ಕಳೆದ 3 ವರ್ಷಗಳಿಂದ ಜಮೀನಿನ ವ್ಯಾಜ್ಯ ನಡೆಯುತ್ತಿದ್ದು ಎದುರಾಳಿ ರಾಜಿ ಸಂಧಾನಕ್ಕೆ ಕರೆದು ಅಕ್ರಮವಾಗಿ ಸಹಿ ಮಾಡಿಸಿಕೊಂಡಿದ್ದಾರೆ ಎಂದು ಮನನೊಂದು ವ್ಯಕ್ತಿಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಾಗಮಂಗಲ ತಾಲ್ಲೂಕಿನ ಕಸಬಾ ಹೋಬಳಿಯ ಸಿಂಗಾರಿಗೌಡನ ಕೊಪ್ಪಲು ಗ್ರಾಮದಲ್ಲಿ ಜರುಗಿದೆ.
ರೈತ ಮೂಡಲಗಿರಿಗೌಡ ವಿಷ ಸೇವನೆ ಮಾಡಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿದೆ. ಪ್ರಕರಣ ಕುರಿತು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮೂಡಲಗಿರಿ ಗೌಡ ಹಾಗೂ ಜಯರಾಮು ಎಂಬುವವರ ನಡುವೆ ಜಮೀನಿನ ವ್ಯಾಜ್ಯ ನ್ಯಾಯಾಲಯದಲ್ಲಿ ನಡೆಯುತ್ತಿತ್ತು. ಎದುರಾಳಿಗಳು ರಾಜೀ ಸಂಧಾನಕ್ಕೆ ಎಂದು ಕರೆದು ಬಲವಂತದಿಂದ ಸಹಿ ಮಾಡಿಸಿಕೊಂಡು ನ್ಯಾಯಾಲಯದಲ್ಲಿ ವ್ಯಾಜ್ಯ ಹಿಂಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ನನ್ನ ಪತಿ ಮೂಡಲಗಿರಿಗೌಡವಿಷ ಸೇವನೆ ಮಾಡಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ. ಈ ಪರಿಸ್ಥಿತಿಗೆ 5 ಜನ ಕಾರಣರೆಂದು ವಿಷ ಸೇವನೆಗೆ ಮುನ್ನ ಪತ್ರವನ್ನು ಬರೆದಿಟ್ಟಿದ್ದಾರೆ. ಆದ್ದರಿಂದ ನಮಗೆ ನ್ಯಾಯ ಕೊಡಿಸಬೇಕೆಂದು ಪತ್ನಿ ಶಶಿಕಲಾ ಹಾಗೂ ಮಗ ಕಾರ್ತಿಕ್ ಅವರು ಒತ್ತಾಯಿಸಿದ್ದಾರೆ.