ರಾಜ್ಯಕ್ಕೆ ಅಕ್ಕಿ ನೀಡಲು ನಿರಾಕರಿಸುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೂಲಿಕಾರರು ಗಂಜಿ ಕುಡಿದು ಮಂಗಳವಾರ ಮಂಡ್ಯ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೃಷಿ ಕೂಲಿಕಾರರು ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದ ಪ್ರತಿಭಟನಾಕಾರರು, ಒಕ್ಕೂಟ ವ್ಯವಸ್ಥೆಯಲ್ಲಿ ರೂಪುಗೊಂಡಿರುವ ದೇಶದಲ್ಲಿ ಯಾವುದೇ ರಾಜ್ಯಕ್ಕೆ ಒಕ್ಕೂಟ ಸರ್ಕಾರ ತಾರತಮ್ಯ ಮಾಡಬಾರದು, ಕೂಲಿಕಾರರ ಹಸಿವು ಹೋಗಲಾಡಿಸಲು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಅಕ್ಕಿ ಪೂರೈಸಬೇಕು ಎಂದು ಒತ್ತಾಯಿಸಿದರು.
1950ರಲ್ಲಿ ರೂಪಿತಗೊಂಡಿರುವ ಗಣರಾಜ್ಯ ವ್ಯವಸ್ಥೆ ರಕ್ಷಣೆ ಆಗಬೇಕು, ಐಕ್ಯ ಭಾರತ ಉಳಿಯಬೇಕು. ಒಕ್ಕೂಟ ನೀತಿಯಂತೆ ರಾಜ್ಯ ನಿರ್ದೇಶಕ ತತ್ವಗಳನ್ನು ಕೇಂದ್ರ ಸರ್ಕಾರ ಜಾರಿಗೊಳಿಸಬೇಕು. ಆಯಾಯ ರಾಜ್ಯಗಳ ಪಾಲನ್ನ ಸಮರ್ಪಕವಾಗಿ ಹಂಚಿಕೆ ಮಾಡಬೇಕು, ಆ ಮೂಲಕ ಸಂವಿಧಾನದ ರಕ್ಷಣೆಗೆ ಮುಂದಾಗಬೇಕು, ಪಡಿತರ ವಿತರಣೆಗೆ ಅನುಸರಿಸುತ್ತಿರುವ ಸರ್ವರ್ ವ್ಯವಸ್ಥೆಯನ್ನು ರದ್ದುಪಡಿಸಬೇಕು, ಸಮರ್ಪಕವಾಗಿ ಪಡಿತರ ಪೂರೈಸಬೇಕು ಎಂದು ಒತ್ತಾಯಿಸಿದರು.
ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎಂ.ಪುಟ್ಟಮಾದು, ತಾಲೂಕು ಅಧ್ಯಕ್ಷ ಅಮಾಸಯ್ಯ, ಮುಖಂಡರಾದ ರಾಜು, ಅಬ್ದುಲ್ಲಾ, ಸತೀಶ ಮತ್ತಿತರರು ಉಪಸ್ಥಿತರಿದ್ದರು.