ತಾಯಿಯೇ ನಿತ್ಯ ಕಾಣುವ ದೇವರು. ತಾಯಿ ವಾತ್ಸಲ್ಯಕ್ಕೆ ಇಡೀ ಜಗತ್ತೇ ಶರಣಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿ ಚಂದ್ರಶೇಖರ್ ಹೇಳಿದರು.
ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಮಂಡ್ಯದ ಗಾಂಧಿ ಭವನದಲ್ಲಿ ಮಹಾತ್ಮ ಯೋಗ ತರಬೇತಿ ಕೇಂದ್ರ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ತಾಯಂದಿರಿಗೆ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಜಗತ್ತಿನಲ್ಲಿ ಆಸ್ತಿಕರು ದೇವರನ್ನು ನಂಬುತ್ತಾರೆ. ಅತೀವ ಶಕ್ತಿ ಜಗತ್ತನ್ನು ನಿಯಂತ್ರಿಸುತ್ತಿದೆ ಎನ್ನುವುದು ಮನುಷ್ಯರ ನಂಬಿಕೆಯಾಗಿದೆ. ದೇವರನ್ನು ಮೂರ್ತಿ ರೂಪದಲ್ಲಿ ನೋಡಿ, ರಾಮ, ಕೃಷ್ಣ, ಈಶ್ವರ, ವಿಷ್ಣು, ಏಸು, ಅಲ್ಲಹ್ ಹೀಗೆ ಹೆಸರಿಟ್ಟು ಪಾರ್ಥನೆ ಸಲ್ಲಿಸುತ್ತೇವೆ ಎಂದರು.
ದೇವರ ಸ್ಥಾನದಲ್ಲಿ ತಾಯಿ-ತಂದೆ, ಗುರುಗಳನ್ನು ನೋಡುತ್ತೇವೆ, ನುಡಿಮುತ್ತುಗಳಲ್ಲಿ ತಾಯಿಗಿಂತ ದೇವರಿಲ್ಲ, ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬುದು ಲೋಕಾರೂಢಿಯಾಗಿದೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ತಾಯಂದಿರನ್ನು ಗೌರವಿಸಿ ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಅನುಪಮಾ, ಕವಿಯತ್ರಿ ಶ್ವೇತಾ ಸೇರಿದಂತೆ ಅನೇಕ ಯೋಗಾಭ್ಯಾಸಗಾರರು ಪಾಲ್ಗೊಂಡಿದ್ದರು.