ಶ್ರೀರಂಗಪಟ್ಟಣ ತಾಲ್ಲೂಕಿನ ಮರಳಗಾಲ ಗ್ರಾಮದಲ್ಲಿ ಇತ್ತೀಚೆಗೆ ತನ್ನ ಇಬ್ಬರು ಮಕ್ಕಳನ್ನು ಕತ್ತು ಸೀಳಿ ಹತ್ಯೆ ಮಾಡಿದ್ದ ಶ್ರೀಕಾಂತ್ ಎಂಬಾತನನ್ನು ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ತಂಡವು ಈ ಆರೋಪಿಯನ್ನು ಕಲ್ಬುರ್ಗಿ ಜಿಲ್ಲೆಯ ದೇವಲ ಗಾಣಗಪುರ ಗ್ರಾಮದಲ್ಲಿ ಪತ್ತೆಹಚ್ಚಿ ಬಂಧಿಸಿದೆ. ಈತ ಸಾಂಸಾರಿಕ ಕಲಹದ ಹಿನ್ನೆಲೆಯಲ್ಲಿ ತನ್ನ ಹೆಂಡತಿಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ, ತನ್ನ ಇಬ್ಬರು ಮಕ್ಕಳ ಕತ್ತು ಕೊಯ್ದು ಕೊಲೆ ಮಾಡಿರುವುದಾಗಿ ತಿಳಿದು ಬಂದಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಆರೋಪಿಯ ಪತ್ತೆಗಾಗಿ ಮಂಡ್ಯ ಜಿಲ್ಲಾ ಅಪರ ಪೊಲೀಸ್ ಅಧೀಕ್ಷಕ ಈ.ತಿಮ್ಮಯ್ಯ ಮತ್ತು ಶ್ರೀರಂಗಪಟ್ಟಣ ಅಕ್ಷರ ಉಪಾಧೀಕ್ಷಕ ಮುರುಳಿ ಅವರ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯ ಡಿವೈಎಸ್ಪಿ ಡಾ.ಸಂತೋಷ ಚವ್ಹಾಣ, ಬಿ.ಜೆ.ಕುಮಾರ್, ಪೊಲೀಸ್ ಇನ್ಸ್ಪೆಕ್ಟರ್, ರವಿ, ಪಿ.ಎಸ್.ಐ ಮತ್ತು ಸಿಬ್ಬಂದಿಗಳಾದ ವಿ.ಎಸ್.ಮಹದೇವ, ಶ್ರೀನಿವಾಸ ಮೂರ್ತಿ, ಮುತ್ತುರಾಜು, ಪ್ರಸನ್ನ, ಮಲ್ಲಿಕಾರ್ಜುನ, ಶಂಕರ ರಾಠೋಡ, ದಿನೇಶ, ರವೀಂದ್ರ ಅವರುಗಳನ್ನೊಳಗೊಂಡ ತಂಡವನ್ನು ರಚನೆ ಮಾಡಲಾಗಿತ್ತು.
ಘಟನೆ ವಿವರ
ಮೂಲತಃ ಕಲಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗಾಣಗಾಪುರ ಗ್ರಾಮದ ಶ್ರೀಕಾಂತ್ ಎಂಬಾತ ತನ್ನ ಮಕ್ಕಳಾದ ಅದಿತ್ಯ (4) ಅಮೂಲ್ಯ (2) ಅವರನ್ನು ಕೊಲೆ ಮಾಡಿದ್ದಲ್ಲದೇ ಪತ್ನಿ ಲಕ್ಷ್ಮಿಗೂ ಚೂರಿಯಿಂದ ಇರಿದು, ಕಲ್ಲಿನಿಂದ ಜಜ್ಜಿದ್ದ.