ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶ್ರೀರಂಗಪಟ್ಟಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಶ್ರೀರಂಗಪಟ್ಟಣ ಟೌನ್ ಬೂದಿಗುಂಡಿ ಸಮೀಪದ ಲೆಪ್ರೆಸಿ (ಕುಷ್ಠ ರೋಗಿಗಳ) ಕಾಲೋನಿಯ 26 ಮಂದಿಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಶುಕ್ರವಾರ ಹಕ್ಕುಪತ್ರಗಳನ್ನು ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ 2 ದಶಕಗಳಿಂದ ಈ ಸಮಸ್ಯೆಯನ್ನು ಇದುವರೆಗೆ ಆಡಳಿತ ನಡೆಸಿದ ಯಾವ ಜನಪ್ರತಿಯೂ ಬಗೆಹರಿಸಲಿಲ್ಲ, ಅವರಿಗೆ ಜನರ ಕಷ್ಟ ಅರ್ಥವಾಗಿರಲಿಲ್ಲ. ಸಮಾಜ ಸುಧಾರಣೆ ಆಗಬೇಕಾದರೆ ಜನರಿಗೆ ಒಂದಷ್ಟು ಅನುಕೂಲಗಳನ್ನು ಮಾಡುವ ಕೆಲಸಗಳನ್ನು ಮಾಡಿಕೊಡಬೇಕು. ಅದನ್ನು ಬಿಟ್ಟು ಕೇವಲ ಪ್ರಚಾರಕ್ಕಾಗಿ ಓಡಾಡಿದರೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ಇದೇ ಕಾಲೋನಿಯ ಇನ್ನೂ 57 ಮಂದಿಗೆ ಹಕ್ಕುಪತ್ರ ನೀಡಲು ಉದ್ದೇಶಿಸಲಾಗಿದ್ದು, ಅದರ ಕಾರ್ಯ ಪ್ರಗತಿಯಲ್ಲಿದೆ ಮುಂದಿನ ದಿನಗಳಲ್ಲಿ ಅವರಿಗೆ ಹಕ್ಕುಪತ್ರ ನೀಡುತ್ತೇವೆಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಪುರಸಭಾ ಸದಸ್ಯರಾದ ಎಸ್.ಟಿ.ರಾಜು, ಶ್ರೀನಿವಾಸ್, ಸ್ಥಾಯಿ ಸಮಿತಿ ಅಧ್ಯಕ್ಷ ಲಿಂಗರಾಜು, ಉಪಾಧ್ಯಕ್ಷ ನರಸಿಂಹೇಗೌಡ, ಮುಖಂಡರಾದ ಗಂಜಾಂ ಕೃಷ್ಣಪ್ಪ, ಗಂಜಾಂ ಶಿವು, ರವಿ, ಪುರಸಭೆ ಮುಖ್ಯಾಧಿಕಾರಿ ಸಂದೀಪ್, ಎಇಇ ದರ್ಶನ್ ಜೈನ್ ಹಾಗೂ ಇಂಜಿನಿಯರ್ ಶಿವು ಉಪಸ್ಥಿತರಿದ್ದರು