ಮಂಡ್ಯದ ಕರ್ನಾಟಕ ಸಂಘವು ವಿಚಾರಗೋಷ್ಠಿ, ಕಾರ್ಯಗಾರ, ಗಮಕವಾಚನ-ವ್ಯಾಖ್ಯಾನ, ಪುಸ್ತಕಗಳ ಪ್ರಕಟಣೆ-ಬಿಡುಗಡೆ ಇವೇ ಮೊದಲಾದ ಹಲವು ಸಾಹಿತ್ಯಕ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಸಂಘದ ಚಟುವಟಿಕೆಗಳನ್ನು ವಿಸ್ತರಿಸುವ ಹಾಗೂ ಹೆಚ್ಚೆಚ್ಚು ಮಹಿಳೆಯರನ್ನು, ವಿದ್ಯಾರ್ಥಿಗಳನ್ನು ಸಕ್ರಿಯವಾಗಿ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸುವ ಉದ್ದೇಶದಿಂದ ಮಹಿಳಾ ಘಟಕವನ್ನು ಸ್ಥಾಪಿಸಲಾಗಿದೆ.
ಈ ಘಟಕವು ‘ಕಾವ್ಯಾನು ಸಂಧಾನ’ಎಂಬ ಶೀರ್ಷಿಕೆಯಲ್ಲಿ ಜನಪದ ಕಾವ್ಯ, ಹಳಗನ್ನಡ, ಹೊಸಗನ್ನಡ, ಕಾವ್ಯ, ಕವಿತೆಯ ಓದು, ವ್ಯಾಖ್ಯಾನ, ಸಂವಾದದ ಮೂಲಕ ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಕಾವ್ಯದ ಬಗ್ಗೆ ಅಭಿರುಚಿ ಮೂಡಿಸುವ ,ಆಸಕ್ತಿ ಬೆಳೆಸುವ, ಕಾವ್ಯ,ಕವಿತೆಯ ವಿವಿಧ ಆಯಾಮಗಳನ್ನು ಕಾಣಿಸುವ ಆಶಯವನ್ನು ಹೊಂದಿದೆ.
ಕರ್ನಾಟಕ ಸಂಘದ ಆವರಣದಲ್ಲಿರುವ ಕೆ ವಿ ಶಂಕರಗೌಡ ಶತಮಾನೋತ್ಸವ ಸಭಾಂಗಣದಲ್ಲಿ ‘ಕಾವ್ಯಾನು ಸಂಧಾನ’ ಸಂಚಿಕೆ-3 ರ ಕಾರ್ಯಕ್ರಮದಲ್ಲಿ ಪ್ರೊ. ಚಂದ್ರಮ್ಮ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು: ಬೇಂದ್ರೆಯವರ “ಮೂಡಲ ಮನೆಯ ಮುತ್ತಿನ ನೀರಿನ ಎರಕಾವ ಹೋಯ್ದ”… ಕವಿತೆ ಎಷ್ಟು ಸೊಗಸಾದದ್ದು! ಹಾಗೆಯೇ ‘ಬೆಳಗು ಜಾವ’ ಕವಿತೆಯ ಏಳು ಚಿನ್ನ, ಬೆಳಗಾಯಿತು ಅಣ್ಣ, ಮೂಡಲವೂ ತೆರೆಯ ಕಣ್ಣ. ನಕ್ಷತ್ರ ಜಾರಿ, ತಮವೆಲ್ಲ ಸೋರಿ, ಮಿಗಿಲಹುದು ಬಾನಬಣ್ಣ”ಎಂದು ಹೇಳುವ ಕವಿ ಬೇಂದ್ರೆ ಯುವ ಜನತೆ ಅಮೂಲ್ಯವಾದ ಜೀವನವನ್ನು ವ್ಯರ್ಥ ಮಾಡದೆ ಸಮಾಜಮುಖಿ ಬದುಕಿಗೆ ಸಜ್ಜಾಗಬೇಕು ಎಂದು ಕರೆ ನೀಡಿದ್ದಾರೆ ಎಂದರು.
ಹಾಗೆಯೇ ಮಲೆ ಮಹದೇಶ್ವರ ಕಾವ್ಯವು ಜನಪದರ ಬದುಕಿನ ಕಾಯಕ ತತ್ವದ ಫಲವಾಗಿದ್ದು ಜನರ ಬದುಕಿನ ಆಚರಣೆ ಜೀವನದ ಸತ್ವಗಳನ್ನು ಮುಂದಿನ ತಲೆಮಾರಿಗೆ ಮಹಾಕಾವ್ಯದ ರೂಪದಲ್ಲಿ ಕಟ್ಟಿಕೊಡುತ್ತದೆ ಎಂದು ಮಾತನಾಡುತ್ತಾ ಕಾವ್ಯಾನು ಸಂಧಾನ ಕಾರ್ಯಕ್ರಮವು ನಿರಂತರವಾಗಿ ನಡೆಯಲಿ ಇದರಿಂದ ಸ್ವಸ್ತ ಸಮಾಜದ ನಿರ್ಮಾಣ ಸಾಧ್ಯವಾಗುತ್ತದೆ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಡಾ. ಬಿಎಸ್ ಸುದೀಪ್ , ಪ್ರೊ.ನಾಗರಾಜು,ಡಾ. ಅನಿತಾ ಎಂ.ಎಸ್, ಡಾ.ಎನ್.ಎಸ್.ದೇವಿಕ, ಉಪನ್ಯಾಸಕರಾದ ಚಂದ್ರಕಲಾ, ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ನಾಗರೇವಕ್ಕ ಉಪಸ್ಥಿತರಿದ್ದರು.