ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ವ್ಯಕ್ತಿಯ ಮೇಲೆ ಶಾಸಕರ ಸಂಬಂಧಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಮಳವಳ್ಳಿ ತಾಲ್ಲೂಕಿನ ಕೆಂಭೂತಗೆರೆ ಗ್ರಾಮದ ರಾಮಣ್ಣ ಎಂಬಾತನ ಮೇಲೆ ನಿನ್ನೆ ರಾತ್ರಿ 9 ಗಂಟೆ ಸಮಯದಲ್ಲಿ ಶಾಸಕ ಅನ್ನದಾನಿ ಸಂಬಂಧಿಕ ಕೆ.ಪಿ ಬಸವರಾಜ್ ಹಾಗೂ ಆತನ ಸಹೋದರ ಕೆ.ಪಿ.ಉಮೇಶ್ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ರಾಮಣ್ಣನ ತಲೆ ಹಾಗೂ ಕಿವಿಯ ಭಾಗಕ್ಕೆ ಗಂಭೀರವಾದ ಗಾಯವಾಗಿದ್ದು, ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಳವಳ್ಳಿಯಲ್ಲಿ ಓಎಫ್ ಸಿ ಕೇಬಲ್ ಅಳವಡಿಸುವ ವಿಚಾರವಾಗಿ ಖಾಸಗಿ ಮಾಧ್ಯಮದ ಸ್ಟಿಂಗ್ ಆಪರೇಷನ್ ನಲ್ಲಿ ಒಂದು ಲಕ್ಷ ರೂ. ಲಂಚ ಸ್ವೀಕರಿಸಿದ ಶಾಸಕ ಅನ್ನದಾನಿ ಭ್ರಷ್ಟಾಚಾರದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಾಮಣ್ಣ ಪೋಸ್ಟ್ ಹಾಕಿದ್ದರು. ಈ ಬಗ್ಗೆ ಶಾಸಕ ಅನ್ನದಾನಿಯ ಸಂಬಂಧಿಕ ಬಸವರಾಜ್ ಹಾಗೂ ಆತನ ಸಹೋದರ ಯಾಕೆ ಪೋಸ್ಟ್ ಹಾಕಿದ್ದೀಯಾ ಎಂದು ರಾಮಣ್ಣನನ್ನು ಅವಾಚ್ಯ ಶಬ್ಧಗಳಿಂದ ಬೈದು ಆತನ ಮನೆಗೆ ನುಗ್ಗಿ ಮಾರಾಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ.
ಈ ಬಗ್ಗೆ ಮಳವಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಲ್ಲೆ ನಡೆಸಿದ ಬಸವರಾಜನನ್ನು ಬಂಧಿಸಿರುವ ಪೋಲಿಸರು ಆತನ ಸಹೋದರನ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.