೀಮಾರಿಯನ್ನು ಹಾಕಿತ್ತು.
ಅದೇನೇ ಇರಲಿ ಈಗ ಅಲ್ಲಿನ ಪಿಎಂ ಕಿಸಾನ್ ಫ಼ಲಾನುಭವಿಗಳ ಸಂಖ್ಯೆ 4.88 ಲಕ್ಷಕ್ಕೆ ಇಳಿದಿದೆ.
ಅಂದರೆ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯು ಅಸ್ಸಮಿನಲ್ಲಿ ಪಿಎಂ ಕಿಸನ್ ಹಣವನ್ನು ಬೇಕಾಬಿಟ್ಟಿಯಾಗಿ , ಚುನಾವಣಾ ಉದ್ದೆಶಗಳಿಂದ ಐದು ಪಟ್ಟು ಹೆಚ್ಚು ಹಂಚಿತ್ತು ಎಂದಾಗಲಿಲ್ಲವೇ?!
– ಕೇರಳದ ಶಾಸನಸಭೆಗೆ 2021 ರ ಏಪ್ರಿಲ್ ನಲ್ಲಿ ಚುನಾವಣೆಯು ನಡೆಯಿತು.
ಅದಕ್ಕೆ ಮುಂಚೆ 2020 ರ ಡಿಸೆಂಬರ್ ಹಾಗೂ 2021 ರ ಮಾರ್ಚ್ ನಲ್ಲಿ ನೀಡಲಾದ ಪಿಎಮ್ ಕಿಸಾನ್ ಕಂತುಗಳಲ್ಲಿ ಕೇರಳ ರಾಜ್ಯದ ಫ಼ಲಾನುಭವಿಗಳ ಸಂಖ್ಯೆ 34 ಲಕ್ಷ.
ಈಗ ಚುನಾವಣೆಯಾದ ಮೇಲೆ ಕೇವಲ 20 ಲಕ್ಷ
– ಉತ್ತರಪ್ರದೇಶದಲ್ಲಿ 2022 ರ ಏಪ್ರಿಲ್ ನಲ್ಲಿ ಚುನಾವಣೆ ನಡೆಯಿತು. ಅದಕ್ಕೆಮುನ್ನ 2022 ರ ಮಾರ್ಚ್ ನಲ್ಲಿ ನೀಡಲಾದ ಪಿಎಂ ಕಿಸಾನಿನ 10 ನೇ ಕಂತಿನಲ್ಲಿ ಉತ್ತರಪ್ರದೇಶದ ಫ಼ಲಾನುಭವಿಗಳ ಸಂಖ್ಯೆ 2.41 ಕೋಟಿ. .
ಚುನಾವಣೆಯ ನಂತರ 12 ನೇ ಕಂತಿನ ವೇಳೆಗೆ ಆ ಸಂಖ್ಯೆ 1.84 ಕೋಟಿಗೆ ಇಳಿಯಿತು.
– ಹಾಗೆಯೇ ಪಂಜಾಬಿನಲ್ಲಿ 2022 ರ ಫ಼ೆಬ್ರವರಿಯಲ್ಲಿ ಚುನಾವಣೆ ನಡೆಯಿತಷ್ಟೆ.
ಅದಕ್ಕೆ ಪೂರ್ವಭಾವಿಯಾಗಿ 2021 ರ ನವಂಬರ್ ನಲ್ಲಿ ನೀಡಲಾದ ಪಿಎಂ ಕಿಸಾನಿನ 8 ನೇ ಕಂತಿನಲ್ಲಿ ಪಂಜಾಬಿನ ಫ಼ಲಾನುಭವಿಗಳ ಸಂಖ್ಯೆ 19.04 ಲಕ್ಷ.
ಚುನಾವಣೆಯಾದ ನಂತರ ಈಗ ಪಿಎಮ್ ಕಿಸಾನ್ ನ 12 ನೇ ಕಂತಿನ ಫ಼ಲಾನುಭವಿಗಳ ಸಂಖ್ಯೆ 2.07 ಲಕ್ಷ!
ಇವೆಲ್ಲವೂ ಸ್ಪಷ್ಟಪಡಿಸುವಂತೆ ಮೋದಿ ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು ಮತದಾರರನ್ನು ಬಿಜೆಪಿಗೆ ಓಟು ನೀಡುವಂತೆ ಪುಸಲಾಯಿಸುವ ಭ್ರಷ್ಟ ಸಾಧನವನ್ನಾಗಿ ಬಳಸಿಕೊಂಡಿದೆ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲವೇ??
ಆಸಕ್ತರು ಈ ವೆಬ್ ವಿಳಾಸದಲ್ಲಿ ಕೇಂದ್ರ ಸರ್ಕಾರವೇ ರಾಜ್ಯವಾರು ಹಾಗೊ ಕಂತುವಾರು ಕೊಟ್ಟಿರುವ ಫ಼ಲಾನುಭವಿಗಳ ಸಂಖ್ಯೆಯನ್ನು ಹೋಲಿಸಿ ನೋಡಬಹುದು:
https://pqals.nic.in/annex/1711/AU719.pdf
4. ಗೇಣಿ ರೈತರು ಮತ್ತು ರೈತ ಕೂಲಿಗಳು ಫ಼ಲಾನುಭವಿಗಳಲ್ಲ!
ಅಷ್ಟು ಮಾತ್ರವಲ್ಲ.. ಪಿಎಂ ಕಿಸನ್ ಯೋಜನೆಯೆ ನೀತಿ ಘೋಷಣೆಯೇ ಹೇಳುವಂತೆ ಇದು ಕೇವಲ ತಮ್ಮ ಹೆಸರಿನಲ್ಲಿ ಭೂಮಿಯನ್ನು ಹೊಂದಿರುವ ರೈತರಿಗೆ ಮಾತ್ರ ದಕ್ಕುವ ಯೋಜನೆ. ಗೇಣಿ ರೈತರಿಗೆ ಮತ್ತು ರೈತ ಕೂಲಿಗಗಳಿಗೆ ಈ ಯೋಜನೆಯಿಂದ ಕಿಂಚಿತ್ತೂ ಲಾಭವಿಲ್ಲ. ರಾಜ್ಯದ ಗ್ರ್ರಾಮೀಣ ಪ್ರದೇಶದಲ್ಲಿ ಶೇ. 55 ರಷ್ಟು ಜನರು ಈವರ್ಗಕ್ಕೆ ಸೇರಿದವರೇ ಆಗಿದ್ದಾರೆ.
5. ಸಬ್ಸೀಡಿ ಕಡಿತದ ಯುಗದಲ್ಲಿ ಫ಼ಲಾನುಭವಿ ರೈತರ ಸಂಖ್ಯೆ ಹೆಚ್ಚುವುದೇ?
ಚುನಾವಣೆಯ ಫ಼ಲವನ್ನು ಮೋದಿ ಸರ್ಕಾರ ಉಂಡ ಮೇಲೆ ಪಿಎಂ ಕಿಸಾನಿನ ಫ಼ಲಾನುಭವಿಗಳ ಸಂಖ್ಯೆ ಕಡಿಮೆಯಾಗುತ್ತಾ ಹೋಗಿರುವುದನ್ನು ಮೇಲಿನ ಅಂಕಿಅಂಶಗಳು ಸಾಬೀತು ಪಡಿಸುತ್ತವೆ. ಏಕೆಂದರೆ ರೈತರಿಗೆ ಮತ್ತು ಜನಸಾಮಾನ್ಯರಿಗೆ ಸರ್ಕಾರದಿಂದ ದಕ್ಕಬೇಕಾದ ಎಲ ಸವಲತ್ತುಗಳನ್ನು ಕತ್ತರಿಸಬೇಕೆಂಬುದೇ ಮೋದಿ ಸರ್ಕಾರದ ಆರ್ಥಿಕ ನೀತಿ.
ಹೀಗಾಗಿ 13 ನೇ ಕಂತಿನ ಪಿಎಂ ಕಿಸಾನ್ ಮೊತ್ತವನ್ನು ಘೋಷಿಸಿದ್ದರೂ ಫ಼ಲಾನುಭವಿಗಳು ಅರ್ಹರಾಗಲು ಅನಕ್ಷರಸ್ಥ ಹಾಗೂ ಹಳ್ಳಿಗಾಡಿನ ರೈತಾಪಿಗಳು ಸುಲಭವಾಗಿ ಪೂರೈಸಲಾಗದ ಹಲವಾರು ಶರತ್ತುಗಳನ್ನು ಈಬಾರಿ ವಿಧಿಸಲಾಗಿದೆ.
ಅದರಲ್ಲಿ ಅಕೌಂಟುದಾರರ ಧ್ರುಡಿಕರಿಸಿದ ವಿವರಗಳನ್ನು, ಭೂ ಒಡೆತನದ ವಿವರಗಳನ್ನು ಮತ್ತೊಮ್ಮೆ ಎಲೆಕ್ಟ್ರಾನಿಕ ರೂಪದಲ್ಲಿ ಭರ್ತಿ ಮಾದಬೇಕಾದ, ಆಧಾರ್ ಖಾತರಿ ಕಡ್ಡಯವಾಗಿ ಪುನರ್ ಧೃಢೀಕರಿಸಬೇಕಾದ ಹಲವಾರು ಅಂಶಗಳನ್ನು ಸೇರಿಸಲಾಗಿದೆ. ಇದನ್ನು ಪೂರೈಸದವರನ್ನುಪಟ್ಟಿಯಿಂದ ತಾನಾಗಿಯೇ ಕೈಬಿಡುವ ವ್ಯವಸ್ಥೆಯನ್ನು ರೂಪಿಸಲಾಗಿದೆ. ಇದರಿಂದಾಗಿ ಇತರ ಎಲ್ಲಾ ಸರ್ಕಾರೆ ಯೋಜನೆಗಳಂತೆ ಈ ಯೋಜನೆಯಲ್ಲೂ ಲಕ್ಷಾಂತರ ಅರ್ಹ ಬಡ ಫ಼ಲಾನುಭವಿಗಳನ್ನು ಉದ್ದೇಶಪೂರ್ವಕವಾಗಿ ಅನರ್ಹಗೊಳಿಸಲಾಗುತ್ತದೆ.
ಈ ಮುಂದಾಲೋಚನೆಯಿಂದಲೇ ಮೋದಿ ಸರ್ಕಾರ 11.4 ಕೋಟಿ ಜನರು ಪಿಎಮ್ ಕಿಸಾನ್ ಫ಼ಲಾನುಭವಿಗಳೆಂದು ಹೇಳುತ್ತಿದ್ದರೂ, ಸರಳ ಗಣಿತದ ಲೆಕ್ಕಾಚಾರದಂತೆ 11.4 ಕೋಟಿ ರೈತರಿಗೆ ತಲಾ 6000 ರೂ ಗಳಂತೆ ಬೇಕಾಗುವ ಕನಿಷ್ಟ 70,000 ಕೋಟಿ ಯನ್ನು ಯಾವಬಜೆಟ್ಟಿನಲ್ಲೂ ಎತ್ತಿಟ್ಟಿಲ್ಲ. ಈಗಾಗಲೇ ನೋಡಿದಂತೆ ಈ ಬಾಬತ್ತಿನಲ್ಲಿ 48,000-60000 ಕೋಟಿಯನ್ನು ಮಾತ್ರ ಎತ್ತಿಡಲಾಗುತ್ತಿದೆ. ಅದರಲ್ಲೂ ಶೇ. 70 ಭಾಗವನು ಮಾತ್ರ ವೆಚ್ಚ ಮಾಡಲಾಗುತ್ತದೆ. ಹಾಗೂ ಅದನ್ನು ಚುನಾವಣೆ ಇರುವ ರಾಜ್ಯಗಳಲ್ಲಿ ಮಾತ್ರ ಬಿಜೆಪಿಯ ಲಾಭಕ್ಕಾಗಿ ವೆಚ್ಚ ಮಾಡಲಾಗುತ್ತಿದೆ. ಚುನಾವಣೆಯಾದ ನಂತರ ದಿಢೀರನೇ ಆ ರಾಜ್ಯಗಳ ಫ಼ಲನುಭವಿಗಳ ಸಂಖ್ಯೆ ಕುಸಿಯುತ್ತದೆ.
ಹೀಗಾಗಿ ಬೆಳಗಾವಿ ಭಾಷಣದಲ್ಲಿ ಪ್ರಧಾನಿ ಸುಳ್ಳು ಹೇಳಿದ್ದು ಮಾತ್ರವಲ್ಲದೆ ದೇಶದ ಮಣ್ಣಿನ ಮಕ್ಕಳಿಗೆ ದ್ರೋಹವನ್ನೇ ಮಾಡಿದ್ದಾರೆ. ಅಲ್ಲವೇ?