ಕೆ.ಆರ್.ಪೇಟೆ ಪಟ್ಟಣದ ಬಸವನಗುಡಿ ಸಮೀಪ ಇರುವ ತೊಗಟವೀರ ಸಮಾಜದ ರಾಮಮಂದಿರದಲ್ಲಿ ಕಡೆ ಆಷಾಢ ಶುಕ್ರವಾರದ ಅಂಗವಾಗಿ ತಾಯಿ ಚಾಮುಂಡೇಶ್ಚರಿ (ಚೌಡೇಶ್ವರಿ) ಅಮ್ಮನವರ ಕರಗ ಮಹೋತ್ಸವವು ವಿಜೃಂಭಣೆಯಿಂದ ನಡೆಯಿತು.
ಕೆ.ಆರ್.ಪೇಟೆ ಪಟ್ಟಣದ ದೇವಿರಮ್ಮಣ್ಣಿ ಕೆರೆಯಿಂದ ಸಾವಿರಾರು ಭಕ್ತಾಧಿಗಳ ನೇತೃತ್ವದಲ್ಲಿ ಬಾಲಕಿಯರು ಕಳಸವನ್ನು ಹೊತ್ತು ಕರಗ ಮಹೋತ್ಸವವನ್ನು ಅದ್ದೂರಿಯಾಗಿ ನಡೆಸಿಕೊಟ್ಟರು. ದೇವರ ಗುಡ್ಡಪ್ಪರ ತಂಡವು ತಾಯಿ ಚಾಮುಂಡೇಶ್ವರಿ ಅಮ್ಮನವರನ್ನ ಕರಗ ಹೊತ್ತಿದ್ದ ಮಕ್ಕಳ ಮೇಲೆ ಬರಮಾಡಿಕೊಂಡಿದ್ದು ವಿಶೇಷವಾಗಿತ್ತು.
ಕೆ.ಆರ್.ಪೇಟೆ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಜಾನಪದ ಕಲಾತಂಡಗಳ ವೈಭವದ ಮೆರವಣಿಗೆ ನಡೆಯಿತು. ರಾಶಿ ನಂಜುಂಡಯ್ಯನ ವಂಶಸ್ಥರು ಹಮ್ಮಿಕೊಂಡಿದ್ದ ಚಾಮುಂಡೇಶ್ವರಿ ಅಮ್ಮನರ ಉತ್ಸವದಲ್ಲಿ ಹಾಗೂ ಪಟ್ಟಣದ ಹೊರವಲಯದ ಹೇಮಗಿರಿ ರಸ್ತೆಯಲ್ಲಿರುವ ಚೌಡೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.
ಸಮಾಜ ಸೇವಕರಾದ ಆರ್.ಟಿ.ಓ.ಮಲ್ಲಿಕಾರ್ಜುನ್ ಅವರು ಕರಗ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿ ನಮ್ಮ ಲೋಕವನ್ನು ಕಾಯುತ್ತಿರುವ ತಾಯಿ ಚೌಡೇಶ್ವರಿ ಅಮ್ಮನವರನ್ನ ಪ್ರಾರ್ಥಿಸಿದರೆ ಕಷ್ಟಗಳು ದೂರಾಗುವ ಜೊತೆಗೆ ಕೈ ಹಿಡಿದ ಕಾರ್ಯದಲ್ಲಿ ಯಶಸ್ಸನ್ನು ಕಾಣಬಹುದಾಗಿದೆ. ಮನುಷ್ಯನಿಗೆ ಬೇಕಾದ ಶಾಂತಿ-ನೆಮ್ಮದಿಯನ್ನು ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಸಾಧ್ಯವಿಲ್ಲ. ಕೇವಲ ದೇವರು, ಧರ್ಮದ ಕಾರ್ಯದಿಂದ ನೆಮ್ಮದಿಯನ್ನು ಪಡೆಯಬಹುದು ಎಂದರು.
ಚಾಮುಂಡೇಶ್ವರಿ ಕರಗ ಮಹೋತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ್, ಉಪಾಧ್ಯಕ್ಷ ಕೆ.ಆರ್.ಪ್ರವೀಣ್, ಕಾರ್ಯದರ್ಶಿ ಅಮರ್, ಖಜಾಂಚಿ ಶಿವರಾಜು, ಮುಖಂಡರಾದ ಹಂಸ ರಮೇಶ್, ಕೆ.ಆರ್.ಚಂದ್ರಶೇಖರ್, ಪಿ.ಎಲ್.ಡಿ ಬ್ಯಾಂಕ್ ಮಾಜಿ ನಿರ್ದೇಶಕ ಕೆ.ಆರ್.ಪುಟ್ಟಸ್ವಾಮಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹೆಚ್.ಆರ್.ಚಂದ್ರಶೇಖರ್, ಪುರಸಭೆ ಮಾಜಿ ಅಧ್ಯಕ್ಷ ಕೆ.ಸಿ.ವಾಸು, ದಾನಿಗಳಾದ ಪರಿಮಳ ನಾಗರಾಜ ಶೆಟ್ಟಿ, ಪುರಸಭಾ ಸದಸ್ಯ ಡಿ.ಪ್ರೇಮಕುಮಾರ್, ವಿದ್ಯಾರ್ಥಿ ಭಂಡಾರ್ ಸುರೇಶ್, ಕೆ.ಎಸ್.ಮಧುಸೂದನ್, ರವಿ ನಂದನ್, ಚಂದ್ರಕಲಾರಮೇಶ್ ಮತ್ತಿತರರು ಭಾಗವಹಿಸಿದ್ದರು.
ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿದ್ದ ಭಕ್ತಾದಿಗಳಿಗೆ ಪ್ರಸಾದವನ್ನು ವಿತರಿಸಲಾಯಿತು. ಹಾಗೆಯೇ ಕೆ.ಆರ್.ಪೇಟೆ ಪಟ್ಟಣದ ರಾಶಿ ನಂಜುಂಡಯ್ಯನ ವಂಶಸ್ಥರಿಂದ ಶ್ರೀ ಚಾಮುಂಡೇಶ್ವರಿ ಅಮ್ಮನವರ ಉತ್ಸವ ಅದ್ದೂರಿಯಾಗಿ ನಡೆಯಿತು.