ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ, ಪ್ರಧಾನ ಮಂತ್ರಿ ಆವಾಸ್ ಯೋಜನೆ, ಜಲಜೀವನ್ ಮಿಷನ್ ಮುಂತಾದ ಜನ ಕಲ್ಯಾಣ ಕಾರ್ಯಕ್ರಮಗಳ ಮೂಲಕ ರಾಜ್ಯ ಮತ್ತು ದೇಶದ ಅಭಿವೃದ್ಧಿ ಮಾಡುತ್ತಿದೆ.ರಾಜ್ಯದ ಸಮಗ್ರ ಅಭಿವೃದ್ಧಿಗೆ ಡಬಲ್ ಇಂಜಿನ್ ಸರ್ಕಾರ ಅಗತ್ಯವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮದ್ದೂರು ತಾಲೂಕಿನ ಗೆಜ್ಜಲಗೆರೆ ಗ್ರಾಮದಲ್ಲಿ ಭಾರತೀಯ ರಾಷ್ಟ್ರೀಯ ಪ್ರಾಧಿಕಾರ ಆಯೋಜಿಸಿದ್ದ 12,000 ಕೋಟಿಗೂ ಅಧಿಕ ಮೌಲ್ಯದ 210 ಕಿ.ಮೀ ಉದ್ದದ ಎರಡು ರಾಷ್ಟ್ರೀಯ ಯೋಜನೆಗಳ ರಾಷ್ಟ್ರ ಸಮರ್ಪಣೆ ಮತ್ತು ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜನ ಕಲ್ಯಾಣದ ಆಡಳಿತ ನಡೆಸುವ ಮೂಲಕ ರಾಜ್ಯ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಪಣತೊಟ್ಟಿದ್ದಾರೆ. ಕಿಸಾನ್ ಸಮ್ಮಾನ್ ಯೋಜನೆಯಡಿ 53 ಲಕ್ಷ ರೈತರಿಗೆ ಒಟ್ಟು 20 ಸಾವಿರ ಕೋಟಿಗೂ ಹೆಚ್ಚಿನ ಹಣವನ್ನು ನೀಡಿದ್ದಾರೆ. 17 ಲಕ್ಷ ಜನರಿಗೆ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ವಸತಿ ನೀಡಲಾಗಿದೆ. ಕಿಸಾನ್ ಸಮ್ಮಾನ್ ಮೂಲಕ 25 ಕೋಟಿ ಹಣವನ್ನು ನೀಡಲಾಗಿದೆ.64,000 ಕೋಟಿ ವೆಚ್ಚದಲ್ಲಿ 6 ಸಾವಿರ ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡಲಾಗಿದೆ. ಹಿಂದಿನ ಸರ್ಕಾರಗಳು ಡಬಲ್ ಇಂಜಿನ್ ರೀತಿ ಕೆಲಸ ಮಾಡಿರಲಿಲ್ಲ ಎಂದರು.
ಮೈಷುಗರ್ ಸಕ್ಕರೆ ಕಾರ್ಖಾನೆ 4-5 ವರ್ಷಗಳಿಂದ ಪ್ರಾರಂಭ ಮಾಡಿರಲಿಲ್ಲ. ಆದರೆ ಬಿಜೆಪಿ ಸರ್ಕಾರ ಬಂದ ನಂತರ ಕಾರ್ಖಾನೆಗೆ ಐವತ್ತು ಕೋಟಿ ಹಣ ನೀಡಿ ಪ್ರಾರಂಭಿಸಲಾಗಿದೆ. ಈ ವರ್ಷ ಎಥೆನಾಲ್ ಘಟಕವನ್ನು ಪ್ರಾರಂಭಿಸಿ ಕಬ್ಬು ಬೆಳೆದ ರೈತರಿಗೆ ಉತ್ತಮ ದೂರ ಕೊಡಿಸುತ್ತೇವೆ. ರಾಜ್ಯದ ನೀರಾವರಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಹಣ ನೀಡಿದೆ. ರೈತ ಕುಟುಂಬದ 35,000 ಮಕ್ಕಳಿಗೆ ವಿದ್ಯಾನಿಧಿ ಯೋಜನೆ ಅಡಿ ವಿದ್ಯಾರ್ಥಿ ವೇತನ ನೀಡಲಾಗಿದೆ ಎಂದರು.
ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದರಿಂದ ಜನರ ಬೇಡಿಕೆಯಂತೆ ಹತ್ತು ಪಥದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. 2014ರಲ್ಲಿ ಮೋದಿ ಅವರು ಪ್ರಧಾನಿಯಾದ ನಂತರ ಇದಕ್ಕೆ ಡಿಪಿಆರ್ ಮಾಡಲಾಗಿದೆ.2016 ರಲ್ಲಿ ಕೇಂದ್ರ ಸಚಿವೆ ನಿತಿನ್ ಗಡ್ಕರಿಯವರು ಕಾಮಗಾರಿ ಪ್ರಾರಂಭ ಮಾಡಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರವೇ ಅಡಿಗಲ್ಲು ಹಾಕಿದ್ದರೂ, ಮಾಧ್ಯಮದಲ್ಲಿ ಇದನ್ನು ನಾನು ಮಾಡ್ದೆ ಎಂದು ಹೇಳಿ ಕೊಳ್ಳುತ್ತಿದ್ದಾರೆ ಎಂದು ವಿರೋಧ ಪಕ್ಷದವರಿಗೆ ಕುಟುಕಿದರು
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಇಡೀ ವಿಶ್ವದ ಜನ ಕೊಂಡಾಡುತ್ತಿದ್ದಾರೆ. ಪಾಕಿಸ್ತಾನದ ಸಮಸ್ಯೆ ಬಗೆಹರಿಸುವ ಆ ದೇಶದ ಜನರು ಇವರನ್ನೇ ಕರೆಯುತ್ತಿದ್ದಾರೆ. ಚೀನಾ ನಾಯಕರು ಮೋದಿ ಅವರನ್ನು ಬುದ್ಧಿವಂತ ಆಡಳಿತಗಾರ ಎಂದು ಹೊಗಳುತ್ತಿದ್ದಾರೆ.ವಿಶ್ವದ ದೊಡ್ಡಣ್ಣ ಎನ್ನುವ ಅಮೇರಿಕಾ ಕೂಡ ಮೋದಿ ಅವರನ್ನು ವಿಶ್ವ ನಾಯಕ ಎಂದು ಒಪ್ಪಿಕೊಂಡಿದೆ.ಜಿ 20 ರಾಷ್ಟ್ರಗಳ ನಾಯಕರು ಕೂಡ ಮೋದಿಯವರ ನಾಯಕತ್ವವನ್ನು ಕೊಂಡಾಡುತ್ತಿದ್ದಾರೆ ಎಂದರು.