ವಿದ್ಯಾರ್ಥಿಗಳಿಗೆ ಒತ್ತಡ ನೀಡದೇ, ಶಿಕ್ಷಕರು ಚಟುವಟಿಕೆ ಮೂಲಕ ಶಿಕ್ಷಣ ನೀಡಿದರೇ ಕಲಿಕೆಗೆ ಸಹಕಾರಿಯಾಗುತ್ತದೆ ಎಂದು ಆರ್ಟಿಐ ಆಯುಕ್ತ ಎನ್.ಸಿ.ಶ್ರೀನಿವಾಸ್ ತಿಳಿಸಿದರು.
ಮಳವಳ್ಳಿ ಪಟ್ಟಣದ ವೈಭವ ಪ್ಯಾಲೇಸ್ ನಲ್ಲಿ ನಡೆದ ಯುರೋಕಿಡ್ಸ್ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಆಧುನಿಕತೆಗೆ ತಕ್ಕಂತೆ ಶಿಕ್ಷಣ ಬದಲಾವಣೆಯಾಗುತ್ತಾ ಹೋಗುತ್ತಿದೆ, ತಮ್ಮ ಮಕ್ಕಳನ್ನು ಎಲ್ಲಿಗೇ ಸೇರಿಸಬೇಕೆಂಬ ಗೊಂದಲದಲ್ಲಿ ಪೋಷಕರಿದ್ದು, ವಿದ್ಯಾರ್ಥಿ ಗಳಲ್ಲಿಯೂ ಕೂಡ ಅಕ್ಷರ ಕಲಿಯುವಂತೆ ಒತ್ತಡ ಹಾಕಲಾಗುತ್ತಿದೆ ಎಂದರು.
ಯುರೋಪ್ ಮಾದರಿಯಲ್ಲಿ ಚಟುವಟಿಕೆ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕೆಂದ ಅಭಿಲಾಷೆಯೊಂದಿಗೆ ಮಳವಳ್ಳಿಯೂ ಕೂಡ ಯೂರೋ ಕಿಡ್ಸ್ ಶಾಲೆಯನ್ನು ಆರಂಭಿಸಲಾಗಿದೆ, ವಿದ್ಯಾರ್ಥಿಗಳಿಗೆ ಒತ್ತಡ ಹಾಕದೇ ವಿವಿಧ ಚಟುವಟಿಕೆಯಿಂದಲೇ ಅಕ್ಷರವನ್ನು ಕಲಿಸಲಾಗುತ್ತಿದ್ದು, ಆಧುನಿಕ ಯುಗಕ್ಕೆ ಇಂತಹ ಶಿಕ್ಷಣ ಅತ್ಯವಶ್ಯಕವಾಗಿದೆ ಎಂದರು.
ಯುರೋಕಿಡ್ಸ್ ಶಾಲೆಯ ಮುಖ್ಯಸ್ಥ ರಾಜೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಮಕ್ಕಳಿಗೂ ಹೊಸ ತಂತ್ರಜ್ಞಾನದೊಂದಿಗೆ ವಿವಿಧ ಚಟುವಟಿಕೆ ಮೂಲಕ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಯುರೋಕಿಡ್ಸ್ ಶಾಲೆಯನ್ನು ಆರಂಭಿಸಬೇಕೆಂದು ಚಿಂತನೆ ನಡೆಸಿದ ಸಂದರ್ಭದಲ್ಲಿ ಕೋವಿಡ್ನಿಂದಾಗಿ 2 ವರ್ಷ ಶಾಲೆ ಪ್ರಾರಂಭ ಮಾಡಲು ಸಾಧ್ಯವಾಗಿರಲ್ಲ, ನಂತರ ಬೇಸಿಗೆ ಶಿಬಿರದ ಮೂಲಕ ಶಾಲೆಯನ್ನು ಆರಂಭಿಸಿದ್ದು, ವಿದ್ಯಾರ್ಥಿಗಳು ಕೂಡ ನಿರೀಕ್ಷೆಗೂ ಮೀರಿ ಕಲಿಕೆಯಲ್ಲಿ ಮುಂಚೂಣಿಯಲಿದ್ದಾರೆ, ಶಾಲೆಯ ವತಿಯಿಂದ ಕ್ರೀಡೆ, ಯೋಗ, ಸಂಗೀತವನ್ನು ವಿದ್ಯಾರ್ಥಿಗಳಿಗೆ ಹೇಳಿ ಕೊಡಲಾಗುತ್ತಿದೆ, ಪೋಷಕರಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಶ್ರೀಧರ್, ಟಿಎಚ್ಓ ವೀರಭದ್ರಪ್ಪ ಅವರನ್ನು ಅಭಿನಂದಿಸಿ ಗೌರವಿಸಲಾಯಿತು. ವಿದ್ಯಾರ್ಥಿಗಳಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
ಕಾರ್ಯಕ್ರಮದಲ್ಲಿ ರಾಮಕೃಷ್ಣ ದೇವರಾಜು, ಸುರೇಶ್, ಸ್ಪಂದನಾ ಶಾಲೆಯ ಕಾರ್ಯದರ್ಶಿ ಹುಸ್ಕೂರು ಕೃಷ್ಣಮೂರ್ತಿ ಸೇರಿದಂತೆ ಇತರರು ಇದ್ದರು.