ಕರ್ನಾಟಕ ಬುದ್ಧ ಧಮ್ಮ ಸಮಿತಿಯು ಮೈಸೂರಿನಲ್ಲಿ ಮೇ 14 ಮತ್ತು 15 ರಂದು ಧಮ್ಮಪದ ಉತ್ಸವ-2022 ಆಯೋಜಿಸಿದೆ ಎಂದು ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವರಾಜ್ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಅವರು, ಭಾರತೀಯ ಬೌದ್ಧ ಮಹಾಸಭಾದ ಸಹಯೋಗದಲ್ಲಿ 2566ನೇ ಬುದ್ಧಪೂರ್ಣಿಮೆ ಅಂಗವಾಗಿ ಸಂಘಟಿಸಿರುವ ಧಮ್ಮಪದ ಉತ್ಸವವು ಮೈಸೂರಿನ ವಿಜಯನಗರ ಒಂದನೇ ಹಂತದ ಡಿ. ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣದಲ್ಲಿನ ಧ್ಯಾನ ಮಂದಿರದಲ್ಲಿ ನಡೆಯಲಿದೆ ಎಂದು ತಿಳಿಸಿದರು.
ಮೇ 14 ರಂದು ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭಗೊಳ್ಳಲಿದೆ. ಈ ಕಾರ್ಯಕ್ರಮಕ್ಕೆ 250 ಮಂದಿಗೆ ಮಾತ್ರ ಪ್ರವೇಶಾವಕಾಶ ಕಲ್ಪಿಸಲಾಗಿದೆ. ಎರಡು ದಿನಗಳಲ್ಲಿ ತಲಾ ಮೂರು ಗೋಷ್ಠಿಗಳು ನಡೆಯಲಿದೆ ಎಂದರು.
ಭಾರತೀಯ ಬೌದ್ಧ ಮಹಾಸಭಾದ ಸದಸ್ಯ ಕೆ.ಆರ್.ಗೋಪಾಲಕೃಷ್ಣ ಮಾತನಾಡಿ, ಭಗವಾನ್ ಬುದ್ಧ ಅವರು ಪ್ರಮುಖವಾಗಿ 423 ವಗ್ಗಗಳನ್ನು ಬೋಧಿಸಿ, ಪ್ರಚಾರ ಮಾಡಿದ್ದಾರೆ. ಇವುಗಳಲ್ಲಿ ಪ್ರಮುಖವಾದ ವಗ್ಗಗಳನ್ನು 9 ಮಂದಿ ಬೌದ್ಧ ಭಂತೇಜಿಗಳು ಉತ್ಸವದಲ್ಲಿ ಬೋಧನೆ ಮಾಡಲಿದ್ದಾರೆ. ಪಾಳಿ ಭಾಷೆಯಲ್ಲಿರುವ ಈ ವಗ್ಗಗಳನ್ನು ಕನ್ನಡಕ್ಕೆ ತರ್ಜುಮೆ ಮಾಡಿ ಪ್ರವಚನ ಮಾಡಲಾಗುತ್ತದೆ ಎಂದು ವಿವರಿಸಿದರು.
ಪೂಜ್ಯ ಮನೋ ರಕ್ಖಿತ ಭಂತೇಜಿ, ಬೋಧಿರತ್ನ ಭಂತೇಜಿ, ಬೋದಿದತ್ತ ಭಂತೇಜಿ, ನ್ಯಾನಲೋಕ ಭಂತೇಜಿ, ಆನಂದ ಭಂತೇಜಿ, ಬುದ್ಧರತ್ನ ಭಂತೇಜಿ, ಧಮ್ಮಪಾಲಾ ಭಂತೇಜಿ, ಬೋಧಿಪ್ರಿಯಾ ಭಂತೇಜಿ, ಗೌತಮಿ ಶೀಲಮಾತಾ ಭಾಗವಹಿಸುವರು ಎಂದು ಅವರು ಹೇಳಿದರು.
ಗೋಷ್ಠಿಯಲ್ಲಿ ಅಂಬೇಡ್ಕರ್ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಕೆ.ಎನ್. ಶಿವಲಿಂಗಯ್ಯ, ಭಾರತೀಯ ಬೌದ್ಧ ಮಹಾಸಭಾದ ಪ್ರೊ.ಕೆ.ಸುಬ್ಬರಾಜು, ಜಿಲ್ಲಾಧ್ಯಕ್ಷ ಕೆ ಅನ್ನದಾನಿ, ಪ್ರಧಾನ ಕಾರ್ಯದರ್ಶಿ ನಾರಾಯಣಸ್ವಾಮಿ, ಕೆ.ಸಿದ್ದಯ್ಯ ಹಾಜರಿದ್ದರು.