ಶುದ್ಧ ಗಾಳಿ, ಸ್ವಚ್ಛನೀರು ಹಾಗೂ ಪೌಷ್ಟಿಕ ಆಹಾರ ಸೇವಿಸಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.
ಶ್ರೀರಂಗಪಟ್ಟಣ ತಾಲೂಕಿನ ಕೆ ಆರ್ ಸಾಗರ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಬೀಚನಕೊಪ್ಪಲು ಗ್ರಾಮದ ಮಾರಮ್ಮನ ದೇವಸ್ಥಾನದ ಆವರಣದಲ್ಲಿ ತಾಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ಹೊಸ ಉಂಡವಾಡಿ ಆರೋಗ್ಯ ಮತ್ತು ಕ್ಷೇಮ ಕೇಂದ್ರದ ವತಿಯಿಂದ ಏರ್ಪಡಿಸಿದ್ದ “ವಿಶ್ವ ಆರೋಗ್ಯ ದಿನ” ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಆರೋಗ್ಯ ಕೊಂಡುಕೊಳ್ಳುವ ವಸ್ತುವಲ್ಲ, ಹಣ ಇದ್ದವರು ಶ್ರೀಮಂತರಲ್ಲ, ಆರೋಗ್ಯ ಚೆನ್ನಾಗಿದ್ದವರು ಶ್ರೀಮಂತರು. ಹಾಗಾಗಿ ಆರೋಗ್ಯಕ್ಕೆ ಹೆಚ್ಚು ಒತ್ತು ಕೊಡಿ ಮನುಷ್ಯನ ಉತ್ತಮ ರೀತಿಯ ಬದುಕಿಗೆ ಆರೋಗ್ಯ ಅತ್ಯಗತ್ಯವಾಗಿದೆ ಪ್ರತಿಯೊಬ್ಬರು ಆರೋಗ್ಯವಾಗಿರಲು ಉತ್ತಮ ಪರಿಸರ,ಶುದ್ಧ ಕುಡಿಯುವ ನೀರು,ಪರಿಶುದ್ಧವಾದ ಆಹಾರ, ಉತ್ತಮ ಬೆಳಕು, ಉತ್ತಮವಾದ ಜೀವನಶೈಲಿ ಹಾಗೂ ಪ್ರತಿ ನಿತ್ಯ ವ್ಯಾಯಾಮ, ಯೋಗ ಮತ್ತು ಸಮತೋಲನ ಆಹಾರ ಸೇವನೆ ಇವುಗಳನ್ನು ಪ್ರತಿಯೊಬ್ಬರು ದಿನ ನಿತ್ಯದ ದಿನಚರಿಯಲ್ಲಿ ಅಳವಡಿಸಿಕೊಂಡಾಗ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ ಎಂದು ಸಲಹೆ ನೀಡಿದರು.
ಸಮುದಾಯ ಆರೋಗ್ಯ ಅಧಿಕಾರಿ ಚೇತನ್ ಕುಮಾರ್ ಮಾತನಾಡಿ, 75ನೇ ವಿಶ್ವ ಆರೋಗ್ಯ ದಿನಾಚರಣೆ ಆಚರಿಸುತ್ತಿದ್ದೇವೆ, ಜನರಿಗೆ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ “ಎಲ್ಲರಿಗೂ ಆರೋಗ್ಯ”ಎಂಬ ಧ್ಯೇಯ ವಾಕ್ಯದಡಿ ಈ ವರ್ಷ ಆಚರಿಸಲಾಗುತ್ತಿದೆ ತಮ್ಮ ಆರೋಗ್ಯ ತಮ್ಮ ಕೈಯಲ್ಲಿದೆ ಹಾಗಾಗಿ ನಿಯಮಿತವಾಗಿ ಆರೋಗ್ಯ ತಪಾಷಣೆ ಮಾಡಿಸಿಕೊಂಡು ಆರೋಗ್ಯವಂತರಾಗಿರಬೇಕೆಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತ ಮಾಲಿನಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.