ಮದ್ದೂರು ತಾಲ್ಲೂಕಿನ ಭಾರತೀನಗರ ಸಮೀಪದ ಅಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ 9.65 ಲಕ್ಷ ಕ್ಕೂ ಹೆಚ್ಚು ನಿವ್ವಳ ಲಾಭಗಳಿಸಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೆ.ಸಿ.ಜೋಗಿಗೌಡ ಪ್ರಶಂಸಿದರು.
ಅಣ್ಣೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ 2022-23 ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಭೆಯಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.
ಮದ್ದೂರು ತಾಲ್ಲೂಕಿನಲ್ಲಿ ಅಣ್ಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬಹಳಷ್ಟು ಹೆಸರು ಮಾಡಿದೆ. ಹಾಗೆಯೇ ಲಾಭಾಂಶವನ್ನು ಸಹ ಪಡೆಯುತ್ತಿದೆ. ಅಧಿಕಾರ ಶಾಶ್ವತವಲ್ಲ, ನಾವು ನೀವೆಲ್ಲರೂ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಬೇಕಾಗಿದೆ. ಆ ಸಂದರ್ಭಗಳಲ್ಲಿ ಹಲವಾರು ತೊಡಕುಗಳು ಸಹ ಉಂಟಾಗುತ್ತವೆ. ಅವುಗಳೆಲ್ಲವನ್ನು ನಿಭಾಯಿಸಿಕೊಂಡು ಕೆಲಸ ಮಾಡಬೇಕೆಂದು ಸಲಹೆ ನೀಡಿದರು. ನಮ್ಮ ಬ್ಯಾಂಕ್ನ ವತಿಯಿಂದ ಹೆಚ್ಚಿನ ರೀತಿಯಲ್ಲಿ ಸೌಲಭ್ಯಗಳನ್ನು ಒದಗಿಸಲು ಪ್ರಾಮಾಣೀಕವಾಗಿ ಕೆಲಸ ಮಾಡುತ್ತೇನೆಂದು ಭರವಸೆ ನೀಡಿದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ ಮಾತನಾಡಿ, ಡಿಸಿಸಿ ಬ್ಯಾಂಕ್ ವತಿಯಿಂದ ರೈತಾಪಿ ವರ್ಗದವರಿಗೆ ಹಲವಾರು ಸೌಲಭ್ಯಗಳನ್ನು ನೀಡಲಾಗುತ್ತಿದೆ. ಸಹಕಾರ ಕೇಂದ್ರಗಳನ್ನು ಉಳಿಸಬೇಕಾದರೆ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿ ಸಂಘಗಳನ್ನು ಅಭಿವೃದ್ದಿಗೊಳಿಸಲು ಮುಂದಾಗಬೇಕೆಂದು ತಿಳಿಹೇಳಿದರು.
ಸದಸ್ಯ ಆರ್.ಸಿದ್ದಪ್ಪ ಮಾತನಾಡಿ, ಈ ಸಹಕಾರ ಸಂಘ ಅಭಿವೃದ್ದಿ ಕಾಣಲು ಸದಸ್ಯರು ಮತ್ತು ಡಿಸಿಸಿ ಬ್ಯಾಂಕ್ ಅಧಿಕಾರಿಗಳಿಂದ ಸಾಧ್ಯವಾಗಿದೆ. ಸಂಘದಿಂದ ಬರುವಂತಹ ಬೆಳೆಸಾಲ, ಆಭರಣ ಸಾಲ, ಸ್ವಸಹಾಯ ಸಂಘಗಳ ಸಾಲ, ವ್ಯಾಪಾರ ಸಾಲ, ರಸಗೊಬ್ಬರ ಮತ್ತು ಪಡಿತರ ವ್ಯವಸ್ಥೆಯನ್ನು ಜನರು ಸದುಪಯೋಗ ಪಡಿಸಿಕೊಂಡು ಅಭಿವೃದ್ದಿಯತ್ತ ಸಾಗಬೇಕೆಂದು ಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಪುಟ್ಟಮಾದು ಅವರು ವಹಿಸಿದ್ದರು. ಇದೇ ವೇಳೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಎಸ್.ರಮೇಶ್ ವಾರ್ಷಿಕ ವರದಿ ಮಂಡಿಸಿದರು.
ಈ ಸಂದರ್ಭದಲ್ಲಿ ಸಂಘದ ನಿದರ್ೇಶಕರಾದ ಡಿ.ಪ್ರಸನ್ನ, ಎ.ಎಲ್.ಜಗದೀಶ್, ರಾಜು, ರಾಜಶೆಟ್ಟಿ, ಅಪ್ಪಾಜಚಾರಿ, ಸುಮ, ಜಯಮ್ಮ, ಮಹದೇವು, ಸಿದ್ದರಾಮಯ್ಯ, ಸಿಇಓ ಎಸ್.ರಮೇಶ್, ಪೂಣರ್ಿಮಾ, ನಾಗೇಶ್, ರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.