ಬಿಜೆಪಿ, ಆರೆಸ್ಸೆಸ್ ಹಾಗೂ ಸಂಘ ಪರಿವಾರಗಳು ಮಂಡ್ಯದಲ್ಲಿ ಉರಿಗೌಡ ನಂಜೇಗೌಡ ಹೆಸರಿನಲ್ಲಿ ಕಟ್ಟುಕಥೆಯಯನ್ನು ಕಟ್ಟಿ ಮಂಡ್ಯ ಸಂಸ್ಕೃತಿಗೆ ಮಸಿ ಬಳಿಯುವ ಮೂಲಕ 3ನೇ ದರ್ಜೆಯ ರಾಜಕಾರಣ ಮಾಡುತ್ತಿದೆ ಎಂದು ಪ್ರಗತಿಪರ ಮುಖಂಡರು ಕಿಡಿಕಾರಿದರು.
ಈ ಕುರಿತು ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ಜಗದೀಶ್ ಕೊಪ್ಪ, ಬಿಜೆಪಿ, ಆರೆಸ್ಸೆಸ್ ನವರು ರಾಜಕಾರಣ ಮಾಡುವುದಾದರೂ ಅಭಿವೃದ್ಧಿ ಹೆಸರಿನಲ್ಲಿ ರಾಜಕಾರಣ ಮಾಡಲಿ, ಆದರೆ ಧರ್ಮ-ಧರ್ಮಗಳ, ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವ ಕೆಲಸ ಮಾಡಬಾರದು. ಮಂಡ್ಯ ಜಿಲ್ಲೆಯೂ ಹಿಂದಿನಿಂದಲೂ ಸೌಹಾರ್ದತೆಗೆ ಹೆಸರಾದ ನೆಲವಾಗಿದೆ. ಇಲ್ಲಿ ಉರಿಗೌಡ ನಂಜೇಗೌಡ ಎಂಬ ಕಲ್ಪಿತ ಪಾತ್ರಗಳನ್ನ ಹುಟ್ಟು ಹಾಕಿ ಜಿಲ್ಲೆಯ ಶಾಂತಿಯನ್ನು ಕದಡಲೂ ಬಿಜೆಪಿ ಸಂಚು ರೂಪಿಸಿದೆ. ಇದಕ್ಕೆ ಜಿಲ್ಲಾಡಳಿತ ಅವಕಾಶ ನೀಡಬಾರದು ಎಂದು ಎಚ್ಚರಿಸಿದರು.
ಮಂಡ್ಯದಲ್ಲಿ ಹಿಂದೂತ್ವ ಕೆಲಸ ಮಾಡುವುದಿಲ್ಲ, ಹಾಗಾಗಿ ಉರಿಗೌಡ ನಂಜೇಗೌಡ ಹೆಸರನ್ನು ಮುನ್ನೆಲೆಗೆ ತರಲಾಗುತ್ತಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಹೇಳಿದ್ದಾರಲ್ಲ ಎಂಬ ಸುದ್ದಿಗಾರರ ಪ್ರಶ್ನೆ ಪ್ರತಿಕ್ರಿಯಿಸಿದ ಪ್ರಗತಿಪರ ಚಿಂತಕ ಎಂ.ವಿ.ಕೃಷ್ಣ, ಆರ್ ಎಸ್ ಎಸ್ ಸಂಘ ಪರಿವಾರದ ಉದ್ದೇಶವಿಷ್ಟೆ, ಮಂಡ್ಯ ನೆಲೆದಲ್ಲಿ ಕೋಮು ಗಲಭೆಯನ್ನು ಹುಟ್ಟು ಹಾಕಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಾಗಿದೆ. ಈಗಾಗಲೇ ಹಿಂದೂತ್ವದ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿಯನ್ನು ಕದಡಲಾಗಿದೆ. ಅದರಂತೆ ಮಂಡ್ಯ ಜಿಲ್ಲೆಯಲ್ಲಿ ಹಾಳು ಮಾಡಲು ಆರ್ ಎಸ್ ಎಸ್ ಸಂಚು ರೂಪಿಸಿದೆ ಎಂದು ದೂರಿದರು.
ಪ್ರಕಾಶಕ ಅಭಿರುಚಿ ಗಣೀಶ್ ಮಾತನಾಡಿ, ಉರೀಗೌಡ, ನಂಜೇಗೌಡ ಇದ್ದರೂ ಎಂಬುದಕ್ಕೆ ಯಾವುದೇ ಅಧಿಕೃತ ದಾಖಲೆಗಳು ಲಭ್ಯವಾಗಿಲ್ಲ. ಆದರೆ ಬಿಜೆಪಿ ಆರ್ ಎಸ್ ಎಸ್ ಮುಖಂಡರು ಕೇವಲ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಹೊರತು, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಗಳನ್ನು ನೀಡುತ್ತಿಲ್ಲ, ಇದರಿಂದಾಗಿ ಅವರು ಸುಳ್ಳು ಹೇಳುತ್ತಿದ್ದಾರೆಂಬುದು ಸಾಬೀತಾಗುತ್ತದೆ ಎಂದು ಹೇಳಿದರು.